ಚಾಮುಂಡಿ ಬೆಟ್ಟದ ಪಿಡಿಒ ವಿರುದ್ಧ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಪ್ರತಿಭಟನೆ
ಮೈಸೂರು, ಫೆಬ್ರವರಿ 03: ಮೈಸೂರು ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿಯ ಪಿಡಿಓ ರೂಪೇಶ್ ವಿರುದ್ಧ ಜಿಲ್ಲಾ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿದ್ದಾರೆ. ಹಾಗೂ ಸುಳ್ಳು ದಾಖಲೆ ನೀಡಿ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಅಂಬಿಕಾ ಎಂಬುವರ ವಿರುದ್ಧ ಕೂಡ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ನಗರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶವನ್ನು ಹೊರ ಹಾಕಲಾಗಿದೆ. ಅಲ್ಲದೇ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿಯ ಪಿಡಿಓ ರೂಪೇಶ್ ತಮಗೆ ಅಧಿಕಾರ ಇಲ್ಲದಿದ್ದರೂ ಸರ್ವೆ ನಂಬರ್ 64/1ಕ್ಕೆ ಖಾತೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಸದಸ್ಯರ ಚುನಾವಣೆಯಲ್ಲಿ ಸುಳ್ಳು ದಾಖಲಾತಿಗಳನ್ನು ಸರ್ಕಾರಕ್ಕೆ ಸಲ್ಲಿಸಿ ಚುನಾವಣೆಯಲ್ಲಿ ಗೆದ್ದಿರುವ ಅಂಬಿಕಾ ಪಂಚಾಯಿತಿ ಜಾಗವನ್ನು ಒತ್ತುವರಿ ಮಾಡಿ ಅವರ ಅಧಿಕಾರ ದುರುಪಯೋಗಿಸಿಕೊಂಡಿದ್ದಾರೆ. ಅನುಮತಿ ಪಡೆಯದೇ ಮನೆ ಕಟ್ಟಿ ಗೃಹಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪಿಡಿಓ ರೂಪೇಶ್ ಮುಂದಿನ ದಿನಗಳಲ್ಲಿ ನಿಮಗೆ ತೊಂದರೆ ನೀಡುವುದಾಗಿ ಹೆದರಿಸುತ್ತಿದ್ದಾರೆ. ಇದೆಲ್ಲವೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿದಿದ್ದರೂ ಆಮಿಷಗಳಿಗೆ ಒಳಗಾಗಿ ಸ್ಥಳ ಪರಿಶೀಲನೆ ಮಾಡದೇ, ದಾಖಲಾತಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದಾರೆ.
ಹಿಡುವಳಿ ಜಮೀನಿಗೆ ಗ್ರಾಮ ಪಂಚಾಯಿತಿಯ ಪಿಡಿಓ ಖಾತೆ ಮಾಡಿದ್ದರೂ ತಹಶೀಲ್ದಾರ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಸುಮ್ಮನೆ ಕುಳಿತಿದ್ದಾರೆ. ಚಾಮುಂಡಿ ಬೆಟ್ಟ ಕುಸಿಯುತ್ತಿರುವುದರಿಂದ ಜಿಲ್ಲಾಧಿಕಾರಿ ಹೊಸದಾಗಿ ಮನೆ ಕಟ್ಟಬಾರದೆಂದು ಆದೇಶಿಸಿದ್ದರೂ ಪಂಚಾಯಿತಿ ಸದಸ್ಯೆ ಅಂಬಿಕಾ ಆದೇಶ ಉಲ್ಲಂಘಿಸಿ ಮನೆ ಕಟ್ಟುತ್ತಿದ್ದಾರೆ ಎಂದು ಕಿಡಿಕಾರಿದರು.
ಪಂಚಾಯಿತಿ ಆಸ್ತಿ ಉಳಿಸಬೇಕಾದ ಪಿಡಿಓ ರೂಪೇಶ್ ನಿವೃತ್ತಿ ಅಂಚಿನಲ್ಲಿದ್ದಾರೆ. ಆಮಿಷಗಳಿಗೆ ಒಳಗಾಗಿ ಹೊಸದಾಗಿ ಯಾರೇ ಮನೆ ಕಟ್ಟಿದರೂ, ಒತ್ತುವರಿ ಮಾಡಿದ್ದರೂ ಯಾವುದನ್ನೂ ಕೇಳದೇ ಬಿಟ್ಟಿರುವ ಇವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಅಂಬಿಕಾ ಅವರ ಸದಸ್ಯತ್ವ ರದ್ದುಪಡಿಸಿ, ಸುಳ್ಳು ದಾಖಲೆ ನೀಡಿರುವುದರಿಂದ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷೆ ವಿ.ಪಿ.ಸುಶೀಲ, ಪ್ರಧಾನ ಕಾರ್ಯದರ್ಶಿ ಎಂ.ಪುಟ್ಟರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.












Click it and Unblock the Notifications