ಅಕ್ರಮ ಸಂಬಂಧ ನೋಡಿದ್ದಕ್ಕೆ ಕೊಲೆಯಾದಳು ಚಾಮಲಾಪುರ ಹುಂಡಿ ಬಾಲಕಿ!
ಮೈಸೂರು, ನವೆಂಬರ್. 23: ನಂಜನಗೂಡು ಹೊರವಲಯದಲ್ಲಿ ನಡೆದಿದ್ದ 13 ವರ್ಷದ ಬಾಲಕಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಅಕ್ರಮ ಸಂಬಂಧವನ್ನು ಕಣ್ಣಾರೆ ಕಂಡಿದ್ದ ಕಾರಣಕ್ಕಾಗಿ ಆಕೆಯ ಹತ್ಯೆಯಾಗಿದೆ ಎಂದು ಎಸ್ ಪಿ ಅಮಿತ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಂಜನಗೂಡು ಪಟ್ಟಣದ ಚಾಮಲಾಪುರ ಹುಂಡಿ ಗ್ರಾಮದ ನಿವಾಸಿಗಳಾದ ಸಿದ್ದರಾಜು ಅಲಿಯಾಸ್ ಸ್ವಾಮಿ(32) ಹಾಗೂ ಬಾಲಕಿಯ ಚಿಕ್ಕಮ್ಮ ರಾಜಮ್ಮ (34) ಬಂಧಿತ ಆರೋಪಿಗಳು.
ಘಟನೆಯ ವಿವರ
ಕೊಲೆಯಾದ ಬಾಲಕಿ ಮನೆಯ ಹಿಂಭಾಗ ಸಿದ್ದರಾಜು ಮನೆಯಿದೆ. ನ.16ರಂದು ಬಾಲಕಿ ಶಾಲೆಗೆ ತೆರಳಲು ಸಿದ್ಧವಾಗಿದ್ದಳು. ನಂತರ ಆಕೆ ಮನೆಯ ಹಿತ್ತಲ ಬಳಿ ತೆರಳಿದ್ದಾಳೆ. ಈ ವೇಳೆ ಅಲ್ಲಿ ಸಿದ್ದರಾಜು ಹಾಗೂ ರಾಜಮ್ಮ ಅವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದುದನ್ನು ಬಾಲಕಿ ಕಂಡಿದ್ದಾಳೆ. ಇದರಿಂದ ಇಬ್ಬರೂ ಕೂಡ ಆತಂಕಗೊಂಡಿದ್ದಾರೆ.

ಈ ವಿಚಾರವನ್ನು ಆಕೆ ಯಾರಿಗಾದರೂ ಹೇಳಬಹುದು ಎಂಬ ಆತಂಕ ಅವರನ್ನು ಕಾಡಿದೆ. ಹೀಗಾಗಿ ಆಕೆಯನ್ನು ಕೊಲ್ಲುವ ತೀರ್ಮಾನಕ್ಕೆ ಬಂದಿದ್ದಾರೆ. ಬೆಳಗ್ಗೆ ಸುಮಾರು 9.30ರ ಸಮಯದಲ್ಲಿ ಬಾಲಕಿ ಒಬ್ಬಳೇ ಮನೆಯಲ್ಲಿದ್ದುದನ್ನು ಗಮನಿಸಿದ ಆರೋಪಿಗಳು ಮನೆಯೊಳಗೆ ನುಗ್ಗಿದ್ದಾರೆ.
ನಂತರ ಬಾಲಕಿಯ ಕುತ್ತಿಗೆಯನ್ನು ಹಿಸುಕಿ ಕೊಂದಿದ್ದಾರೆ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.
ಬಾಲಕಿ ಯನ್ನು ಹತ್ಯೆಗೈದ ನಂತರ ಸಿದ್ದರಾಜು ಮೈಸೂರಿಗೆ ತೆರಳಿದರೆ, ರಾಜಮ್ಮ ಏನೂ ಅರಿಯದವಳಂತೆ ಜನರ ನಡುವೆ ರೋದಿಸುತ್ತಾನಿಂತಿದ್ದಾಳೆ. ನಂತರ ಬಾಲಕಿಯ ಅಂತ್ಯ ಸಂಸ್ಕಾರದಲ್ಲಿ ಕೂಡ ಪಾಲ್ಗೊಂಡಿದ್ದಾಳೆ.

ನಿತ್ಯ ಬಾಲಕಿಯ ತಾಯಿ ಕಾರ್ಖಾನೆಗೆ ಕೆಲಸಕ್ಕಾಗಿ ಹೋದರೆ, ತಂದೆ ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಕ್ಯಾಂಟಿನ್ ನಡೆಸಲು ಹೋಗುತ್ತಾರೆ. ಬಾಲಕಿ ತನ್ನ ಸಹದೋರ ಹಾಗೂ ಸಹೋದರಿಯರನ್ನು ಶಾಲೆಗೆ ಬಿಟ್ಟು ವಾಪಸ್ ಮನೆಗೆ ಬರುವಾಗ ಈ ಅನೈತಿಕ ಸಂಬಂಧವನ್ನು ನೋಡಿದ್ದಾಳೆ ಎನ್ನಲಾಗಿದೆ.












Click it and Unblock the Notifications