ಮೈಸೂರು ದಸರಾ ಜಂಬೂ ಸವಾರಿಗೆ ಬರುವುದಿಲ್ಲ ಪ್ರಧಾನಿ ಮೋದಿ
ಮೈಸೂರು, ಸೆಪ್ಟೆಂಬರ್ 17: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುವ ಜಂಬೂ ಸವಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಾರೆ ಎಂಬ ಎಲ್ಲರ ನಿರೀಕ್ಷೆ ಹುಸಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಭಾಗವಹಿಸುವ ಕಾರ್ಯಕ್ರಮದ ಪಟ್ಟಿ ಅಂತಿಮವಾಗುತ್ತಿದೆ. ಅರಮನೆ ಭೇಟಿ ಬಗ್ಗೆ ಮಾಹಿತಿ ಕೇಳಲಾಗಿದೆ. ಆದರೆ ಇನ್ನೂ ರಾಷ್ಟ್ರಪತಿಗಳಿಂದ ಅದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೇ ಮೈಸೂರಿಗೆ ಯೋಗ ದಿನಾಚರಣೆಗೆ ಬಂದು ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಬರುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಜಂಬೂಸವಾರಿ ಹಾಗೂ ಭಾಗಶಃ ಸಿದ್ಧವಾಗಿರುವ ಎಕ್ಸ್ಪ್ರೆಸ್ ವೇಯನ್ನು ಉದ್ಘಾಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಇದೀಗ ಈ ಮಾತು ಸುಳ್ಳಾಗಿದ್ದು, ಪ್ರಧಾನಿ ಮೋದಿಯವರು ಈ ಬಾರಿ ಜಂಬೂ ಸವಾರಿ ವೀಕ್ಷಿಸುವುದಕ್ಕಾಗಿ ಬರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು:
ಕೇಂದ್ರದ ನಾಲ್ಕು ಮಂತ್ರಿಗಳು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದೆ. ಅದರ ಆಧಾರದ ಮೇಲೆ ವೇದಿಕೆ ಮೇಲೆ ಕೂರುವವರ ಪಟ್ಟಿ ಅಂತಿಮಗೊಳ್ಳುತ್ತದೆ. ಆದರೆ ದಸರಾ ಉದ್ಘಾಟನೆ ಅಥವಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವುದಿಲ್ಲ ಎಂದು ತಿಳಿಸಿದರು.

ದಸರಾ ಪಾಸ್ ಮತ್ತು ಗೋಲ್ಡ್ ಕಾರ್ಡ್ ಕುರಿತು ಅಂತಿಮ ತೀರ್ಮಾನ ಮಾಡುತ್ತೇವೆ. ಯುವ ದಸರಾ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನೂ ಅಂತಿಮಗೊಳಿಸಲಾಗುವುದು. ಈ ಬಾರಿಯ ದಸರಾಗೆ ಹಣ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಹಣ ಬಿಡುಗಡೆ ಮಾಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿದ್ಯುತ್ ದೀಪಾಲಂಕಾರಕ್ಕೆ 4.5 ಕೋಟಿ ನಿಗದಿ ಮಾಡಲಾಗಿದೆ. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡುತ್ತೇವೆ ಎಂದರು.












Click it and Unblock the Notifications