ಮೀಸಲಾತಿ ಬಡ್ತಿ ಹಿಂಪಡೆತ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ
ರಾಜಕೀಯ, ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅವಶ್ಯವಾಗಿದೆ ಎಂದು 'ಮೀಸಲಾತಿ ಸಂರಕ್ಷಣಾ ಸಮಿತಿ' ಪ್ರತಿಭಟನಾಕಾರರು ಮೈಸೂರಿನಲ್ಲಿ ಪ್ರತಿಭಟನೆ ವೇಳೆ ಅಭಿಪ್ರಾಯಪಟ್ಟರು.
ಮೈಸೂರು, ಏಪ್ರಿಲ್ 21 : ಸುಪ್ರೀಂಕೋರ್ಟ್ ನ ಮೀಸಲಾತಿ ಬಡ್ತಿ ಹಿಂಪಡೆತ ತೀರ್ಪು ವಿರೋಧಿಸಿ ಮೈಸೂರು ವಿಭಾಗದ 'ಮೀಸಲಾತಿ ಸಂರಕ್ಷಣಾ ಸಮಿತಿ' ಇಂದು ಪ್ರತಿಭಟನೆ ನಡೆಸಿತು.
ಈ ಪ್ರತಿಭಟನೆಯನ್ನು ವಿವಿಧ ಅಹಿಂದ ವರ್ಗಗಳ ಧಾರ್ಮಿಕ ಮುಖಂಡರು ಬೆಂಬಲಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, "ರಾಜಕೀಯ, ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅವಶ್ಯವಾಗಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಲಭಿಸುವವರೆಗೂ ಮೀಸಲಾತಿ ಇರಬೇಕು. ಇದಕ್ಕಾಗಿ ನಾವು ಹೋರಾಟ ಮಾಡುತ್ತೇವೆ," ಎಂದು ತಿಳಿಸಿದರು.[ಮಾಜಿ ಸಚಿವ ರಾಮ್ ದಾಸ್ ಗೆ ಮತ್ತೆ 'ಪ್ರೇಮ' ಸಂಕಟ?]
ಇದೇ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ತುತ್ತನ್ನು ಕಿತ್ತುಕೊಳ್ಳುವ ಕೃತ್ಯಕ್ಕೆ ಮುಂದಾಗುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ, ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗಲಿ, ರಾಜ್ಯ ಸರ್ಕಾರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಿ, ಮೀಸಲಾತಿ ಸಂರಕ್ಷಣಾ ಸಮಿತಿಗೆ ಜಯವಾಗಲಿ, ರಾಜ್ಯ ಸರ್ಕಾರ ಬಡ್ತಿ ಮೀಸಲಾತಿ ಉಳಿಸಲು ಸುಗ್ರೀವಾಜ್ಞೆ ತರಲಿ, ನ್ಯಾಯಾಂಗದಲ್ಲೂ ಮೀಸಲಾತಿ ಜಾರಿಯಾಗಲಿ ಎಂಬ ಹಲವಾರು ಘೋಷಣಾ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಕಾಣಿಸಿಕೊಂಡರು.[ಜೂನ್ ನಲ್ಲಿ ಅರಮನೆ ನಗರಿ ಮೈಸೂರಿನಲ್ಲಿ ಸಾಹಿತ್ಯ ಜಾತ್ರೆ]
ಇತ್ತ ಮೈಸೂರು ವಿಶ್ವವಿದ್ಯಾನಿಲಯದ ದಲಿತ ನೌಕರರ ಸಂಘದ ವತಿಯಿಂದಲೂ ಸಹ ಮೈಸೂರು ಕಾರ್ಯಸೌಧದ ಎದುರು ಒಬಿಸಿ/ಎಸ್/ಎಸ್.ಟಿ ಬಡ್ತಿ ಮೀಸಲಾತಿ ಉಳಿವಿಗಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ರಾಜ್ಯಾದ್ಯಂತ ಬಡ್ತಿ ಮೀಸಲಾತಿ ಉಳಿವಿಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು,ಅವರ ಪ್ರತಿಭಟನೆಗೆ ಬೆಂಬಲ ಸೂಚಿಸಿ ದಲಿತ ನೌಕರರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇವೆ ಎಂದರು.
ಸುಪ್ರೀಂಕೋರ್ಟ್ ತೀರ್ಪಿನ ಮಾರ್ಪಾಡಿಗೆ ಸುಗ್ರೀವಾಜ್ಞೆ ಹೊರಡಿಸಬೇಕು. ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಯಾಗಬೇಕು ಎಂದು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿದರು.