ಸೋಲು-ಗೆಲುವಿನ ಜಿದ್ದಾಜಿದ್ದಿ ಉಪಚುನಾವಣಾ ಕಣ!
ಉಭಯ ಪಕ್ಷಗಳಿಗೂ ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಗೆಲುವು ಯಾರಿಗೆ ಎಂಬ ತೀವ್ರ ಕುತೂಹಲ ಮತದಾರರನ್ನು ಆವರಿಸಿದೆ.
ಮೈಸೂರು, ಮಾರ್ಚ್ 28: ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾಸಭಾ ಕ್ಷೇತ್ರಗಳಲ್ಲಿ ಹಿಂದೆಂದೂ ಕಾಣದ ಚಟುವಟಿಕೆಗಳು ಕಂಡುಬರುತ್ತಿವೆ.
ಏಪ್ರಿಲ್ 9 ರಂದು ನಡೆಯಲಿರುವ ಈ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರಕ್ಕೆ ನೂರಾರು ಮುಖಂಡರು ಭೇಟಿ ನೀಡುತ್ತಿದ್ದು, ತಮ್ಮ ಜಾತಿ, ಬಾಂಧವರ ಮತ ಸೆಳೆಯುವ ಯತ್ನ ನಡೆಸುತ್ತಿದ್ದಾರೆ. ಆರೋಪ, ಪ್ರತ್ಯಾರೋಪಗಳು ಮುಗಿಲು ಮುಟ್ಟಿವೆ. ರೋಡ್ಶೋಗಳಿಗೆ ಲೆಕ್ಕವೇ ಇಲ್ಲದಂತಾಗಿದೆ.[ಚುನಾವಣೆ ಹೊಸ್ತಿಲಲ್ಲಿರುವಾಗ ಶ್ರೀನಿವಾಸ್ ಪ್ರಸಾದ್ ಮೌನವಾಗಿದ್ದೇಕೆ?]
ಕಾಂಗ್ರೆಸ್ ಗೆ ಹೋಲಿಸಿದರೆ ಎರಡು ಕ್ಷೇತ್ರಗಳಲ್ಲಿಯೂ ಬಿಜೆಪಿ ಬಿರುಸಿನ ಚಟುವಟಿಕೆ ನಡೆಸುತ್ತಿದೆ. ಅಷ್ಟೇ ಅಲ್ಲ ಗೆದ್ದೇ ತೀರಬೇಕೆಂಬ ಹಠಕ್ಕೆ ಬಿದ್ದಿದೆ. ಹೀಗಾಗಿಯೇ ಗುಂಡ್ಲುಪೇಟೆಯಲ್ಲಿ ಠಿಕಾಣಿ ಹೂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿದಿನವೂ ಸುಮಾರು 28 ಗ್ರಾಮಗಳಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ. ಬಿಸಿಲನ್ನು ಲೆಕ್ಕಿಸದೆ ಭಾಷಣ ಮಾಡುತ್ತಿದ್ದಾರೆ. ಹೋದ ಕಡೆಗಳಲ್ಲೆಲ್ಲ ಅವರಿಗೆ ಅದ್ಧೂರಿ ಸ್ವಾಗತ ಸಿಗುತ್ತಿರುವುದು ಇನ್ನಷ್ಟು ಹುಮ್ಮಸ್ಸು ತಂದಿದೆ.
ಬಿಜೆಪಿ ನಾಯಕರ ಆಲೋಚನೆಯೇನು?
ಕಾಂಗ್ರೆಸ್ ಪ್ರಭಾವಿ ನಾಯಕರಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ಅವರ ನಿಧನದ ನಂತರ ತೆರವಾದ ಕ್ಷೇತ್ರಕ್ಕಾಗಿ ಗುಂಡ್ಲೆಪೇಟೆ ಉಪಚುನಾವಣೆ ನಡೆಯುತ್ತಿದ್ದು, ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹಾದೇವ ಪ್ರಸಾದ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಅನುಕಂಪದಡಿ ಅವರತ್ತ ಮತಗಳು ಚಲಾವಣೆಯಾಗಬಹುದು ಎಂಬ ಭಯವೂ ಬಿಜೆಪಿಯನ್ನು ಕಾಡುತ್ತಿದ್ದು, ಗುಂಡ್ಲುಪೇಟೆಗೆ ಹೆಚ್ಚಿನ ಒತ್ತನ್ನು ನಾಯಕರು ನೀಡುತ್ತಿದ್ದಾರೆ.[ಎಸ್ಸೆಂ ಕೃಷ್ಣ ಅವರ ಹಾದಿ ತುಳಿದ ಕಾಂಗ್ರೆಸ್ ಮುಖಂಡ]
ನಂಜನಗೂಡಿನ ಕತೆಯೇನು?
ಕಾಂಗ್ರೆಸ್ ನಾಯಕರಾಗಿದ್ದ ಶ್ರೀನಿವಾಸ್ ಪ್ರಸಾದ್ ಪಕ್ಷ ತೊರೆದು ಬಿಜೆಪಿಗೆ ಸೇರಿದ್ದರಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ನಂಜನಗೂಡು ಉಪಚುನಾವಣೆ ನಡೆಯುತ್ತಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಪ್ರಭಾವಿ ನಾಯಕರಾಗಿರುವುದರಿಂದ ಅವರ ಗೆಲುವು ನಿಶ್ಚಿತ ಎನ್ನುವುದು ಬಿಜೆಪಿ ನಾಯಕರ ಆಲೋಚನೆ. ಹೀಗಾಗಿ ಕೆಳಮಟ್ಟದ ನಾಯಕರು, ಸಂಸದರನ್ನು ಅಲ್ಲಿಗೆ ಕಳುಹಿಸಿರುವ ಯಡಿಯೂರಪ್ಪ ಅವರು ಗುಂಡ್ಲುಪೇಟೆಯಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸುತ್ತಾಡುತ್ತಿದ್ದಾರೆ. ನಂಜನಗೂಡಿನಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ಮಟ್ಟದ ನಾಯಕರು ಪ್ರಚಾರ ನಡೆಸುತ್ತಿದ್ದಾರೆ.[ಇದು ಉಪಚುನಾವಣೆ ದಸರಾ! ಮೈಸೂರು ಹೋಟೆಲುಗಳು ಹೌಸ್ ಫುಲ್]
ಕಾಂಗ್ರೆಸ್ ನಾಯಕರು ಏನಂತಾರೆ?
ಕಾಂಗ್ರೆಸ್ ನಾಯಕರ ಲೆಕ್ಕಚಾರ ಸ್ವಲ್ಪ ವಿಭಿನ್ನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗುಂಡ್ಲುಪೇಟೆ ಕ್ಷೇತ್ರಕ್ಕಿಂತಲೂ ನಂಜನಗೂಡಿನದ್ದೇ ಚಿಂತೆಯಾಗಿದೆ. ಇಲ್ಲಿ ಶ್ರೀನಿವಾಸಪ್ರಸಾದ್ ಮತ್ತು ಕಳಲೆ ಕೇಶವಮೂರ್ತಿ ನಡುವಿನ ಸ್ಪರ್ಧೆಗಿಂತ ಅದು ನೇರವಾಗಿ ಶ್ರೀನಿವಾಸ ಪ್ರಸಾದ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಪರಿಣಾಮ ಕಾಂಗ್ರೆಸ್ ನಾಯಕರೆಲ್ಲರೂ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ವಿಶ್ರಾಂತಿ ಪಡೆಯದೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.[ಗೂಟದ ಕಾರು ನೆನಪಾಗಿ ಗೀತಾ ಚುನಾವಣೆಗೆ:ಹೇಳಿಕೆ ಹಿಂಪಡೆದ ಪ್ರತಾಪ್ ಸಿಂಹ]
ಗುಂಡ್ಲುಪೇಟೆಯಲ್ಲಿ ಗೆಲ್ಲೋದ್ಯಾರು?
ಗುಂಡ್ಲುಪೇಟೆಯಲ್ಲಿ
ಮಹದೇವಪ್ರಸಾದ್
ಅವರು
ಉಳಿಸಿ
ಹೋದ
ವರ್ಚಸ್ಸು
ಅವರ
ಪತ್ನಿಗೆ
ಮತಗಳಾಗಿ
ಪರಿವರ್ತನೆಯಾಗುವುದರಿಂದ
ಅಲ್ಲಿ
ಗೆಲುವು
ಸುಲಭ
ಎಂಬುದು
ಕಾಂಗ್ರೆಸ್ಸಿಗರ
ಆಲೋಚನೆಯಾಗಿದೆ.
ಹೀಗಾಗಿ
ಎರಡು
ಪಕ್ಷದ
ನಾಯಕರು
ಕೂಡ
ಈ
ಉಪ
ಚುನಾವಣೆಯನ್ನು
ತಮ್ಮ
ಪ್ರತಿಷ್ಠೆಯಾಗಿ
ತೆಗೆದುಕೊಂಡು
ಕೆಲಸ
ಮಾಡುತ್ತಿದ್ದಾರೆ.
ಬಿಜೆಪಿಗೆ
ನಂಜನಗೂಡಲ್ಲಿ
ಧೈರ್ಯವಿದ್ದರೆ,
ಗುಂಡ್ಲುಪೇಟೆಯಲ್ಲಿ
ಭಯವಿದೆ.
ಕಾಂಗ್ರೆಸ್ಸಿಗರಿಗೆ
ಗುಂಡ್ಲುಪೇಟೆಯಲ್ಲಿ
ಗೆಲುವಿನ
ಧೈರ್ಯವಿದ್ದರೆ
ನಂಜನಗೂಡಲ್ಲಿ
ಭಯವಿದೆ.[ಲೂಟಿ
ಹಣದಿಂದ
ಓಟು
ಕೇಳಿದರೆ
ಸುಮ್ಮನಿರೋಲ್ಲ:
ಬಿಎಸ್
ವೈ]
ಆಯೋಗದ ಹದ್ದಿನಕಣ್ಣು
ಇದೆಲ್ಲದರ ನಡುವೆ ಎರಡು ಕ್ಷೇತ್ರದಲ್ಲೂ ಚುನಾವಣೆಯನ್ನು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ, ಸುಗಮವಾಗಿ ನಡೆಸುವ ಸಲುವಾಗಿ ಎಲ್ಲ ರೀತಿಯ ಕ್ರಮಗಳನ್ನೂ ಚುನಾವಣಾ ಆಯೋಗ ಕೈಗೊಂಡಿದೆ. ಅಷ್ಟೇ ಅಲ್ಲ ಸೂಕ್ಷ್ಮ ಮತಗಟ್ಟೆಯ ಸ್ಥಳಗಳಲ್ಲಿ ಪಥಸಂಚಲನ ನಡೆಸಿದೆ. ಇನ್ನು ಗಡಿಭಾಗವಾದ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಪೊಲೀಸರು ವಿವಿಧ ಮತಗಟ್ಟೆಗಳಿಗೆ ತೆರಳಿ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ದಕ್ಷಿಣ ವಲಯದ ಐಜಿಪಿ ವಿಫುಲ್ ಕುಮಾರ್ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಮತದಾರರಿಗೆ ಆಮಿಷವೊಡ್ಡುತ್ತಿದ್ದಾರಾ ಎಂಬುದನ್ನು ತಿಳಿಯಲು ಗ್ರಾಮೀಣ ಪ್ರದೇಶದತ್ತ ದೌಡಾಯಿಸಿ ಜನರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಕುಡುಕರಿಗೆ ಹಬ್ಬ
ಇನ್ನು ಚುನಾವಣಾ ಪ್ರಚಾರದಲ್ಲಿ ಬರುವ ನಾಯಕರಿಂದ ಕಾಡಿಬೇಡಿ ಹಣ ಪಡೆದು ಬಳಿಕ ಮದ್ಯಸೇವಿಸಿ ಲೋಕದ ಪರಿವೇ ಇಲ್ಲದೆ ಎಲ್ಲೆಂದರಲ್ಲಿ ಮಲಗುವ ಕುಡುಕರಿಗಂತೂ ಹಬ್ಬವೋ ಹಬ್ಬ.ಸಣ್ಣಪುಟ್ಟ ನಾಯಕರನ್ನು ಅಡ್ಡಗಟ್ಟಿ ವಸೂಲಿ ಮಾಡುವ ಕೆಲವರು ಅದರಿಂದ ಕಂಠಮಟ್ಟ ಕುಡಿದು ಉರಿಬಿಸಿಲಲ್ಲೇ ಲೋಕದ ಅರಿವಿಲ್ಲದಂತೆ ನಿದ್ರಿಸುತ್ತಿದ್ದಾರೆ. ಒಟ್ಟಾರೆ ಉಪಚುನಾವಣೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದು, ಗೆಲುವು ಯಾರಿಗೆ ಒಲಿಯುತ್ತದೆ ಎಂಬುದನ್ನು ತಿಳಿಯಲು ಏಪ್ರಿಲ್ 13, ಗುರುವಾರದವರೆಗೂ ಕಾಯಬೇಕು.