ವಿಡಿಯೋ ಮಾಡಲು ಹೇಳಿ ನೀರಿಗೆ ಧುಮುಕಿದ ಪೂಜಾರಿ ಕಣ್ಮರೆ
ಮೈಸೂರು, ಆಗಸ್ಟ್ 12 : ಪ್ರವಾಹದಲ್ಲಿ ಈಜುವ ಸಾಹಸಕ್ಕೆ ಮುಂದಾದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಮೈಸೂರಿನ ನಂಜನಗೂಡಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಾವೇರಿಯಲ್ಲಿ ಮುಳುಗಿ ಮೂವರು ಜಲಸಮಾಧಿ
ನಂಜನಗೂಡು ಮಕ್ಕಾಜಿ ಕಲ್ಯಾಣ ಮಂಟಪ ಸಮೀಪದ ನಿವಾಸಿ ವೆಂಕಟೇಶ್ (55) ನದಿಗಿಳಿದು ನಾಪತ್ತೆಯಾಗಿರುವ ವ್ಯಕ್ತಿ. ಪಟ್ಟಣದ ಲಿಂಗ ಭಟ್ಟರ ಗುಡಿಯ ಪೂಜಾರಿಯಾಗಿದ್ದ ಇವರು ನಾಲ್ಕೈದು ಮಂದಿ ಸ್ನೇಹಿತರೊಂದಿಗೆ ಹೊಸ ರೈಲ್ವೆ ಸೇತುವೆ ಬಳಿ ಹೋಗಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಈಜುವುದಾಗಿ ಸವಾಲೆಸೆದಿದ್ದಾರೆ. ಅಲ್ಲದೇ ತಾನು ಈಜುವುದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡುವಂತೆ ಸ್ನೇಹಿತರಿಗೆ ತಿಳಿಸಿ ನದಿಗೆ ಧುಮುಕಿದ್ದಾರೆ.

ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಲೀಲಾಜಾಲವಾಗಿ ಈಜುತ್ತಿದ್ದ ವೆಂಕಟೇಶ್ ಕೆಲ ಹೊತ್ತಿನ ಬಳಿಕ ಮುಳುಗಿದ್ದಾರೆ. ಮತ್ತೆ ಮೇಲೆದ್ದು ಸ್ವಲ್ಪ ದೂರ ಈಜಿದ ಬಳಿಕ ನಂತರ ನಾಪತ್ತೆಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಬಿತ್ತರವಾದ ಬಳಿಕ ವೆಂಕಟೇಶ್ ಮನೆಯವರಿಗೆ ಅವರು ನಾಪತ್ತೆಯಾಗಿರುವುದು ತಿಳಿದುಬಂದಿದೆ. ಭಾನುವಾರ ವೆಂಕಟೇಶ್ ಅವರ ಮಾವ ಸುಬ್ರಹ್ಮಣ್ಯ ಅವರು ನಂಜನಗೂಡು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಮೂರು ದಿನಗಳ ಹಿಂದೆ ವೆಂಕಟೇಶ್ ನಾಪತ್ತೆ ಆಗಿದ್ದು, ಅವರು ಈಜಲೆಂದು ನದಿಗೆ ಧುಮುಕಿದಾಗ ವಿಡಿಯೋ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ವೆಂಕಟೇಶ್ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದ್ದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಬೇಕಾಗಿದೆ. ಈ ಹಿಂದೆಯೂ ವೆಂಕಟೇಶ್ ತುಂಬಿ ಹರಿಯುವ ನದಿಯಲ್ಲಿ ಧುಮುಕಿದ್ದರು.












Click it and Unblock the Notifications