ದಯವಿಟ್ಟು ಆತ್ಮಹತ್ಯೆಗೆ ಶರಣಾಗಬೇಡಿ : ರೈತರಿಗೆ ಸಿದ್ದರಾಮಯ್ಯ ಮನವಿ
ಮೈಸೂರು, ಜೂ. 27 : ಸಾಲಬಾಧೆ ತಾಳಲಾರದೆ ಒಬ್ಬರಾದ ಮೇಲೆ ಒಬ್ಬರಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆತ್ಮಹತ್ಯೆಗೆ ಶರಣಾಗುವುದು ಸಮಸ್ಯೆಗೆ ಪರಿಹಾರವಲ್ಲ, ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಶನಿವಾರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸಾಲದ ಹೊರೆಯಿಂದ ಬಳಲುತ್ತಿರುವ ರೈತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು, ರೈತರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ಎಲ್ಲ ಸಹಾಯಗಳನ್ನೂ ಮಾಡಲು ಸಿದ್ಧವಿದೆ ಎಂದರು.
ಕಳೆದ ಕೆಲ ದಿನಗಳಲ್ಲಿ ನಾಲ್ವರು ರೈತರು ಕರ್ನಾಟಕದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶನಿವಾರ ಹಾವೇರಿಯಲ್ಲಿ ಜಗದೀಶ್ ಎಂಬಾತ ವಿಷ ಸೇವಿಸಿ ಇಹಲೋಕ ತ್ಯಜಿಸಿದ್ದರೆ, ಬೆಳಗಾವಿ ಜಿಲ್ಲೆಯ ಮಲ್ಲಪ್ಪ ಚಾಪಗಾವಿ, ಮಂಡ್ಯ ಜಿಲ್ಲೆಯ ನಿಂಗೇಗೌಡ ಮತ್ತು ಮೈಸೂರು ಜಿಲ್ಲೆಯ ನಂಜನಗೂಡಿನ ಶಿವಲಿಂಗೇಗೌಡ ಜೀವ ನೀಗಿಕೊಂಡಿದ್ದಾರೆ. [ಹಾವೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ರೈತ]
ಸಕ್ಕರೆ ಕಾರ್ಖಾನೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿರುವ ಸಕ್ಕರೆಯನ್ನು ಜಪ್ತಿ ಮಾಡಿಕೊಂಡು, ಹರಾಜು ಹಾಕಿ, ರೈತರಿಗೆ ಸಿಗಬೇಕಾಗಿರುವ ಹಣವನ್ನು ಕೊಡಿಸಲು ಗಂಭೀರ ಪ್ರಯತ್ನ ಸರಕಾರ ಮಾಡುತ್ತಿದೆ ಎಂದು ಹೇಳಿದರು. ಜೊತೆಗೆ, ರೈತರ ಸಹಾಯಕ್ಕೆ ಕೇಂದ್ರ ಸರಕಾರ ಕೂಡ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದರು. [ಸಕ್ಕರೆ ಕಾರ್ಖಾನೆ 2 ಗೋದಾಮುಗಳು ಅಧಿಕಾರಿಗಳ ವಶ]
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಿದ್ದರಾಮಯ್ಯ ಸರಕಾರ ಕಣ್ಣುಮುಚ್ಚಿ ಕೂತಿದೆ, ಕಾಂಗ್ರೆಸ್ ಶಾಸಕರ ಅಧೀನದಲ್ಲಿರುವ ಹಲವಾರು ಸಕ್ಕರೆ ಕಾರ್ಖಾನೆಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವಿರೋಧಿಗಳು ಮಾಡಿರುವ ಆರೋಪಗಳಿಗೆ, ಸೋಮವಾರ ಜೂನ್ 29ರಿಂದ ಬೆಳಗಾವಿಯಲ್ಲಿ ಆರಂಭವಾಗುತ್ತಿರುವ ಮುಂಗಾರು ಅಧಿವೇಶನದಲ್ಲಿ ತಕ್ಕ ಉತ್ತರ ನೀಡುವುದಾಗಿ ನುಡಿದರು.
ದೇವರ ದಯದಿಂದ ಕರ್ನಾಟಕದ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಗಳು ಮತ್ತು ಅಣೆಕಟ್ಟುಗಳು ತುಂಬಲಿವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ಅವರು, ಇದರಿಂದ ರೈತರಿಗೆ ಒಳ್ಳೆಯದಾಗಲಿದೆ ಎಂದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಹಲವಾರು ಭಾಗ್ಯ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ಕೂಡ ನಡೆಸಿದರು.