ರಸ್ತೆ ಕಾಮಗಾರಿ ವಿಳಂಬ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ನಾಗೇಂದ್ರ
ಮೈಸೂರು, ಸೆಪ್ಟೆಂಬರ್ 10: ಇಂದು ಬೆಳ್ಳಂಬೆಳಿಗ್ಗೆ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ರಸ್ತೆ ಕಾಮಗಾರಿ ಪರಿಶೀಲನೆ ಮಾಡಿದ್ದು, ಕಾಮಗಾರಿಗಳು ವಿಳಂಬವಾಗಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗುದ್ದಲಿ ಪೂಜೆ ನೆರವೇರಿಸಿ ತಿಂಗಳುಗಳೇ ಕಳೆದರೂ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಇಂದು ಶಾಸಕ ನಾಗೇಂದ್ರ ಅವರು ಕಾಮಗಾರಿ ಪರೀಶಿಲನೆ ನಡೆಸಿದರು. ವಿಜಯನಗರದ ವಾರ್ಡ್ ನಂಬರ್ 2, 3 ಮತ್ತು 20 ರ ಮುಖ್ಯರಸ್ತೆಗೆ ಈ ಹಿಂದೆ 4.98 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು.
ಗುದ್ದಲಿ ಪೂಜೆ ಮುಗಿಸಿ ತಿಂಗಳುಗಳೇ ಕಳೆದರೂ ಕಾಮಗಾರಿ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಶಾಸಕರು ಗರಂ ಆದರು. ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರಾಭಿವೃದ್ಧಿ ಇಲಾಖೆಯ ವಿಶೇಷ ಅನುದಾನದಲ್ಲಿ ವಿಜಯನಗರ 1ನೇ ಹಂತ, ವಾಟರ್ ಟ್ಯಾಂಕ್ ಬಳಿಯಿಂದ ಹೊರವರ್ತುಲ ರಸ್ತೆಯವರೆಗೆ 3.15 ಕಿ.ಮೀ ಉದ್ದದ ರಸ್ತೆ ಅಗಲೀಕರಣ, ಡಾಂಬರೀಕರಣ, ಅಗತ್ಯವಿರುವ ಕಡೆ ವಾಕ್ಸ್ ಚರಂಡಿ ನಿರ್ಮಾಣ ಹಾಗೂ ಫುಟ್ ಪಾತ್ ನಿರ್ಮಾಣದ 4.98 ಕೋಟಿ ರೂ. ವೆಚ್ಚದ ಕಾಮಗಾರಿಯು ಮಂದಗತಿಯಲ್ಲಿ ನಡೆಯುತ್ತಿದೆ.
ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿರುವುದರಿಂದ, ಶೀಘ್ರವಾಗಿ ಕಾಮಗಾರಿ ನಿರ್ವಹಿಸಲು ಇರುವ ಸಮಸ್ಯೆಗಳನ್ನು ಪರಿಹರಿಸಲು ಇಂದು ಶಾಸಕ ನಾಗೇಂದ್ರ ಅವರು, ಮೂಡಾ ಅಧಿಕಾರಿಗಳು, ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ, ವಾಣಿ ವಿಲಾಸ ನೀರು ಸರಬರಾಜು ಅಧಿಕಾರಿಗಳು, ನಗರಪಾಲಿಕೆ ಅಧಿಕಾರಿಗಳು, ಚೆಸ್ಕಾಂ, ಅರಣ್ಯ, ತೋಟಗಾರಿಕೆ, ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.












Click it and Unblock the Notifications