Get Updates
Get notified of breaking news, exclusive insights, and must-see stories!

ನರಸಿಂಹರಾಜ ಕ್ಷೇತ್ರದಲ್ಲಿ ‘ಕೈ’ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಎಸ್‌ಡಿಪಿಐ..?

ಮೈಸೂರು, ಜನವರಿ 16: ಮೈಸೂರಿನಲ್ಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ನರಸಿಂಹರಾಜ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಇದನ್ನು ಭೇದಿಸುವ ಪ್ರಯತ್ನವನ್ನು ಜೆಡಿಎಸ್ ಮತ್ತು ಬಿಜೆಪಿ ಮಾಡುತ್ತಲೇ ಬಂದಿದ್ದು, ಆದರೆ ಅದು ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಕ್ಷೇತ್ರದಲ್ಲಿ ಎಸ್‌ಡಿಪಿಐ ನಿಧಾನವಾಗಿ ಪ್ರಾಬಲ್ಯ ಸಾಧಿಸುವತ್ತ ಹೆಜ್ಜೆಯಿಟ್ಟಿರುವುದು ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಮಗ್ಗುಲಮುಳ್ಳಾಗುವ ಸಾಧ್ಯತೆ ಹೆಚ್ಚಾಗಿದೆ.

ಜೆಡಿಎಸ್ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಮತಗಳನ್ನು ಸೆಳೆಯುವ ಕೆಲಸವನ್ನು ರಾಜ್ಯದಲ್ಲಿ ಮಾಡುತ್ತಿದ್ದರೂ, ಈ ಕ್ಷೇತ್ರದಲ್ಲಿ ಅದು ಸಾಧ್ಯವಾಗಿಲ್ಲ. ಉಳಿದಂತೆ ಬಿಜೆಪಿಗೆ ಬರಬೇಕಾದ ಮತಗಳು ಬರುತ್ತಿದ್ದರೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಹೆಚ್ಚಿರುವ ಕಾರಣ ಗೆಲುವು ಸಾಧ್ಯವಾಗುತ್ತಿಲ್ಲ. ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವುದರಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಸುಲಭ ಜಯ ಎನ್ನುವುದು ಕ್ಷೇತ್ರದ ರಾಜಕೀಯ ಇತಿಹಾಸವನ್ನು ನೋಡಿದರೆ ಗೊತ್ತಾಗಿ ಬಿಡುತ್ತದೆ.

ಇಷ್ಟಕ್ಕೂ ಈ ಕ್ಷೇತ್ರದ ಬಹುತೇಕ ಪ್ರದೇಶಗಳಲ್ಲಿ ಬಡವರೇ ತುಂಬಿದ್ದು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ಗೆ ಸ್ಪರ್ಧಿಯಾಗಿ ಕ್ಷೇತ್ರದಲ್ಲಿ ಎಸ್‌ಡಿಪಿಐ ಬೆಳೆಯುತ್ತಿದೆ. ಅದು ತಳಮಟ್ಟದಿಂದ ಸಂಘಟನೆಯಾಗುತ್ತಿದೆ. ಅದು ಪ್ರಬಲವಾದಷ್ಟು ಅದರ ಪರಿಣಾಮಗಳು ಕಾಂಗ್ರೆಸ್ ಮೇಲೆ ಬೀರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಬಾರಿ ಎಸ್‌ಡಿಪಿಐ ಕಾಂಗ್ರೆಸ್‌ಗೆ ಸ್ಪರ್ಧೆ ನೀಡಿದರೂ ಅಚ್ಚರಿಯಿಲ್ಲ. ಜೊತೆಗೆ ಮೊದಲಿಗೆ ಹೋಲಿಸಿದರೆ ಕಾಂಗ್ರೆಸ್ ಕ್ಷೇತ್ರದಲ್ಲಿ ಮತಕ್ಕಾಗಿ ಶ್ರಮ ಪಡಲೇಯಬೇಕಾಗಿದೆ. ಕಾರಣ ಜೆಡಿಎಸ್ ಕೂಡ ಮತಸೆಳೆಯುವ ತಂತ್ರ ನಡೆಸಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿದರೆ ಒಂದಷ್ಟು ಮತಗಳು ಜೆಡಿಎಸ್ ಬಗಲಿಗೆ ಬಿದ್ದರೂ ಅಚ್ಚರಿಯಿಲ್ಲ.

ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧಿಪತ್ಯ

ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧಿಪತ್ಯ

ಹಿಂದುತ್ವದ ಜಪ ಮಾಡುತ್ತಾ ಹಿಂದೂ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಅದರಾಚೆಗೆ ಇತರೆ ಸಮುದಾಯದ ಮತಗಳನ್ನು ಸೆಳೆಯುತ್ತಾ ಎನ್ನುವುದು ಕುತೂಹಲಕಾರಿಯಾಗಿದೆ. ಇಲ್ಲಿನ ಚುನಾವಣಾ ಇತಿಹಾಸವನ್ನು ನೋಡಿದರೆ 1994ರಲ್ಲಿ ಒಮ್ಮೆ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಇ.ಮಾರುತಿರಾವ್ ಪವಾರ್ ಅವರು ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದರು. ಅದನ್ನು ಹೊರತು ಪಡಿಸಿದರೆ, 1957 ಮಹಮದ್ ಸೇಠ್ ಪಕ್ಷೇತರರಾಗಿ, 1962 ಬಿ.ಕೆ.ಪುಟ್ಟಯ್ಯ ಪಿಎಸ್‌ಪಿಯಿಂದ ಸ್ಪರ್ಧಿಸಿದ್ದರೆ 1967 ಅಜೀಜ್ ಸೇಠ್ ಎಸ್‌ಎಸ್‌ಪಿಯಿಂದ ಗೆಲುವು ಸಾಧಿಸಿದ್ದರು. ಬಳಿಕ ಇದೇ ಅಜೀಜ್ ಸೇಠ್ ಅವರು 1983ರಲ್ಲಿ ಜನತಾ ಪಕ್ಷದಿಂದ ಗೆಲುವು ಸಾಧಿಸಿದ್ದರು. 1985 ಮುಕ್ತಾರುನ್ನಿಸಾ ಬೇಗಂ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. ಮತ್ತೆ ಕಾಂಗ್ರೆಸ್‌ಗೆ ಸೇರಿದ ಅಜೀಜ್ ಸೇಠ್ ಅವರು 1989 ಗೆಲುವು ಕಂಡರು. ಆದರೆ 1994ರಲ್ಲಿ ಬಿಜೆಪಿಯ ಮಾರುತಿಪವಾರ್ ಗೆಲುವು ಸಾಧಿಸಿದ್ದಾರೆ.

ಗೆಲುವಿನ ನಾಗಾಲೋಟದಲ್ಲಿ ತನ್ವೀರ್ ಸೇಠ್

ಗೆಲುವಿನ ನಾಗಾಲೋಟದಲ್ಲಿ ತನ್ವೀರ್ ಸೇಠ್

1999ರಲ್ಲಿ ಮತ್ತೆ ಅಜೀಜ್ ಸೇಠ್ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಅವರ ನಿಧನದ ನಂತರ ಪುತ್ರ ತನ್ವೀರ್ ಸೇಠ್ ಅವರು ಕಾಂಗ್ರೆಸ್ ನಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದುವರೆಗೆ 16 ಚುನಾವಣೆಗಳು ನಡೆದಿದ್ದು, 11ರಲ್ಲಿ ಅಜೀಜ್ ಸೇಠ್, ತನ್ವೀರ್ ಸೇಠ್ ಅವರೇ ಗೆದ್ದಿದ್ದಾರೆ. ಮುಸಲ್ಮಾನರೊಂದಿಗೆ ಅಲ್ಪಸಂಖ್ಯಾತ, ಹಿಂದುಳಿದ ಮತಗಳೂ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಗೆಲುವು ಸುಲಭವಾಗುತ್ತಿದೆ. ಆದರೆ ಜೆಡಿಎಸ್ ಖಾತೆಯನ್ನೇ ತೆರೆದಿಲ್ಲ ಎನ್ನುವುದೇ ವಿಶೇಷವಾಗಿದೆ.

ಕ್ಷೇತ್ರದಲ್ಲಿ ಎಸ್‌ಡಿಪಿಐ ಸಂಘಟನೆ

ಕ್ಷೇತ್ರದಲ್ಲಿ ಎಸ್‌ಡಿಪಿಐ ಸಂಘಟನೆ

ನರಸಿಂಹರಾಜ ಕ್ಷೇತ್ರದಲ್ಲಿ ಮೊದಲ ಚುನಾವಣೆ ನಡೆದಿದ್ದು 1952ರಲ್ಲಿ. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಮರಿಯಪ್ಪ ಜಯಭೇರಿ ಬಾರಿಸಿದರು. 1957ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಹಮದ್ ಸೇಠ್ ಗೆಲುವು ಸಾಧಿಸಿದರೆ, 1962ರ ಚುನಾವಣೆಯಲ್ಲಿ ಪಿಎಸ್‌ಪಿಯ ಬಿ.ಕೆ.ಪುಟ್ಟಯ್ಯ ಗೆದ್ದು ಬೀಗಿದ್ದರು. 1967ರಲ್ಲಿ ಉತ್ತರ ಕ್ಷೇತ್ರದಿಂದ ಪ್ರತ್ಯೇಕಗೊಂಡು ನರಸಿಂಹರಾಜ ಕ್ಷೇತ್ರವಾದ ಬಳಿಕ ಕ್ಷೇತ್ರದಲ್ಲಿ ಅಜೀಜ್ ಸೇಠ್ ಪರ್ವ ಆರಂಭವಾಯಿತು. ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಅಜೀಜ್ ಸೇಠ್ ಗೆಲುವು ಕಂಡರು. ನಂತರ 1972ರಲ್ಲಿ ಕಾಂಗ್ರೆಸ್‌ನಿಂದ, 78ರಲ್ಲಿ ಕಾಂಗ್ರೆಸ್ ಐನಿಂದ, 1983ರಲ್ಲಿ ಜನತಾಪಕ್ಷದಿಂದ ಅವರೇ ಆಯ್ಕೆಯಾದರು. 1985ರಲ್ಲಿ ಮುಕ್ತಾರುನ್ನೀಸಾ ಬೇಗಂ ಆಯ್ಕೆಯಾದರೆ, 1989ರಲ್ಲಿ ಮತ್ತೆ ಸ್ಪರ್ಧಿಸಿ ಅಜೀಜ್‌ಸೇಠ್ ಗೆದ್ದರು 1994ರಲ್ಲಿ ಬಿಜೆಪಿ ಮಾರುತಿರಾವ್ ಪವಾರ್ ಗೆದ್ದರು, ಅಜೀಜ್ ಸೇಠ್ ನಿಧರಾದ ಬಳಿಕ ತನ್ವೀರ್ ಸೇಠ್ ಗೆಲುವಿನ ಕುದುರೆ ಏರಿ ಸಾಗುತ್ತಿದ್ದಾರೆ.

2000 ಇಸವಿಯಲ್ಲಿ ತಮ್ಮ ತಂದೆಯ ನಿಧನದಿಂದ ತೆರವಾದ ಸ್ಥಾನ ತುಂಬಿದ ತನ್ವೀರ್‌ಸೇಠ್ ಇದುವರೆಗೆ ಒಂದು ಉಪಚುನಾವಣೆ ಸೇರಿದಂತೆ 5 ಚುನಾವಣೆಗಳನ್ನು (2002, 2004, 2008, 2013, 2018) ಎದುರಿಸಿದ್ದು ಎಲ್ಲಾ ಚುನಾವಣೆಗಳಲ್ಲೂ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡುವುದು ಖಚಿತ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಮತ್ತು ಬಿಜೆಪಿಗಿಂತ ಎಸ್‌ಡಿಪಿಐ ಪ್ರಬಲ ವಿರೋಧಿಯಾಗಿದೆ. ಮುಸ್ಲಿಂ ಮತ ಸೆಳೆಯಲು ಎಸ್‌ಡಿಪಿಐ ಮುಂದಾಗುತ್ತಿದ್ದು, ಒಂದು ವೇಳೆ ಅಂದುಕೊಂಡಂತೆ ಆದರೆ ಕಾಂಗ್ರೆಸ್ ಗೆ ಭವಿಷ್ಯದಲ್ಲಿ ಕಷ್ಟವಾಗುವ ಸಾಧ್ಯತೆಯಿದೆ.

ಎಸ್‌ಡಿಪಿಐನಿಂದ ಭಾರೀ ಪೈಪೋಟಿ ಸಾಧ್ಯತೆ

ಎಸ್‌ಡಿಪಿಐನಿಂದ ಭಾರೀ ಪೈಪೋಟಿ ಸಾಧ್ಯತೆ

ಕ್ಷೇತ್ರದಲ್ಲಿ ಎಲ್ಲ ಸಮುದಾಯದವರು ಶಾಸಕ ತನ್ವೀರ್ ಸೇಠ್ ಅವರನ್ನು ಬೆಂಬಲಿಸುತ್ತಿದ್ದಾರೆ. ಕಾರಣ ಕ್ಷೇತ್ರ ಸೂಕ್ಷ್ಮ ಪ್ರದೇಶವಾಗಿದ್ದರೂ ಇತ್ತೀಚೆಗಿನ ವರ್ಷಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಾರೆ. ಮತ್ತು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರ ಬಗೆಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯಗಳಿವೆ. ಇದೆಲ್ಲದರ ನಡುವೆ ಎಸ್ ಡಿಪಿಐನಿಂದ ಅಬ್ದುಲ್ ಅವರು ಕಣಕ್ಕಿಳಿಯಲಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಯಾರನ್ನು ಕಣಕ್ಕಿಳಿಸುತ್ತದೆ ಎನ್ನುವುದರ ಮೇಲೆ ಮುಂದಿನ ರಾಜಕೀಯ ಜಿದ್ದಾಜಿದ್ದಿಗೆ ಕ್ಷೇತ್ರ ವೇದಿಕೆಯಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+