ಉರುಳಾದ ಧ್ವಜದ ಹಗ್ಗ, ವಿದ್ಯಾರ್ಥಿನಿ ಆಸ್ಪತ್ರೆಗೆ
ಮೈಸೂರು, ಆ.16 : ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮುಗಿದಿದೆ. ಆದರೆ, ಮೈಸೂರಿನಲ್ಲಿ ಧ್ವಜ ಕಂಬಕ್ಕೆ ಬಾವುಟ ಕಟ್ಟಲು ಹತ್ತಿ ತೀವ್ರವಾಗಿ ಅಸ್ವಸ್ಥಗೊಂಡಿರುವ ವಿದ್ಯಾರ್ಥಿನಿ ಇನ್ನೂ ಚೇತರಿಸಿಕೊಂಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.
ಗುರುವಾರ ಸಂಜೆ ಒಂಟಿಕೊಪ್ಪಲ್ 3ನೇ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ರಂಜಿತಾ (11) ಧ್ವಜ ಕಂಬಕ್ಕೆ ಬಾವುಟ ಕಟ್ಟುವಾಗ ಕುತ್ತಿಗೆಗೆ ಹಗ್ಗ ಬಿಗಿದು ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ತಕ್ಷಣ ಆಕೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಲಾಯಿತು. ತುರ್ತು ಚಿಕಿತ್ಸಾ ಘಟಕದಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ವಿವರ : ಜಯಪುರದ ಸೂಜಿ ಸೋಲಿಗರ ಕಾಲೋನಿಯ ನಾಗ ಅವರ ಪುತ್ರಿ ರಂಜಿತಾ ಒಂಟಿಕೊಪ್ಪಲ್ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಓದುತ್ತಿದ್ದಳು. ಶುಕ್ರವಾರದ ಧ್ವಜಾರೋಹಣಕ್ಕಾಗಿ ಕಂಬಕ್ಕೆ ಧ್ವಜ ಕಟ್ಟುವಂತೆ ಗುರುವಾರ ಮಧ್ಯಾಹ್ನ ಮುಖ್ಯ ಶಿಕ್ಷಕಿ ಪ್ರಸಿಲ್ಲಾ ರೋಡ್ರಿಗಸ್ ರಂಜಿತಾಗೆ ಹೇಳಿದ್ದರು. [ಚಿತ್ರಗಳಲ್ಲಿ ನೋಡಿ ಸ್ವಾತಂತ್ರೋತ್ಸವ ಸಂಭ್ರಮ, ಸಡಗರ]
ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 10 ಅಡಿ ಎತ್ತರದ ಕಬ್ಬಿಣದ ಕಂಬವನ್ನು ರಂಜಿತಾ ಏರಿದಾಗ ಹಗ್ಗ ಕುತ್ತಿಗೆಗೆ ಸಿಲುಕಿ, ಉರುಳಾಗಿ ಜಾರಿ ಕಂಬದ ಅರ್ಧ ಭಾಗದಲ್ಲೇ ನೇತಾಡುತ್ತಿದ್ದಳು. ಶಾಲೆ ಬಳಿ ನಿಂತಿದ್ದ ಸಾರ್ವಜನಿಕರು ತಕ್ಷಣದ ಹಗ್ಗವನ್ನು ಕತ್ತರಿಸಿ ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದರು.
ದೂರು ದಾಖಲು : ರಂಜಿತಾ ಧ್ವಜದ ಕಂಬದಿಂದ ಬಿದ್ದು ಗಾಯಗೊಂಡಿರುವುದಕ್ಕೆ ಮುಖ್ಯ ಶಿಕ್ಷಕಿ ಪ್ರಸಿಲ್ಲಾ ರೋಡ್ರಿಗಸ್ ಮತ್ತು ಸಹ ಶಿಕ್ಷಕಿ ಕೋಮಲಾ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆಕೆಯ ತಂದೆ ನಾಗ ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ. ಪೊಲೀಸರು ಇಬ್ಬರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ ಹಾಗೂ ಐಪಿಸಿ 338 ( ನಿರ್ಲಕ್ಷ್ಯ) ಕಾಯ್ದೆಯದಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications