ದುನಿಯಾ ವಿಜಯ್ ಬಗ್ಗೆ ನಿರ್ಮಾಪಕ ಮುನಿರತ್ನ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು..
ಮೈಸೂರು, ಸೆಪ್ಟೆಂಬರ್. 25 : ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ದರ್ಶನ್ ಈಗ ಆರಾಮಾಗಿದ್ದಾರೆ. ಕೈಗೆ ಸ್ವಲ್ಪ ಪೆಟ್ಟಾಗಿದೆ ಎಂಬುದು ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಇಲ್ಲ ಎಂದು ನಿರ್ಮಾಪಕ ಮುನಿರತ್ನ ತಿಳಿಸಿದ್ದಾರೆ.
ದರ್ಶನ್ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದರ್ಶನ್ ಶೀಘ್ರದಲ್ಲೇ ಗುಣಮುಖರಾಗುತ್ತಾರೆ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ಅಭಿನಯದ ಎಲ್ಲ ದೃಶ್ಯಗಳ ಶೂಟಿಂಗ್ ಮುಗಿದಿದೆ. ಡಬ್ಬಿಂಗ್ ಸಹ ಮುಗಿಸಿಕೊಟ್ಟಿದ್ದಾರೆ. ಗ್ರಾಫಿಕ್ಸ್ ನಿಂದಾಗಿ ಚಿತ್ರ ಬಿಡುಗಡೆಗೆ ತಡವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದರು.
ಇದೇ ವೇಳೆ ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಭಿಮಾನಿಗಳಿಗೆ ನಟರು ಆದರ್ಶಪ್ರಾಯವಾಗಿರಬೇಕು. ಕನ್ನಡ ಚಿತ್ರರಂಗ ಅಂದರೆ ಡಾ. ರಾಜ್ ಹಾಗೂ ವಿಷ್ಣುವರ್ಧನ್ ನೆನಪಾಗುತ್ತಾರೆ. ಚಿತ್ರರಂಗದ ನಟರು ಸೂಕ್ಷ್ಮ ಮಾತುಗಳನ್ನಾಡಬೇಕು. ಈ ರೀತಿ ಬೀದಿಯಲ್ಲಿ ಜಗಳವಾಡಿಕೊಂಡು ನಿಲ್ಲಬಾರದು.

ರಾಜ್, ವಿಷ್ಣುರವರ ಅದೆಷ್ಟೋ ಚಿತ್ರಗಳು ಇಂದಿಗೂ ಮಾದರಿಯಾಗಿದೆ. ಅವರನ್ನು ನೋಡಿ ಕಲಿಯಬೇಕೇ ವಿನಃ ಈ ರೀತಿ ಬೀದಿ ಜಗಳ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಹ ನಿರ್ಮಾಪಕರ ಸಂಘದಿಂದ ಸಭೆ ಕರೆಯುತ್ತೇನೆ. ನಾನು ಮತ್ತು ಅಂಬರೀಶ್ ಇಬ್ಬರು ಜೊತೆಯಲ್ಲಿ ಕುಳಿತು ವಿಜಯ್ ಮತ್ತು ಕಿಟ್ಟಿಯನ್ನು ಕರೆಸಿ ಮಾತಾಡುತ್ತೇವೆ. ಅವರಿಬ್ಬರ ಬಳಿ ಮಾತನಾಡಿದ ಮೇಲೆ ಅವರ ಸ್ನೇಹ ಚಿಗುರುವಂತೆ ಮಾಡುತ್ತೇನೆ.
ಚಿತ್ರರಂಗದಿಂದ ದುನಿಯಾ ವಿಜಿ ಬಹಿಷ್ಕಾರ ಸಾಧ್ಯವಿಲ್ಲ
ದುನಿಯಾ ವಿಜಯ್ ಇದರಿಂದ ಹೊರಗೆ ಬಂದು ಒಳ್ಳೆಯ ಚಿತ್ರ ಮಾಡಲಿ. ಅವರ ಅಭಿಮಾನಿಗಳಿಗೆ ನಿರಾಸೆಯಾಗುವಂತೆ ನಡೆದುಕೊಳ್ಳದೆ ಇರಲಿ. ಈ ಸಭೆಯಲ್ಲಿ ನಟ ಅಂಬರೀಶ್ ಸಹ ಭಾಗವಹಿಸುತ್ತಾರೆ ಎಂದರು.












Click it and Unblock the Notifications