ಮೈಸೂರಿನ ಅಂಬೇಡ್ಕರ್ ನಗರದಲ್ಲಿ ಕಲ್ಲು ತೂರಾಟ ಪ್ರಕರಣ; ಏಳು ಮಂದಿ ಬಂಧನ
ಮೈಸೂರು, ಡಿಸೆಂಬರ್ 16: ಸಾಲಿಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದ ದೌರ್ಜನ್ಯ ಪ್ರಕರಣ ಸಂಬಂಧ ಕೆ.ಆರ್. ನಗರ ಠಾಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಾಲಿಗ್ರಾಮ ನಿವಾಸಿಗಳಾದ ಚಂದ್ರು (23), ಮಂಜು (30), ಅರುಣ್ಗೌಡ (24), ಚೇತನ್ (28), ಮಂಜು (31), ಸರ್ವೇಶ (26), ದಿಲೀಪ್ (38) ಎಂದು ಗುರುತಿಸಲಾಗಿದ್ದು, ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಆರೋಪಿ, ಶಾಸಕ ಸಾ.ರಾ. ಮಹೇಶ್ ಅವರ ಸೋದರ ಸಾ.ರಾ. ರವೀಶ್ ಸೇರಿದಂತೆ 29 ಮಂದಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಸುಂದರ್ ರಾಜು ತಿಳಿಸಿದ್ದಾರೆ.
ದತ್ತಮಾಲಾ ಭಕ್ತರಿಂದ ವಾಹನದ ಮೇಲೆ ಕಲ್ಲು ತೂರಾಟ
ಸಾಲಿಗ್ರಾಮದ ನಿವಾಸಿ ಲೋಕೇಶ ನೀಡಿದ ದೂರಿನ ಮೇರೆಗೆ ಬಂಧಿತರು ಸೇರಿದಂತೆ 36 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು, 17 ಮಂದಿಯನ್ನು ಗುರುತಿಸಿ ಅವರ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದರು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ನಗರದಲ್ಲಿ ಸವರ್ಣೀಯರು ಕಲ್ಲು ತೂರಿ ಈಚೆಗೆ ಗಲಾಟೆ, ಗುಂಪು ಘರ್ಷಣೆ ಉಂಟಾಗಿದ್ದು, ಕೆಲವರ ಮೊಬೈಲ್ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಇನ್ನೂ ಮೂರು ಪ್ರಕರಣಗಳು ದಾಖಲಾಗಿವೆ. ಮೊದಲನೆಯದಾಗಿ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಅಪ್ರಾಪ್ತ ಯುವಕನ್ನು ಬಂಧಿಸಿರುವ ಪೊಲೀಸರು, ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ಎರಡನೇಯದಾಗಿ ಅಜಯ್ ಎಂಬಾತನ ಮೇಲೆ ಗುಂಪೊಂದು ನಡೆಸಿದ ಹಲ್ಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ದೊಂಬಿ ನಡೆಸಿದ ಘಟನೆ ಸಂಬಂಧ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಅಸ್ಸಾಂನಲ್ಲಿ ಭುಗಿಲೆದ್ದ ಹಿಂಸಾಚಾರ: 12 ಜಿಲ್ಲೆಗಳಲ್ಲಿ ಕರ್ಫ್ಯೂ
ಹಲ್ಲೆ ಪ್ರಕರಣ ಖಂಡಿಸಲು ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದಲ್ಲದೆ ಟೈರ್ ಸುಟ್ಟ ಸಂಬಂಧ 14 ಮಂದಿ ವಿರುದ್ಧ ಸ್ವಯಂಪ್ರೇರಿತವಾಗಿ ದೊಂಬಿ ಕೇಸ್ ದಾಖಲಿಸಲಾಗಿದೆ.