ಅರಮನೆಯಲ್ಲಿ ಫಿರಂಗಿ ಸಿಡಿಸಿದ ಪೊಲೀಸ್ ಸಶಸ್ತ್ರ ಮೀಸಲುಪಡೆ
ಮೈಸೂರು, ಸೆಪ್ಟೆಂಬರ್ 8: ನಾಡಹಬ್ಬ ದಸರೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಈ ಹಿನ್ನೆಲೆ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಂಡಾನೆ ಅರ್ಜುನ ಸಮ್ಮುಖದಲ್ಲಿ ನಗರ ಸಶಸ್ತ್ರ ಮೀಸಲು ಪಡೆ (City armed reserve police force) ಪೊಲೀಸರು ಫಿರಂಗಿ ಸಿಡಿಸುವ ತಾಲೀಮು ನಡೆಸಿದರು.
15 ಆನೆಗಳು ಮತ್ತು 24 ಅಶ್ವಗಳು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದು ಅವುಗಳೂ ಸಹ ಈ ತಾಲೀಮಿನಲ್ಲಿ ಭಾಗವಹಿಸಿದ್ದವು. ಪೊಲೀಸ್ ಆಧಿಕಾರಿಗಳು ಮೂರು ಸುತ್ತು ಫಿರಂಗಿ ಸಿಡಿಸಿದರು. ಎರಡು ಸುತ್ತಿನಲ್ಲಿ ಆನೆ ಮತ್ತು ಕುದುರೆ ಬೆಚ್ಚಿ ಬಿದ್ದಿದ್ದು ಮೂರನೇ ಸುತ್ತಿನಲ್ಲಿ ಸಹಜ ಸ್ಥಿತಿಗೆ ಮರಳಿವೆ.

ಪ್ರಶಾಂತ್, ವಿಜಯ, ಗೋಪಾಲಸ್ವಾಮಿ ಆನೆಗಳು ವಿಚಲಿತಗೊಂಡಿವೆ. ದ್ರೋಣ ಗಾಬರಿಯಾಗಿರುವುದು ಕಂಡು ಬಂತು. ಆನೆಗಳು ಮತ್ತು ಕುದುರೆಗಳು ಫಿರಂಗಿಯಿಂದ ಹೊರಬರುವ ಭಾರೀ ಸದ್ದಿಗೆ ಭಯಗೊಳ್ಳದೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವುದೇ ತಾಲೀಮಿನ ಉದ್ದೇಶ.

ಜಂಬೂ ಸವಾರಿಯ ವೇಳೆ ವಿಚಲಿತರಾಗದೇ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಪೂರ್ವಭಾವಿಯಾಗಿ ತಾಲೀಮು ನಡೆಸಲಾಯಿತು. ಇನ್ನು ಇದೇ ವೇಳೆ ಬೆಚ್ಚಿ ಬಿದ್ದ ವೇಲೆ ಕುದುರೆ ಕಾಲಿನಿಂದ ಜಾಡಿಸಿ ಒದ್ದ ಪರಿಣಾಮ ಡಿಸಿಪಿ ವಿಷ್ಣುವರ್ಧನ್ ಕಾರಿನ ಬಾಗಿಲು ಸ್ವಲ್ಪ ಜಖಂ ಆಗಿದೆ.

ಮಾವುತರು, ಕಾವಾಡಿಗಳಿಗೆ ಉಚಿತ ಕ್ಷೌರ
ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2017ರ ಪ್ರಯುಕ್ತ ದಸರಾ ಗಜಪಡೆಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಮಕ್ಕಳಿಗೆ ಉಚಿತ ಕ್ಷೌರ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗುವ ಸಲುವಾಗಿ ಅರಮನೆಯ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಇವರ ಮಕ್ಕಳಿಗೆ ಶುಕ್ರವಾರ ಉಚಿತ ಕ್ಷೌರದ ಭಾಗ್ಯ ಲಭಿಸಿತು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಸವಿತ ಸಮಾಜದ ವತಿಯಿಂದ ಅರಮನೆ ಆವರಣದಲ್ಲಿ ಉಚಿತ ಕ್ಷೌರ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.












Click it and Unblock the Notifications