ಅಯ್ಯಜ್ಜನಹುಂಡಿ ಕೆರೆ ಕಾಯಕಲ್ಪಕ್ಕೆ ಸೂಚನೆ ಕೊಟ್ಟ ಸಿಂಧೂರಿ
ಮೈಸೂರು, ಫೆಬ್ರವರಿ 3 : ''ಕೇರ್ಗಳ್ಳಿ ಕೆರೆ, ದಟ್ಟಗಳ್ಳಿ ಸಮೀಪದ ಅಯ್ಯಜ್ಜನಹುಂಡಿ ಕೆರೆ ಮತ್ತು ಅವುಗಳಿಗೆ ಹೊಂದಿಕೊಂಡಂತಿರುವ ಕೆರೆಗಳಿಗೆ ಎರಡು ತಿಂಗಳೊಳಗಾಗಿ ಕಾಯಕಲ್ಪ ನೀಡಿ, ಕೆರೆ ಸ್ವರೂಪದಲ್ಲಿ ಕಾಣುವಂತೆ ಮಾಡಬೇಕು'' ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರದಂದು ಅಯ್ಯಜ್ಜನಹುಂಡಿ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಭೇಟಿ ನೀಡಿ ಅವರು ಪರಿಶೀಲಿಸಿದರು. ಬಳಿಕ ಅವರು, ಈ ಕೆರೆಗಳಿಗೆ ಕಾಯಕಲ್ಪ ನೀಡುವ ಸಂಬಂಧ ಮುಡಾ, ಮಹಾನಗರ ಪಾಲಿಕೆ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೆಲಸ ವಹಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೇರ್ಗಳ್ಳಿ ಕೆರೆಯಲ್ಲಿ ಮೆಕ್ಕಲು ತೆಗೆಯಬೇಕು, ಬೇಲಿ ಹಾಕಬೇಕು. ಚರಂಡಿ ನೀರು ಒಳಚರಂಡಿಯ ಮೂಲಕವೇ ಹರಿಯುವಂತೆ ಸಂಪರ್ಕ ಮಾಡುವಂತೆ ತಿಳಿಸಿದರು.

ಅಯ್ಯಜ್ಜನಹುಂಡಿ ಕೆರೆಯ ಕಾಯಕಲ್ಪ ಕೆಲಸವನ್ನು ಮಹಾನಗರ ಪಾಲಿಕೆ ವತಿಯಿಂದ ಮಾಡುವಂತೆ ತಿಳಿಸಿದರು. ಈ ಕೆರೆಗಳಿಗೆ ಬದು ನಿರ್ಮಾಣ ಮಾಡಿ, ನೀರು ತುಂಬಿಸುವ ಕೆಲಸವನ್ನು ಸಣ್ಣ ನೀರಾವರಿ ಇಲಾಖೆ ಮಾಡುವಂತೆ ತಿಳಿಸಿದರು.
ಈ ಕೆರೆಗಳ ಸಮೀಪ ಕಟ್ಟಡ ತ್ಯಾಜ್ಯವನ್ನು ಯಾರೂ ಹಾಕಬಾರದು ಎಂಬ ಫಲಕವನ್ನು ಮಹಾನಗರ ಪಾಲಿಕೆ ಅಳವಡಿಸಬೇಕು. ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಡಾ ಆಯುಕ್ತ ಡಿ.ಬಿ.ನಟೇಶ್, ಅಧೀಕ್ಷಕ ಇಂಜಿನಿಯರ್ ಶಂಕರ್, ಮಹಾನಗರ ಪಾಲಿಕೆ ವಲಯ ಅಧೀಕ್ಷಕ ಇಂಜಿನಿಯರ್ ಬಿಳಿಗಿರಿರಂಗಸ್ವಾಮಿ, ತಹಶೀಲ್ದಾರ್ ರಕ್ಷಿತ್, ಪಾಲಿಕೆ ಟಿ.ಎಸ್.ವಲಯ 3 ರ ಆಯುಕ್ತ ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. (ಕರ್ನಾಟಕ ವಾರ್ತೆ)












Click it and Unblock the Notifications