ಸ್ವಾಮೀಜಿಗಳ ಭವಿಷ್ಯ ಸುಳ್ಳಾಗಿದೆ: ಸಚಿವ ಸಾ.ರಾ.ಮಹೇಶ್
ಮೈಸೂರು, ಅಕ್ಟೋಬರ್ 12: ದಸರಾ ಮಹೋತ್ಸವ ಪ್ರಯುಕ್ತ ಆಕಾಶ ಅಂಬಾರಿಗೆ ಚಾಲನೆ ದೊರಕಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಗುರುವಾರ (ಅ.12) ಆಕಾಶ ಅಂಬಾರಿ ಏರಿ ಬೆಂಗಳೂರಿಗೆ ಹೊರಡುವ ಮುನ್ನ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮೈಸೂರಿನಿಂದ ಬೆಂಗಳೂರು, ಬೆಂಗಳೂರಿನಿಂದ ಮೈಸೂರಿಗೆ ವಿಮಾನ ಯಾನ ಆರಂಭಿಸಲಾಗಿದೆ.
ಒಬ್ಬರಿಗೆ 999 ರೂ. ತಗುಲಲಿದ್ದು, ವ್ಯತ್ಯಾಸವಾದಲ್ಲಿ, ವ್ಯತ್ಯಾಸದ ಮೊಬಲಗನ್ನು ಪ್ರವಾಸೋದ್ಯಮ ಇಲಾಖೆಯೇ ಭರಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈಗಾಗಲೇ 650ಕ್ಕೂ ಅಧಿಕ ಮಂದಿ ಬುಕ್ಕಿಂಗ್ ಮಾಡಿದ್ದಾರೆ. ಇಂದು ನಾನೂ ಕೂಡ ಅದರಲ್ಲೇ ಹೋಗುತ್ತಿದ್ದೇನೆ.

ದಸರಾವರೆಗೆ ಆಕಾಶ ಅಂಬಾರಿ ಸಂಚರಿಸಲಿದೆ. ಒಳ್ಳೆಯ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಬೇಡಿಕೆ ಬಂದರೆ ಇನ್ನೊಂದಿಷ್ಟು ದಿನ ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು. ಮಧ್ಯಾಹ್ನ 2.30ಕ್ಕೆ ಬೆಂಗಳೂರು ಬಿಟ್ಟರೆ 3ಕ್ಕೆ ಮೈಸೂರು ತಲುಪಲಿದೆ, ಪ್ರಯಾಣಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕೋಡಿಮಠದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ
ಕೋಡಿಮಠದ ಸ್ವಾಮೀಜಿ ಇನ್ನೆರಡು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ನುಡಿದ ಭವಿಷ್ಯಕ್ಕೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಕೋಡಿಮಠದ ಸ್ವಾಮೀಜಿ ಮೇಲೆ ಅಪಾರ ಗೌರವ ಇದೆ. ಅವರು ಮಾರ್ಗದರ್ಶನ ಮಾಡಲಿ, ಆದರೆ ರಾಜಕೀಯ ಚರ್ಚೆ ಮಾಡಬೇಡಿ.
ಈಗಲೇ ಸಾಕಷ್ಟು ಸ್ವಾಮೀಜಿಗಳು ಭವಿಷ್ಯ ಹೇಳಿದ್ದಾರೆ, ಅದೆಲ್ಲ ಸುಳ್ಳಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳಲ್ಲ. ಮತ್ತಷ್ಟು ಸುಭದ್ರವಾಗಿರುತ್ತದೆ ಎಂದರು












Click it and Unblock the Notifications