ದೇವೇಗೌಡರ ವಂಶದಕುಡಿ ಹುಣಸೂರಿಂದ ಕಣಕ್ಕೆ?
ಮುಂದಿನ ವಿಧಾನಸಭಾ ಚುನಾವಣೆಗೆ ಹುಣಸೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ ಅಲ್ಲಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೈಸೂರು, ಮೇ 04: 2018 ವಿಧಾನ ಸಭಾ ಚುನಾವಣೆಗೆ ದೇವೇಗೌಡರ ವಂಶದ ಕುಡಿಯನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದ್ದು, ಅದರ ಸೂಚನೆ ಎಂಬಂತೆ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿರುವುದು ಕಂಡುಬಂದಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಹುಣಸೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ ಅಲ್ಲಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ಐದು ವರ್ಷಗಳಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್ ಗೌಡ ತೊಡಗಿಸಿಕೊಂಡಿದ್ದರು. 2018ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಅವರದ್ದಾಗಿತ್ತು.[ಜಿಲ್ಲಾಧಿಕಾರಿಗೆ ಧಮ್ಕಿ: ಸಿಎಂ ಆಪ್ತ ಮರಿಗೌಡ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕ]
ಆದರೆ ಇದೀಗ ಪ್ರಜ್ವಲ್ ರೇವಣ್ಣ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದರಿಂದಾಗಿ ಎಲ್ಲವೂ ಅದಲು ಬದಲಾಗುವ ಸಾಧ್ಯತೆ ಕಂಡು ಬರುತ್ತಿದೆ. ಪಕ್ಷದ ಮೂಲಗಳು ಹೇಳುವ ಪ್ರಕಾರ ಜಿ.ಡಿ.ಹರೀಶ್ ಗೌಡರಿಗೆ ಮೈಸೂರು ಚಾಮರಾಜ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿದೆ. ಈ ಕ್ಷೇತ್ರದಿಂದ ಈ ಹಿಂದೆ ಶಾಸಕ ಶಂಕರಲಿಂಗೇಗೌಡರು ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ವಾಸು ಅವರ ಎದುರು ಪರಾಭವಗೊಂಡಿದ್ದರು.
ಇದೀಗ ಶಂಕರಲಿಂಗೇಗೌಡರು ನಿಧನರಾಗಿರುವ ಹಿನ್ನಲೆಯಲ್ಲಿ ಜಿ.ಡಿ.ಹರೀಶ್ ಗೌಡರಿಗೆ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಹುಣಸೂರು ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸುವುದು ದೇವೇಗೌಡರ ಕುಟುಂಬದ ಆಲೋಚನೆಯಾಗಿದೆ.
ಸಂಘಟನೆಯಲ್ಲಿ ತಲ್ಲೀನರಾದ ಪ್ರಜ್ವಲ್
ಹೀಗಾಗಿ ಚುನಾವಣೆಗೆ ಇನ್ನೂ ವರ್ಷವಿರುವಾಗಲೇ ಎಲ್ಲ ಸಿದ್ಧತೆಗಳನ್ನು ಮಾಡುತ್ತಿರುವ ಜೆಡಿಎಸ್ ಚುನಾವಣಾ ತಂತ್ರಗಳನ್ನು ಈಗಿನಿಂದಲೇ ಆರಂಭಿಸಿದೆ. ಪ್ರಜ್ವಲ್ ರೇವಣ್ಣ ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಮುಖಂಡರನ್ನು ಭೇಟಿ ಮಾಡಿ ಸಂಘಟನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರಲ್ಲದೆ, ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ ಮುಂದಿನ ಚುನಾವಣೆಗೆ ಜೆಡಿಎಸ್ ನಿಂದ ನಾನೇ ಅಭ್ಯರ್ಥಿ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.
ಪ್ರಜ್ವಲ್ ಅಚ್ಚರಿಯ ಮಾತು
ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರಾಡಿದ ಮಾತುಗಳು ಅಚ್ಚರಿಯನ್ನುಂಟು ಮಾಡಿದೆ. "[ದೇವೇಗೌಡರಿಗೆ ಮತ್ತೊಮ್ಮೆ ಸಿದ್ದು ಕೃತಜ್ಞತೆ ಹೇಳಿದ್ದೇಕೆ?]
ಪ್ರಜ್ವಲ್ ಹೇಳಿದ್ದೇನು?
ಹುಣಸೂರು ತಾಲೂಕಿನ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿ ಬಗ್ಗೆ ಗೊಂದಲ ಇರುವುದು ನಿಜ. ಆದರೆ ಈ ತಾಲೂಕಿನ ಇಬ್ಬರು ಮಾಜಿ ಶಾಸಕರು ಹಾಗೂ ಹಾಲಿ ಶಾಸಕರಾಗಿರುವ ಜಿ.ಟಿ.ದೇವೇಗೌಡರು ಮರಳಿ ಪಕ್ಷ ಸೇರಲು ಹಾಗೂ ಎಸ್ ಚಿಕ್ಕಮಾದು ಅವರು ಪಕ್ಷಕ್ಕೆ ಸೇರ್ಪಡೆಗೊಂಡಾಗ ವಿಧಾನ ಪರಿಷತ್ ಸದಸ್ಯ ರನ್ನಾಗಿ ಆಯ್ಕೆ ಮಾಡಲು ನನ್ನ ತಾಯಿ ಭವಾನಿ ಅವರು ಶ್ರಮಿಸಿದ್ದಾರೆ. ಅದರ ಋಣವನ್ನು ತೀರಿಸಲು ಅವರು ಹುಣಸೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಲ್ಲದೆ ನನ್ನ ಗೆಲುವಿಗೂ ಶ್ರಮಿಸಲಿದ್ದಾರೆ" ಎಂಬ ಅವರ ಮಾತು ಕ್ಷೇತ್ರದ ಜನರಲ್ಲಿ ಅಚ್ಚರಿ ಹುಟ್ಟಿಸಿದೆ.[ಜೆಡಿಎಸ್ ನಂತೆ ಕಾಂಗ್ರೆಸ್ ಕೂಡ ಅಪ್ಪ-ಮಕ್ಕಳ ಪಕ್ಷ: ವಿಶ್ವನಾಥ್]
ಗೆಲ್ಲುವ ವಿಶ್ವಾಸ
ಪ್ರಜ್ವಲ್ ರೇವಣ್ಣ ಅವರ ಈ ಮಾತುಗಳನ್ನು ಕೇಳಿದ ಬಳಿಕ ಹುಣಸೂರು ಕ್ಷೇತ್ರದಿಂದ ಅವರು ಜೆಡಿಎಸ್ ಅಭ್ಯರ್ಥಿ ಎನ್ನುವುದು ಖಚಿತವಾದಂತೆಯೇ. ಬಹಳಷ್ಟು ಹುಮ್ಮಸ್ಸಿನಲ್ಲಿರುವ ಅವರು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿಯೂ ಇದ್ದಾರೆ.
ಸೂಕ್ತ ಸವಾಲೆಸೆಯುತ್ತಾರಾ ಪ್ರಜ್ವಲ್?
ರಾಜಕೀಯವಾಗಿ ಅನುಭವ ಹೊಂದಿರುವ ಮತ್ತು ಜನರ ಒಡನಾಟದಲ್ಲಿರುವ ಹಾಲಿ ಶಾಸಕ ಕಾಂಗ್ರೆಸ್ ನ ಎಚ್.ಪಿ. ಮಂಜುನಾಥ್ ಮುಂದೆ ಪ್ರಜ್ವಲ್ ರೇವಣ್ಣ ಯಾವ ರೀತಿ ಸ್ಪರ್ಧೆವೊಡ್ಡಿ ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.