ನಿರ್ವಹಣೆಯ ಕೊರತೆ; ಸೋರುತ್ತಿದೆ ವರುಣಾ ನಾಲೆ
ಮೈಸೂರು, ಡಿಸೆಂಬರ್ 24: ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಕೃಷಿ ಜಮೀನಿಗೆ ನೀರು ಸರಬರಾಜು ಮಾಡುವ ವರುಣಾ ಕಾಲುವೆಯ ಹಲವು ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಅಮೂಲ್ಯವಾದ ನೀರು ವ್ಯರ್ಥವಾಗುವ ಜೊತೆಗೆ ಇದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.
ಮೈಸೂರು ನಗರದ ಹೊರವಲಯದ ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಹಾದು ಹೋಗುವ ಕಾಲುವೆ ಜನರ ಪ್ರಾಣಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ನಿರ್ವಹಣೆಯನ್ನು ಸರಿಯಾಗಿ ಮಾಡದ ಕಾರಣ ನೀರು ವ್ಯರ್ಥವಾಗುತ್ತಿದೆ.
ದಿವಂಗತ ಡಿ .ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ವರುಣಾ ನಾಲೆ (1979) ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆಗ ಮಂತ್ರಿಮಂಡಲದಲ್ಲಿದ್ದ ಎಸ್. ಎಂ. ಕೃಷ್ಣ ಈ ಯೋಜನೆ ವಿರೋಧಿಸಿ ರಾಜೀನಾಮೆ ನೀಡಿದ್ದರು.
ಆದರೆ, ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗದ್ದಾಗ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಾಗ 1998ರಲ್ಲಿ ಈ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿ, ಹಣ ಬಿಡುಗಡೆ ಮಾಡಿತು.

ವರುಣಾ ನಾಲೆಯಲ್ಲಿ ಸೋರಿಕೆ
ಈ ಕಾಲುವೆಯ 135 ಕಿ. ಮೀ. ಉದ್ದವಿದ್ದು ಮೈಸೂರು, ತಿ. ನರಸೀಪುರ, ಎಚ್. ಡಿ. ಕೋಟೆ, ನಂಜನಗೂಡು ತಾಲೂಕು ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ 80 ಸಾವಿರ ಎಕರೆ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. 2015ರಲ್ಲಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗಿರುವ ಜಾಗದಲ್ಲಿ ನಾಲೆ ನೀರು ಸೋರಿಕೆಯಾಗುತ್ತಿತ್ತು.

ಸೋರಿಕೆ ತಡೆಯಲಾಗಿತ್ತು
ಆಗ ಸೋರಿಕೆ ಕಂಡು ಬಂದಾಗ ಕಾವೇರಿ ನೀರಾವರಿ ನಿಗಮ ನಿಯಮಿತವು 3 ಕೋಟಿ ರೂಪಾಯಿ ವೆಚ್ಚ ಮಾಡಿ ನೀರಿನ ಸೋರಿಕೆಯನ್ನು ಪಾಲಿಮರ್ ತಂತ್ರಜ್ಞಾನ ಬಳಸಿ ಸರಿಪಡಿಸಿತ್ತು. ಆದರೆ, ದುರಸ್ತಿಯಾದ ಕೇವಲ 5 ವರ್ಷದಲ್ಲಿ ಮತ್ತೆ ಈ ಸಮಸ್ಯೆ ಕಾಣಿಸಿಕೊಂಡಿದೆ. ನಂಜನಗೂಡಿಗೆ ಹೋಗುವ ಮಾರ್ಗದಲ್ಲಿಯೂ ಅನೇಕ ಕಡೆಗಳಲ್ಲಿ ಕಾಲುವೆಯಲ್ಲಿ ಸೋರಿಕೆ ಕಂಡು ಬಂದಿದೆ.

ನಿರ್ವಹಣೆಯ ಸಮಸ್ಯೆ
ನಿರ್ವಹಣೆಯ ಕೊರತೆಯ ಕಾರಣ ಕಾಲುವೆಯಲ್ಲಿ ಸೋರಿಕೆ ಕಂಡುಬಂದಿದೆ. ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವ ಬಗ್ಗೆ ರೈತರು ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪ ಮಾಡುತ್ತಿದ್ದಾರೆ.

ಶಾಶ್ವತ ಪರಿಹಾರ ಬೇಕು
ಈ ಕುರಿತು ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮ, "ಕೇವಲ ಐದೇ ವರ್ಷಗಳಲ್ಲಿ ಕಾಲುವೆ ಪುನಃ ಸೋರಿಕೆಯಾಗಲು ಕಾರಣವೇನು?, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವೇ?, ಇದನ್ನು ಕಂಡು ಹಿಡಿದು ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದರು.












Click it and Unblock the Notifications