ಮೈಸೂರು ದಸರಾ: ಅತ್ತೆ-ಸೊಸೆಯರಿಗಾಗಿ ಖಾದ್ಯ ಸ್ಪರ್ಧೆ!
ಮೈಸೂರು, ಸೆಪ್ಟೆಂಬರ್ 23: ಅತ್ತೆ ಕಂಡ್ರೆ ಸೊಸೆಗೆ ಆಗೋಲ್ಲ. ಸೊಸೆ ಕಂಡ್ರೆ ಅತ್ತೆಗೆ ಆಗಲ್ಲ ಎಂಬ ಕಾಲ ಇದೆ. ಆದರೆ ಇಂದು ಇದೆಲ್ಲ ತದ್ವಿರುದ್ಧವಾ ಸನ್ನಿವೇಶ ಏರ್ಪಟ್ಟಿದ್ದು ಮೈಸೂರು ದಸರಾದಲ್ಲಿ.
ಇವರ ಘಟವಾಣಿಯರ ಸಾಮರಸ್ಯದ ತಕ್ಕಡಿಯಲ್ಲಿ ಎಲ್ಲವೂ ಸರಿಯಿತ್ತು. ಅದೇ ರೀತಿ ಸಮಾಜವೂ ಕೂಡ ಅತ್ತೆ ಸೊಸೆ ಅಂದರೆ ಅವರಲ್ಲಿ ಸಾಮರಸ್ಯವಿರಲ್ಲ ಎಂದು ನೋಡೋದೇ ಹೆಚ್ಚು. ಅಂಥಹವರಿಗೆ ಸೆಡ್ಡು ಹೊಡೆದು ಅತ್ತೆ ಸೊಸೆಯರಲ್ಲಿ ಸಾಮರಸ್ಯವಿದೆ. ನಾವು ಕೂಡ ಅಮ್ಮ ಮಗಳಂತೆ ಇರಬಲ್ಲೆವು ಎಂದು ಅಡುಗೆ ತಯಾರಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಅತ್ತೆ-ಸೊಸೆಯರು.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಜನಪ್ರಿಯ ಆಹಾರ ಮೇಳ ಅತ್ತೆ ಸೊಸೆಯರ ಅಕ್ಕಿ ರೊಟ್ಟಿ ಮತ್ತು ಬದನೆಕಾಯಿ ಪಲ್ಯ ಸಿದ್ಧಪಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆರು ಜೋಡಿ ಅತ್ತೆ ಸೊಸೆಯರು ಪಾಲ್ಗೊಂಡಿದ್ದರು. ಅದರಲ್ಲಿ ಮೂವರು ಗೆಲುವು ಸಾಧಿಸಿದ್ದಾರೆ. ಕೊಡಗಿನ ಶೋಭಾ ರಾಣಿ- ಅಂಬಿಕಾ ಪ್ರಥಮ ಸ್ಥಾನ ಪಡೆದರೆ, ಕುವೆಂಪುನಗರದ ಲಲಿತಾ-ಸೋನಿ ದ್ವೀತಿಯ ಸ್ಥಾನ ಹಾಗೂ ಕುವೆಂಪುನಗರದ ಅನಿತಾ ರಮೇಶ್-ಸ್ವಾತಿ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
ಅಷ್ಟೇ ಅಲ್ಲ, ಆಹಾರ ಮೇಳದ ಮೈದಾನದಲ್ಲಿ ಮಹಿಳೆಯರಿಗಾಗಿ ಇಡ್ಲಿ ತಿನ್ನುವ ಸ್ಪರ್ಧೆ ಹಾಗೂ ಪುರುಷರಿಗಾಗಿ ಉಪ್ಪಿಟ್ಟು ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 20ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದು, ಅವರಲ್ಲಿ ಹತ್ತು ಮಂದಿ ಸೆಲೆಕ್ಟ್ ಆಗಿದ್ದು, ಅವರಿಗೆ 10ಇಡ್ಲಿ, ಚೆಟ್ನಿ ಒಂದು ಬಾಟಲ್ ನೀರನ್ನು ನೀಡಲಾಗಿತ್ತು. ಪುರುಷರಿಗೆ ಉಪ್ಪಿಟ್ಟು ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಕುವೆಂಪುನಗರದ ಶ್ವೇತಾ ಅರಸ್ ಪ್ರಥಮ, ಮೈಸೂರಿನ ಮಹಾಲಕ್ಷ್ಮಿ ಹಾಗೂ ರಾಜಶ್ರೀ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.

ಪುರುಷರ ಉಪ್ಪಿಟ್ಟು ತಿನ್ನುವ ಸ್ಪರ್ಧೆಯಲ್ಲಿ 21ಮಂದಿ ಹೆಸರನ್ನು ನೋಂದಾಯಿಸಿಕೊಂಡಿದ್ದು ಅದರಲ್ಲಿ ಹತ್ತು ಮಂದಿ ಆಯ್ಕೆಯಾಗಿದ್ದರು. ಅವರಲ್ಲಿ ಶ್ರೀರಂಗಪಟ್ಟಣದ ಕೌಶಿಕ್ ಪ್ರಥಮ, ಕುವೆಂಪುನಗರದ ಸುರೇಶ್ ದ್ವಿತೀಯ, ಜಯಲಕ್ಷ್ಮಿಪುರಂನ ಬಾಲಕೃಷ್ಣ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆಹಾರ ಇಲಾಖೆಯ ಕಾ.ರಾಮೇಶ್ವರಪ್ಪ ವಿಜೇತರಿಗೆ ಪ್ರಶಸ್ತಿಪತ್ರಗಳನ್ನು ವಿತರಿಸಿದರು. ಈ ಸಂದರ್ಭ ದಸರಾ ಉಪಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳಿದ್ದರು.
ಇವೆಲ್ಲದರ ನಡುವೆ ಆಹಾರ ಮೇಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ದೋಸೆ ಮಳಿಗೆಗೆ ತೆರಳಿ ಕಾವಲಿಯ ಮೇಲೆ ದೋಸೆ ಹುಯ್ದರಲ್ಲದೇ, ಖಾದ್ಯದ ಮಳಿಗೆಗೆ ತೆರಳಿ ಖಾದ್ಯ ಖರೀದಿಸಿದರು.












Click it and Unblock the Notifications