ಮೈಸೂರು: ಉದ್ಘಾಟನೆಗೆ ಮುನ್ನವೇ ಸೋರುತಿಹುದು ಶಾಲೆಯ ಮಾಳಿಗೆ!
ಮುಖ್ಯಮಂತ್ರಿ ಸಿದ್ದರಾಮಯ್ಯರ ವರುಣಾ ಕ್ಷೇತ್ರದ ಶಾಲೆಯೊಂದರ ಕಟ್ಟಡ ಉದ್ಘಾಟನೆಗೂ ಮುನ್ನವೇ ಸೋರುವುದಕ್ಕೆ ಆರಂಭಿಸಿದ್ದು, ಕಳಪೆ ಕಾಮಗಾರಿಗೆ ಸ್ಪಷ್ಟ ನಿದರ್ಶನವೆನ್ನಿಸಿದೆ.
ಮೈಸೂರು, ಜೂನ್ 2: ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಸರ್ಕಾರ ಹಲವು ಕಸರತ್ತು ನಡೆಸುತ್ತಿದ್ದು, ಈಗಾಗಲೇ ವಿಶೇಷ ದಾಖಲಾತಿ ಆಂದೋಲನದ ಮೂಲಕ ಅರಿವು ಮೂಡಿಸುತ್ತಿದೆ. ಆದರೆ ಸಿಎಂ ಕ್ಷೇತ್ರದಲ್ಲೇ ನಿರ್ಮಾಣವಾದ ಶಾಲಾ ಕಟ್ಟಡ ಉದ್ಘಾಟನೆಗೆ ಮುನ್ನವೇ ಸೋರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ರಾಜ್ಯಾದ್ಯಂತ ಬಹಳಷ್ಟು ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಗೊಳಗಾಗಿದ್ದು, ಅವುಗಳನ್ನು ದುರಸ್ತಿಪಡಿಸದ ಕಾರಣದಿಂದ ಮತ್ತು ಮೂಲಭೂತ ಸೌಲಭ್ಯದ ಕೊರತೆಯಿಂದಾಗಿ ಪೋಷಕರು ಈ ಶಾಲೆಗಳಿಗೆ ಸೇರಿಸದೆ ದೂರದ ಶಾಲೆಗಳಿಗೆ ಕಳುಹಿಸುತ್ತಿರುವುದು ಕಂಡು ಬಂದಿದೆ.[ಮೈಸೂರಿನಲ್ಲಿ ಉರುಳಿಗೆ ಸಿಲುಕಿ ಗಂಡು ಚಿರತೆ ಸಾವು]
ಮಕ್ಕಳಿಗೆ ಅಕ್ಷರ ದಾಸೋಹ, ಕ್ಷೀರಭಾಗ್ಯ, ಶೂಭಾಗ್ಯ ಹೀಗೆ ಎಲ್ಲವನ್ನೂ ಸರ್ಕಾರ ನೀಡುತ್ತಿದೆಯಾದರೂ ಶಿಥಿಲಗೊಂಡ ಕಟ್ಟಡದಲ್ಲಿ ಕುಳಿತು ಪಾಠ ಕೇಳುವ ಧೈರ್ಯ ಮಕ್ಕಳಿಗಿಲ್ಲವಾಗಿದೆ. ಆದರೂ ಬಹಳಷ್ಟು ಶಾಲೆಗಳಲ್ಲಿ ಶಿಥಿಲಗೊಂಡ ಕಟ್ಟಡಗಳಲ್ಲೇ ಪಾಠಪ್ರವಚನ ನಡೆಯುತ್ತಿವೆ.
ಒಂದೆಡೆ ಕಟ್ಟಡಗಳು ಹಳೆಯದಾಗಿ ದುಸ್ಥಿತಿಗೀಡಾಗಿ ಮಳೆಗೆ ಸೋರುತ್ತಿದ್ದರೆ, ನೂತನವಾಗಿ ಕಟ್ಟಿದ ಕಟ್ಟಡವೇ ಉದ್ಘಾಟನೆಗೆ ಮುನ್ನವೇ ಸೋರಿದರೆ ಯಾವ ರೀತಿಯಲ್ಲಿ ಕಟ್ಟಡವನ್ನು ನಿರ್ಮಿಸಿರಬಹುದು. ಇದರಲ್ಲಿ ಧೈರ್ಯವಾಗಿ ಕುಳಿತು ವಿದ್ಯಾರ್ಥಿಗಳು ಪಾಠ ಕಲಿಯಲು ಸಾಧ್ಯನಾ ಎಂಬ ಪ್ರಶ್ನೆಗಳು ನಮ್ಮನ್ನು ಕಾಡದಿರದು.

ಮುಖ್ಯಮಂತ್ರಿ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರವಾದ ನಂಜನಗೂಡು ತಾಲೂಕಿನ ಚಿಕ್ಕಯ್ಯನಛತ್ರ ಹೋಬಳಿ ವರುಣಾಕ್ಕೆ ಸೇರುವ ಹಳ್ಳಿದಿಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಇಂತಹ ಸ್ಥಿತಿ ಬಂದಿರುವಾಗ ಇತರೆ ಕಡೆಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳ ಸ್ಥಿತಿ ಹೇಗಿರಬಹುದು? ಎಂಬುದನ್ನು ಸುಲಭವಾಗಿ ಊಹಿಸಿಕೊಳ್ಳಬಹುದಾಗಿದೆ.[ಯಡಿಯೂರಪ್ಪ ಎರಡು ನಾಲಿಗೆ ಮನುಷ್ಯ: ಸಿದ್ಧರಾಮಯ್ಯ]

ಮೇಲ್ನೋಟಕ್ಕೆ ಸುಂದರ ಶಾಲೆ, ಒಳ ಹೊಕ್ಕರೆ...
ಸ್ಥಳೀಯ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಳ್ಳಿದಿಡ್ಡಿ ಗ್ರಾಮದ ಸರ್ಕಾರಿ ಶಾಲೆಗೆ ಜಿಪಂ ಅನುದಾನದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿತ್ತು. ಶೈಕ್ಷಣಿಕ ವರ್ಷದ ಆರಂಭದಲ್ಲೇ ಸೇವೆಗೆ ಒಪ್ಪಿಸುವ ಇರಾದೆಯೂ ಶಾಲಾ ಮಂಡಳಿಯದ್ದಾಗಿತ್ತು. ಮೇಲ್ನೋಟಕ್ಕೆ ಕಟ್ಟಡ ಸುಣ್ಣಬಣ್ಣ ಬಳಿದು ಸುಂದರವಾಗಿಯೇ ಕಾಣುತ್ತಿತ್ತು.[ಜೂನ್ 3 ರಂದು 'ಕೊಟ್ಟ ಮಾತು ದಿಟ್ಟ ಸಾಧನೆ' ಸಮಾವೇಶ]

ಒಂದೇ ಮಳೆಗೆ ಬಯಲಾಯ್ತು ಬಂಡವಾಳ!
ಸಿಎಂ ಕ್ಷೇತ್ರಕ್ಕೆ ಶಾಲೆ ಸೇರುವುದರಿಂದ ಕೆಲವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಉದ್ಘಾಟನೆ ಮಾಡುವ ಸಲಹೆ ನೀಡಿದರು. ಹೀಗಾಗಿ ಸಿದ್ದರಾಮಯ್ಯನವರು ನೀಡುವ ದಿನಾಂಕಕ್ಕಾಗಿ ಕಾಯತೊಡಗಿದರು. ಆದರೇ ಈ ನಡುವೆ ಸುರಿದ ಮಳೆ ಎಲ್ಲರನ್ನು ಬೆಚ್ಚಿ ಬೀಳಿದ್ದಲ್ಲದೆ, ಕಟ್ಟಡ ಕಾಮಗಾರಿ ಕಳಪೆ ಎಂಬುದನ್ನು ಸಾಬೀತು ಪಡಿಸಿದೆ.[ಅಂಧ ಕಲಾವಿದೆಗೆ ಧನಸಹಾಯ ಮಾಡಿ ಮಾನವೀಯತೆ ಮೆರೆದ ಸಿದ್ಧರಾಮಯ್ಯ]

ಇಂಥ ಕಟ್ಟಡದಲ್ಲಿ ಕೂತು ಮಕ್ಕಳು ಪಾಠ ಕೇಳಬೇಕೆ?
ಇದೀಗ ಮಳೆಗೆ ನೂತನ ಕಟ್ಟಡ ಮೇಲ್ಛಾವಣಿಯಲ್ಲಿ ಸೋರಿಕೆಯಾಗಿದ್ದು, ಕೊಠಡಿಯಲ್ಲಿ ನೀರು ತುಂಬಿದೆ. ಅಷ್ಟೇ ಅಲ್ಲ ಕಟ್ಟಡಕ್ಕೆ ಬಳಿಯಲಾಗಿದ್ದ ಬಣ್ಣವೂ ಬದಲಾಗಿದೆ. ಇದನ್ನು ವೀಕ್ಷಿಸಿದ ಶಾಲಾಭಿವೃದ್ಧಿ ಸಮಿತಿಯವರು ಇದೀಗ ಗೊಂದಲದಲ್ಲಿದ್ದಾರೆ. ಕಟ್ಟಡ ಕಾಮಗಾರಿ ಕಳಪೆಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ಪಾಠಪ್ರವಚನ ನಡೆಸುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.[ಯಡಿಯೂರಪ್ಪ ನನ್ನ ಮೂಗು ಹಿಡಿಯೋ ಬದಲು ಮೋದಿಯ ಮೂಗು ಹಿಡಿಯಲಿ: ಸಿದ್ದು]

ಉಳಿದ ಶಾಲೆಗಳ ಕತೆಯೇನು?
ಮುಖ್ಯಮಂತ್ರಿ ತವರು ಕ್ಷೇತ್ರದ ಶಾಲೆಯದ್ದೇ ಈ ರೀತಿ ಕತೆಯಾದರೆ ಇತರೆ ಶಾಲೆಗಳ ಗತಿ ಏನು? ಇದರಿಂದ ಮಕ್ಕಳಿಗೇನಾದರೂ ತೊಂದರೆಯಾದದರೆ ಇದಕ್ಕೆ ಯಾರು ಹೊಣೆ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.[ಮನಪಾ ಸಭೆಯಲ್ಲಿ ರಿಂಗಣಿಸಿದ ಮೊಬೈಲು, ಕಾರು!]












Click it and Unblock the Notifications