Get Updates
Get notified of breaking news, exclusive insights, and must-see stories!

'ಮೈಸೂರು ಕಸಾಪ ಭ್ರಷ್ಟಚಾರದ ತನಿಖೆ ಬಳಿಕ ಸಮ್ಮೇಳನ ನಡೆಯಲಿ'

ಮೈಸೂರು, ಅಕ್ಟೋಬರ್ 6: ಸಾಂಸ್ಕೃತಿಕ ನಗರಿ ಮೈಸೂರು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥ್ಯ ವಹಿಸಿಕೊಂಡಿದೆ. ಸದ್ಯ 'ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭ್ರಷ್ಟರ ಬೀಡಾಗಿದ್ದು ಲಕ್ಷಾಂತರ ಹಣ ದುರುಪಯೋಗ ನಡೆದಿದೆ. ಮೊದಲಿಗೆ ಭ್ರಷ್ಟಾಚಾರದ ತನಿಖೆ ನಡೆಸಿ ಬಳಿಕ ಸರ್ಕಾರ ಸಮ್ಮೇಳನ ನಡೆಸಲಿ,' ಎಂದು ಸಾಹಿತಿ ಬನ್ನೂರು ರಾಜು ಒತ್ತಾಯಿಸಿದ್ದಾರೆ.

'ಒನ್ಇಂಡಿಯಾ ಕನ್ನಡ'ದ ಜತೆ ಮಾತನಾಡಿದ ಅವರು, "83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ನಗರದಲ್ಲಿ ನಡೆಸಲು ನಿರ್ಧರಿಸಿರುವುದು ವಿಶೇಷವಾಗಿ ಮೈಸೂರಿಗರು ಹೆಮ್ಮೆಪಡುವ ವಿಷಯವಾಗಿದೆ. ಆದರೆ ಇದರ ಆತಿಥ್ಯ ವಹಿಸುತ್ತಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭ್ರಷ್ಟರ ಬೀಡಾಗಿದ್ದು ಲಕ್ಷಾಂತರ ಹಣ ದುರುಪಯೋಗವೂ ಸೇರಿದಂತೆ ಅನೇಕ ಅವ್ಯವಹಾರಗಳಲ್ಲಿ ತೊಡಗಿದೆ," ಎಂದು ಆರೋಪಿಸಿದ್ದಾರೆ.

Sahitya Sammelana should be convened after a Mysuru Kasapa corruption investigation – Bannur Raju

"ಭ್ರಷ್ಟಾಚಾರದ ಕಾರಣಕ್ಕೆ ಕಳೆದ ಜುಲೈ ತಿಂಗಳಲ್ಲೇ ತರಾತುರಿಯಲ್ಲಿ ಸಮ್ಮೇಳನವನ್ನು ನಡೆಸಲು ಪರಿಷತ್ತು ಮುಂದಾದಾಗ ಪ್ರಜ್ಞಾವಂತ ನಾಗರಿಕರು, ಸಾಹಿತಿಗಳು, ಕನ್ನಡ ಸಂಘ ಸಂಸ್ಥೆಗಳು ಇದನ್ನು ವಿರೋಧಿಸಿ ಬೃಹತ್ ಸಭೆ ನಡೆಸಿದ್ದವು. ಮೊದಲು ಪರಿಷತ್ತಿನ ಭ್ರಷ್ಟಾಚಾರದ ತನಿಖೆ ನಡೆಸಿ ಆನಂತರ ಸಮ್ಮೇಳನ ನಡೆಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಜತೆಗೆ ಸರ್ಕಾರಿ ನೌಕರರಾಗಿದ್ದು ಪರಿಷತ್ತಿನ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಜಿಲ್ಲಾ ಕಸಪಾ ಅಧ್ಯಕ್ಷ ವೈ.ಡಿ.ರಾಜಣ್ಣ ಅವರನ್ನು ಅಮಾನತುಪಡಿಸಿ ಪರಿಷತ್ತಿಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕೆಂಬ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿತ್ತು," ಎಂದು ಬನ್ನೂರು ರಾಜು ವಿವರ ನೀಡಿದ್ದಾರೆ.

ಇದಕ್ಕೆ ಸ್ಪಂದಿಸಿದ ಸರ್ಕಾರ ಕಳೆದ ಜುಲೈನಲ್ಲಿ ಪರಿಷತ್ತು ನಡೆಸಲು ಉದ್ದೇಶಿಸಿದ್ದ ಸಮ್ಮೇಳನವನ್ನು ರದ್ದು ಪಡಿಸಿತ್ತು. ಸ್ವತಃ ಜಿಲ್ಲಾಧಿಕಾರಿಗಳೇ ಪರಿಷತ್ತಿನ ಅವ್ಯವಹಾರಗಳ ಬಗ್ಗೆ ಕ್ರಮ ಕೈಗೊಂಡು ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದರು ಎಂಬುದಾಗಿ ಸಾಹಿತಿಗಳು ತಿಳಿಸಿದ್ದಾರೆ.

ಆದರೆ, ಈಗ ಇದ್ದಕ್ಕಿದ್ದಂತೆ ಕನಿಷ್ಟ ಒಂದು ಸಭೆಯನ್ನೂ ಮೈಸೂರಿನಲ್ಲಿ ಕರೆಯದೆ ಏಕಾಏಕಿ ನವೆಂಬರ್ 24, 25, 26ರಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದಾಗಿ ಪರಿಷತ್ತು ಸ್ವಯಂ ಘೋಷಿಸಿಕೊಂಡಿದೆ. ಇದಕ್ಕೆ ಸಾರ್ವಜನಿಕರ, ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ, ಸಾಹಿತಿಗಳ, ಕಲಾವಿದರ ಸಹಕಾರ ಬೇಡವೇ? ಸರ್ಕಾರ ಮತ್ತು ಸಾರ್ವಜನಿಕರ ದುಡ್ಡು ಮಾತ್ರ ಬೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಮೈಸೂರಿಗೆ ಮೈಸೂರೇ ಈಗ ದಸರಾ ಹಾಗೂ ದೀಪಾವಳಿಯ ಸಡಗರದಲ್ಲಿ ಮುಳುಗಿದೆ. ಒಂದಲ್ಲ ಅಂತ ನಾಲ್ಕು ಕವಿಗೋಷ್ಠಿಗಳು, ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳು, ಸಂಭ್ರಮೋಲ್ಲಾಸದಿಂದ ಜರುಗಿವೆ. ದಸರಾ ವಸ್ತು ಪ್ರದರ್ಶನದಲ್ಲಿ ಕಲೆ, ಸಾಹಿತ್ಯ, ಸಂಗೀತ ಒಳಗೊಂಡಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಕ್ಟೋಬರ್ ತಿಂಗಳ ಕೊನೆ ತನಕವೂ ಮುಂದುವರಿಯುತ್ತದೆ. ನಂತರ ನವೆಂಬರ್ ಮಾಸ ಪೂರ್ತಿ ಕನ್ನಡ ರಾಜ್ಯೋತ್ಸವದ ಸಂಭ್ರಮ, ಹೀಗಿರುವಾಗ ಇದರ ನಡುವೆ ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಎಷ್ಟು ಸರಿ? ಎಂಬುದು ಬನ್ನೂರು ರಾಜು ಅವರ ಪ್ರಶ್ನೆ.

ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಾಹಿತ್ಯ ಸಮ್ಮೇಳನ ಸೂಕ್ತ

ಇನ್ನು ಡಿಸೆಂಬರ್ ತಿಂಗಳಲ್ಲಿ ಇಡೀ ಕನ್ನಡನಾಡೇ ಆಕರ್ಷಿಸುವಂತೆ ನೇರವಾಗಿ ಸರ್ಕಾರದ ವತಿಯಿಂದ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಜರುಗುತ್ತಿದೆ. ಫೆಬ್ರವರಿಯಲ್ಲಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕದ ಮಹಾ ಮಹೋತ್ಸವವಿದೆ. ಇವೆಲ್ಲವೂ ಕನ್ನಡ ನಾಡಿನ ಬಹುಮುಖ್ಯ ಉತ್ಸವಗಳೇ. ಹಾಗಾಗಿ ಇವೆಲ್ಲ ಆಚರಣೆಗಳೂ ಮುಗಿದ ನಂತರ ಮುಂದಿನ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದು ಅತ್ಯಂತ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಪೂರ್ವಾಗ್ರಹ ಬಿಟ್ಟು ಪ್ರಜ್ಞಾವಂತಿಕೆಯಿಂದ ಯೋಚಿಸಲಿ. ಸರ್ಕಾರ ಕೂಡ ಯಾವುದೇ ಕಾರಣಕ್ಕೂ ವಿಶ್ವ ಕನ್ನಡ ಸಮ್ಮೇಳನಕ್ಕೂ ಮುನ್ನ ಯಾರದೋ ಸ್ವಾರ್ಥಕ್ಕೆ ನವೆಂಬರ್‍ನಲ್ಲಿ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲು ಅವಕಾಶ ಮಾಡಿಕೊಡಬಾರದು. ಅಂತೆಯೇ ಸಮ್ಮೇಳನಕ್ಕೂ ಮೊದಲು ಇದರ ಆತಿಥ್ಯ ವಹಿಸುತ್ತಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದುವರೆಗೆ ನಡೆದಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆಯೂ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+