ಇನ್ನು ಮೈಸೂರಿನಲ್ಲೇ ನೆಲೆಸುತ್ತೇನೆ : ಪ್ರತಾಪ್ ಸಿಂಹ
ಬೆಂಗಳೂರು, ಮಾ. 17 : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಧುಮುಕಿರುವ ಪ್ರತಾಪ್ ಸಿಂಹ ಭರ್ಜರಿಯಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಸಂಚರಿಸುವ ಮೂಲಕ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಭಾನುವಾರ ನಮೋ ಬ್ರಿಗೇಡ್ ಮೈಸೂರು ಘಟಕ ವತಿಯಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಏರ್ಪಡಿಸಿದ್ದ ಬೈಕ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಾಪ್ ಸಿಂಹ, ನಾನು ಹಾಸನ ಜಿಲ್ಲೆಯವನಾದರೂ, ಮೈಸೂರಿನೊಂದಿಗೆ ಮೊದಲಿನಿಂದಲೂ ಒಡನಾಟವಿದೆ. ನನ್ನ ತಂದೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಓದಿದವರು. ನಾನು ಇನ್ನು ಮುಂದೆ ಮೈಸೂರಿನಲ್ಲಿಯೇ ನೆಲೆಸುತ್ತೇನೆ ಎಂದು ಹೇಳಿದರು. [ಬಿಜೆಪಿ ಸೇರಿದ ಪ್ರತಾಪ್ ಸಿಂಹ]
ಸೋಮವಾರ ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿರುವ ಪ್ರತಾಪ್ ಸಿಂಹ ಅವರು, ಕುಶಾಲನಗರ ಸೇರಿದಂತೆ ವಿವಿಧ ಸ್ಥಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಮಡಿಕೇರಿಯಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ಕೆಜಿ ಬೋಪಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಾಪ್ ಸಿಂಹ ಜೊತೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. (ಚಿತ್ರಕೃಪೆ : ಪ್ರತಾಪ್ ಸಿಂಹ ಫಾರ್ ಎಂಪಿ)
ಮೈಸೂರು ಕಾಂಗ್ರೆಸ್ ಭದ್ರಕೋಟೆಯಲ್ಲ
ಭಾನುವಾರ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ ಪ್ರತಾಪ್ ಸಿಂಹ, ಮೈಸೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂದು ನಾನು ಭಾವಿಸಿಲ್ಲ. ಈ ಹಿಂದೆ 2 ಬಾರಿ ಬಿಜೆಪಿ ಜಯಗಳಿಸಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವಲ್ಲಿ ಮೈಸೂರು ಭಾಗದಿಂದ ಒಂದು ಕ್ಷೇತ್ರ ಗೆಲ್ಲಿಸುವುದಷ್ಟೆ ನನ್ನ ಉದ್ದೇಶ ಎಂದು ಹೇಳಿದರು.
ಮೈಸೂರಿನಲ್ಲಿ ನೆಲೆಸುತ್ತೇನೆ
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರತಾಪ್ ಸಿಂಹ, ನಾನು ಮೂಲತಃ ಹಾಸನ ಜಿಲ್ಲೆಯವನಾದರೂ, ಮೈಸೂರಿನೊಂದಿಗೆ ಮೊದಲಿನಿಂದಲೂ ಒಡನಾಟವಿದೆ. ನನ್ನ ತಂದೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಓದಿದವರು. ನಾನು ಇನ್ನು ಮುಂದೆ ಮೈಸೂರಿನಲ್ಲಿಯೇ ನೆಲೆಸಿ, ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದರು.
ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿಲ್ಲ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದ ಅಭ್ಯರ್ಥಿಯಾಗಿರುವ ನಾನು ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದೇನೆ. ಹಿರಿಯ ನಾಯಕರಾದ ಸಿ.ಎಚ್.ವಿಜಯಶಂಕರ್ ಅವರ ಆಶೀರ್ವಾದ ಪಡೆದಿದ್ದೇನೆ ಎಂದು ಸಿಂಹ ಹೇಳಿದರು.
ಕೊಡಗು ಜಿಲ್ಲಾ ಪ್ರವಾಸ
ಭಾನುವಾರ ಸಂಜೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಪ್ರತಾಪ್ ಸಿಂಹ ಕುಶಾಲನಗರದ ಶ್ರೀ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಾಲಯಕ್ಕೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.
ಸೋಮವಾರಪೇಟೆಯಲ್ಲಿ ಸಭೆ
ಸೋಮವಾರ ಪ್ರತಾಪ್ ಸಿಂಹ ಅವರು ಸೋಮವಾರಪೇಟೆಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶಾಸಕರಾದ ಅಪ್ಪಚು ರಂಜನ್ ಮತ್ತು ಕೆಜಿ ಬೋಪಯ್ಯ ಅವರು ಪ್ರತಾಪ್ ಸಿಂಹ ಅವರ ಜೊತೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಉತ್ತಮ ಭಾರತಕ್ಕಾಗಿ ಬಿಜೆಪಿಗೆ ಮತ ನೀಡುವಂತೆ ಸಿಂಹ ಮನವಿ ಮಾಡಿದರು.