ಕೊರೊನಾ ವೈರಸ್; ರಾಜ್ಯದಲ್ಲಿ ಆರೋಗ್ಯ ಸಚಿವರ ಕ್ರಮಗಳೇನು?
ಮೈಸೂರು, ಫೆಬ್ರವರಿ 03: ದಿನೇ ದಿನೇ ಆತಂಕ ಹೆಚ್ಚಿಸಿರುವ ಕೊರೊನಾ ವೈರಸ್ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿದ್ದಾರೆ. ಕೊರೊನಾ ವೈರಸ್ ಹರಡದಂತೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, "ರಾಜ್ಯಕ್ಕೆ ವಿದೇಶದಿಂದ ಬಂದ 44 ಮಂದಿ ಪ್ರವಾಸಿಗರ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 29 ರಕ್ತದಲ್ಲಿ ಕೊರೊನಾ ಶಂಕೆ ಇಲ್ಲ ಎಂಬ ವರದಿ ಬಂದಿದೆ. ಉಳಿದವರ ರಕ್ತ ಪರೀಕ್ಷೆ ನಡೆಯುತ್ತಿದೆ" ಎಂದರು.
ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, ಹತ್ತು ಹಾಸಿಗೆವುಳ್ಳ ವಾರ್ಡ್ ಗಳನ್ನು ಆಸ್ಪತ್ರೆಗಳಲ್ಲಿ ಸಿದ್ಧಗೊಳಿಸಲಾಗಿದೆ. ಇದುವರೆಗೂ ರಾಜ್ಯದಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಔಷಧಿಯನ್ನು ಹೊರ ದೇಶದಿಂದಲೂ ತರಿಸಲು ಸಿದ್ಧರಿದ್ದೇವೆ. ರೋಗಿಗಳ ಚಿಕಿತ್ಸಾ ವೆಚ್ಚ ಬರಿಸಲು ಸರ್ಕಾರ ಸಿದ್ಧವಿದೆ ಎಂದರು.

ಈ ರೋಗಕ್ಕೆ ಆಯುರ್ವೇದದಲ್ಲಿ ಔಷಧವಿದೆ. ವಿಮಾನ ನಿಲ್ದಾಣಗಳಿಗೆ ಚೀನಾದಿಂದ ಬರುವ ಪ್ರವಾಸಿಗರನ್ನು ಪರೀಕ್ಷೆ ಮಾಡಿ ರಾಜ್ಯಕ್ಕೆ ಬಿಡಲಾಗುವುದು. ಈ ವೈರಸ್ ಬಗ್ಗೆ ಯಾರು ಆತಂಕ ಪಡಬೇಕಾಗಿಲ್ಲ ಎಂದರು
ಇನ್ನು ಡಿಸಿಎಂ ಹುದ್ದೆಯ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, "ಈ ಕುರಿತು ನಾನು ಮಾತನಾಡುವುದಿಲ್ಲ. ಈಗ ಅದರ ಬಗ್ಗೆ ಮಾತನಾಡಿ ಪಕ್ಷಕ್ಕೆ, ನಾಯಕರಿಗೆ ಮುಜುಗರ ತರಲು ಬಯಸುವುದಿಲ್ಲ. ನಾನು ರಾಷ್ಟ್ರೀಯ ಪಕ್ಷದಲ್ಲಿ ಇರುವವನು. ಪಕ್ಷದ ವರಿಷ್ಠರು ತಗೆದುಕೊಳ್ಳುವ ಕ್ರಮಕ್ಕೆ ನಾನು ಬದ್ಧನಾಗಿರುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾವಿಲ್ಲ. ನಾವೆಲ್ಲರು ಒಗ್ಗಟ್ಟಿನಿಂದ ಇದ್ದೇವೆ" ಎಂದಷ್ಟೇ ಹೇಳಿದರು.












Click it and Unblock the Notifications