3 ತಿಂಗಳು ಉಚಿತ ಅಕ್ಕಿ ಮತ್ತು ತೊಗರಿಬೇಳೆ ವಿತರಣೆಗೆ ಯೋಜನೆ; ಗೋಪಾಲಯ್ಯ
ಮೈಸೂರು, ಮೇ 02: ಕೊರೊನಾ ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪ್ರತಿ ಬಿಪಿಎಲ್ ಕಾರ್ಡುದಾರರಿಗೆ ಮೂರು ತಿಂಗಳ ಉಚಿತ ಅಕ್ಕಿ ಮತ್ತು ತೊಗರಿಬೇಳೆ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಎವೈ (ಅಂತ್ಯೋದಯ), ಆದ್ಯತಾ ಪಡಿತರ ಚೀಟಿ (ಪಿಎಚ್ಎಚ್) ವರ್ಗದವರಿಗೆ ಪ್ರತಿ ಸದಸ್ಯನಿಗೆ 10 ಕೆ.ಜಿ ಅಕ್ಕಿ, ಪ್ರತಿ ಪಡಿತರ ಚೀಟಿಗೆ 1 ಕೆ.ಜಿ ತೊಗರಿ ಬೇಳೆ ನೀಡಲಾಗುವುದು.

ಹೊಸದಾಗಿ ಅರ್ಜಿ ಸಲ್ಲಿಸಿರುವ ಪಿಎಚ್ಎಚ್ ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ, ಅದ್ಯತೇತರ ಪಡಿತರ ಚೀಟಿ (ಎನ್ ಪಿಎಚ್ಎಚ್) ಯಲ್ಲಿ ಏಕ ವ್ಯಕ್ತಿ ಪಡಿತರ ಚೀಟಿಗೆ ಪ್ರತಿ ಕೆಜಿಗೆ 15 ರೂ. ನಂತೆ 5 ಕೆ.ಜಿ ಅಕ್ಕಿ, ಎರಡು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ ಪ್ರತಿ ಕೆ.ಜಿಗೆ 15 ರೂ.ನಂತೆ 10 ಕೆ.ಜಿ ಅಕ್ಕಿ, ಹೊಸದಾಗಿ ಅರ್ಜಿ ಸಲ್ಲಿಸಿರುವ ಎನ್ ಪಿಎಚ್ಎಚ್ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 15 ರೂ.ನಂತೆ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದರು.
ಜಿಲ್ಲೆಯ 1011 ನ್ಯಾಯ ಬೆಲೆ ಅಂಗಡಿಯಲ್ಲಿ ಇಂದಿನಿಂದಲೇ ಪಡಿತರ ವಿತರಿಸಲು ಸೂಚಿಸಲಾಗಿದೆ. ಕಳಪೆ ಗುಣಮಟ್ಟದ ಅಕ್ಕಿ, ಬೇಳೆ ಬಂದಿದ್ದರೆ ಅದನ್ನು ಜನತೆಗೆ ವಿತರಿಸಿದೆ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ನ್ಯಾಯ ಬೆಲೆ ಅಂಗಡಿಗಳು ಇಲ್ಲದೆ 3 ಕಿ.ಮೀ ದೂರ ಹೋಗಬೇಕಾದ ಗ್ರಾಮಗಳಿಗೆ ನ್ಯಾಯಬೆಲೆ ಅಂಗಡಿಯವರು ಹೋಗಿ ಶಾಲೆಯಲ್ಲಿ ವಿತರಣೆ ಮಾಡುವಂತೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಚಿತ ಅಕ್ಕಿಗೆ ಹಣ ಕೇಳುವ ಮತ್ತು ತೂಕದಲ್ಲಿ ವ್ಯತ್ಯಾಸ ಮಾಡುವ ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ ಜರುಗಿಸಲಾಗುವುದು. ಇಲಾಖೆಯ ಅಧಿಕಾರಗಳು ಎಲ್ಲ ಅಂಗಡಿಗಳಲ್ಲಿ ಪರಿಶೀಲನೆ ನಡೆಸಬೇಕು ಎಂದರು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಈಗಾಗಲೇ ಉಚಿತವಾಗಿ ಸಿಲಿಂಡರ್ ಪಡೆಯಲು ಹಣ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲಿರುವ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ರಾಜ್ಯದಲ್ಲಿ 98 ಸಾವಿರ ಕುಟುಂಬಗಳಿಗೆ ಮೂರು ತಿಂಗಳ ಉಚಿತ ಸಿಲಿಂಡರ್ ನೀಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಎಚ್.ಪಿ.ಮಂಜುನಾಥ್, ಬಿ.ಹರ್ಷವರ್ಧನ, ಎಲ್.ನಾಗೇಂದ್ರ, ಅನಿಲ್ ಚಿಕ್ಕಮಾದು, ಎಂ.ಅಶ್ವಿನ್ ಕುಮಾರ್, ಸಂದೇಶ್ ನಾಗರಾಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಂ, ಮೇಯರ್ ತಸ್ನೀಂ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇತರರು ಉಪಸ್ಥಿತರಿದ್ದರು.












Click it and Unblock the Notifications