ಖಾಸಗಿ ದರ್ಬಾರ್ಗಾಗಿ ರತ್ನಖಚಿತ ಸಿಂಹಾಸನ ಜೋಡಣೆ
ಮೈಸೂರು, ಸೆಪ್ಟೆಂಬರ್ 24: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ನಡೆಯಲಿರುವ ಖಾಸಗಿ ದರ್ಬಾರ್ಗಾಗಿ ಅರಮನೆಯ ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾಸನದ ಜೋಡಣಾ ಕಾರ್ಯ ಇಂದು ನಡೆಯಲಿದೆ.
ಖಾಸಗಿ ದರ್ಬಾರ್ ಸೆ.29ರಿಂದ ಅ.7ರವರೆಗೆ ಅರಮನೆಯಲ್ಲಿ ಪ್ರತಿದಿನ ಸಂಜೆ ನಡೆಯಲಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ಸಂಬಂಧ ಜೋಡಣಾ ಕಾರ್ಯ ಬೆಳಗ್ಗೆ 10ರಿಂದ ನಡೆಯಲಿದ್ದು, ಸಿಂಹಾಸನವನ್ನು ಬಿಗಿ ಭದ್ರತೆಯಲ್ಲಿ ದರ್ಬಾರ್ ಹಾಲ್ಗೆ ತಂದು ಬಳಿಕ ಜೋಡಣಾ ಕಾರ್ಯ ನಡೆಯಲಿದೆ.
ಮಹಾರಾಜರ ಖಾಸಗಿ ದರ್ಬಾರ್: ನಿಜಕ್ಕೂ ಹೇಗೆ ನಡೆಯುತ್ತಿತ್ತು?
ಈ ವೇಳೆ ವಿವಿಧ ಪೂಜಾ ಕಾರ್ಯ, ಹೋಮ, ಶಾಂತಿ ನೆರವೇರಿಸಿದ ಬಳಿಕ ಸ್ಟ್ರಾಂಗ್ ರೂಮ್ ತೆರೆಯಲಾಗುತ್ತದೆ. ಸಿಂಹಾಸನ ಜೋಡಣಾ ಕಾರ್ಯಕ್ಕೆ ಬಳಸಿಕೊಳ್ಳುವ ಸಿಬ್ಬಂದಿಗೆ ಮೊಬೈಲ್ ತೆಗೆದುಕೊಂಡು ಬರದಂತೆ ಸೂಚನೆ ನೀಡಲಾಗಿದ್ದು, ಸಿಸಿ ಕ್ಯಾಮರಾಗಳಿಗೂ ಪರದೆ ಹಾಕಲಾಗುತ್ತದೆ. ರಾಜವೈಭವದ ದಿನಗಳಲ್ಲಿ ನವರಾತ್ರಿ ದಿನದಂದು ರಾಜರು ಒಂಬತ್ತು ದಿನಗಳ ಕಾಲ ದರ್ಬಾರ್ ನಡೆಸುತ್ತಿದ್ದರು. ಆ ವೈಭವವನ್ನು ದಸರಾ ಸಂದರ್ಭ ಇಂದಿಗೂ ನಡೆಸಲಾಗುತ್ತಿದ್ದು ಈ ಖಾಸಗಿ ದರ್ಬಾರ್ಗೆ ಸಾರ್ವಜನಿಕರ ಪ್ರವೇಶವಿರುವುದಿಲ್ಲ.
ಸೆ.29ರಂದು ಖಾಸಗಿ ದರ್ಬಾರ್ ಆರಂಭಗೊಳ್ಳಲಿದ್ದು, ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಯುಧ ಪೂಜೆ ದಿನವಾದ ಅ.7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಹಾಗೂ ವಿಜಯದಶಮಿ ದಿನವಾದ ಅ.8ರಂದು ದಿನವಿಡೀ ಅರಮನೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಮೈಸೂರು ದಸರಾ: ಖಾಸಗಿ ದರ್ಬಾರ್ ಗೆ ಸಿದ್ಧವಾದ ರತ್ನ ಖಚಿತ ಸಿಂಹಾಸನ
ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯ ನಡೆಯುವುದರಿಂದ ಮಂಗಳವಾರ ಅರಮನೆಗೆ ಪ್ರವಾಸಿಗರ ಪ್ರವೇಶವನ್ನು ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಿಷೇಧಿಸಲಾಗಿದೆ.
ಇನ್ನು ಈ ರತ್ನಖಚಿತ ಸಿಂಹಾಸನದ ಬಗ್ಗೆ ಐತಿಹಾಸಿಕ ಕಥೆಗಳಿರುವುದನ್ನು ಕಾಣಬಹುದಾಗಿದೆ. ಪಾಂಡವರ ಕಾಲದೆನ್ನಲಾದ ಸಿಂಹಾಸನವನ್ನು ಕಂಪುಲ ರಾಜನು ತಂದು ಪೆನಗೊಂಡದಲ್ಲಿ ಹೂತಿಟ್ಟಿದ್ದನಂತೆ. 1338ರಲ್ಲಿ ಮಹರ್ಷಿ ವಿದ್ಯಾರಣ್ಯರು ಧ್ಯಾನದೃಷ್ಟಿಯಿಂದ ಇದನ್ನು ಅರಿತು ವಿಜಯನಗರದ ಚಕ್ರಾಧಿಪತ್ಯದ ಸ್ಥಾಪಕ ಹರಿಹರನಿಗೆ ತಿಳಿಸಿದರೆಂದು ಅದರಂತೆ ಹೊರತೆಗೆದು 150 ವರ್ಷಗಳ ಕಾಲ ಆನೆಗೊಂದಿಯಲ್ಲಿ ಅಲಂಕರಿಸಿದರೆಂದೂ, ಬಳಿಕ ವಿಜಯನಗರದ ಅವನತಿಯ ವೇಳೆಗೆ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ರಾಯಭಾರಿಯ ಅರಮನೆಗೆ ಸಾಗಿಸಲಾಯಿತೆಂದು ಹೇಳಲಾಗಿದೆ. ಆ ಬಳಿಕ 1609ರಲ್ಲಿ ಆಗಿನ ಮೈಸೂರು ಅರಸರಾದ ರಾಜಒಡೆಯರ್ ಶ್ರೀರಂಗರಾಜುಲುರನ್ನು ತಲಕಾಡಿಗೆ ಓಡಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. 1610ರಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದಾಗ ಸಿಂಹಾಸನವನ್ನು ಮೈಸೂರಿನ ಅರಮನೆಗೆ ಸಾಗಿಸಲಾಯಿತು ಎಂದು ಹೇಳಲಾಗಿದೆ.
ದಸರಾ ಹಿನ್ನೆಲೆ: ರತ್ನಖಚಿತ ಸಿಂಹಾಸನ ಜೋಡಣೆಗೆ ಕ್ಷಣಗಣನೆ ಆರಂಭ
ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸ ಪಕ್ಷಿಗಳನ್ನಿಡಲಾಗಿದೆ. ನಾಗದೇವತೆಗಳ ಚಿತ್ರಗಳು, ಸ್ವಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ. ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಶ್ಲೋಕಗಳಿರುವುದನ್ನು ಕಾಣಬಹುದಾಗಿದೆ.