ಭಕ್ತರ ಇಷ್ಟಾರ್ಥ ನೆರವೇರಿಸುವ ಪಿರಿಯಾಪಟ್ಟಣದಮ್ಮ
ಮೈಸೂರು, ಮಾರ್ಚ್ 14: ಪ್ರತಿಯೊಂದು ಊರಿನಲ್ಲಿ ಶಕ್ತಿ ದೇವತೆಗಳು ಒಂದೊಂದು ರೂಪದಲ್ಲಿ ನೆಲೆಗೊಂಡು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇಂತಹ ಶಕ್ತಿದೇವತೆಗಳ ಪೈಕಿ ಪಿರಿಯಾಪಟ್ಟಣದಲ್ಲಿ ನೆಲೆನಿಂತಿರುವ ಮಸಣೀಕಮ್ಮ ಅರ್ಥಾತ್ ಪಿರಿಯಾಪಟ್ಟಣದಮ್ಮ ಕೂಡ ಒಂದಾಗಿದೆ.
7 ಜನ ಹೆಣ್ಣು ಮಕ್ಕಳಲ್ಲಿ ಹಿರಿಯಳಾಗಿದ್ದು, ಈಕೆಗೆ ಮೈಯೆಲ್ಲಾ ಕಣ್ಣುಗಳಿತ್ತು ಮತ್ತು ಚಾಮುಂಡಿ ಕಿರಿಯ ಸಹೋದರಿ ಎಂದು ಹೇಳಲಾಗುತ್ತಿದೆ. ಪಿರಿಯಾಪಟ್ಟಣವನ್ನಾಳಿದ ಚಂಗಾಳ್ವ ರಾಜ ವಂಶಸ್ಥರ ಕುಲ ದೇವತೆಯಾಗಿದ್ದ ಈಕೆಗೆ ಪಟ್ಟಣದಲ್ಲಿ ನೆಲೆ ನೀಡಿ ಪೂಜಿಸುತ್ತಾ ಬರಲಾಗುತ್ತಿತ್ತು.
ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು?
ಇಲ್ಲಿರುವ ದೇಗುಲ ಸುಮಾರು 12ನೇ ಶತಮಾನದಲ್ಲಿ ಆದಿಭಾಗದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಚಂಗಾಳ್ವರ ನಂತರದ ಪಿರಿಯಾ ರಾಜನ ಆಳ್ವಿಕೆಯಲ್ಲಿ ಮೈಸೂರು ಅರಸರಿಗೂ ಪಿರಿಯಾಪಟ್ಟಣ ಅರಸರಿಗೂ ಯುದ್ದ ನಡೆದ ಸಂದರ್ಭ ಮಸಣೀಕಮ್ಮ ದೇವಿಯು ಪಿರಿಯಾಪಟ್ಟಣದ ಅರಸ ವೀರರಾಜನಿಗೆ ಜಯ ದೊರಕಿಸಿಕೊಟ್ಟಿದ್ದಳು ಎಂಬ ದಂತಕತೆಯಿದೆ.
ಈ ದೇವತೆಗೆ ಹಾಸನ, ಕೊಡಗು, ಮೈಸೂರು, ಮಂಡ್ಯ, ತುಮಕೂರು ಹಾಗೂ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿಯೂ ಭಕ್ತರಿದ್ದು, ಇಲ್ಲಿಗೆ ಆಗಮಿಸಿ ಪೂಜೆ, ಪ್ರಾರ್ಥನೆಗಳನ್ನು ಮಾಡಿಕೊಂಡು ಹೋಗುತ್ತಾರೆ. ಜತೆಗೆ ಹಲವು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿದ ಕೀರ್ತಿಯೂ ಇದೆ.
ಮರಗಳಲೆಯಲ್ಲಿ ನೋಡುಗರಿಗೆ ಭಯ, ಅಚ್ಚರಿ ಮೂಡಿಸಿದ ನಾಗಪಾತ್ರಿಯ ದೈವ ಶಕ್ತಿ ಪ್ರದರ್ಶನ
ಈಗಿರುವ ಮೂಲ ದೇಗುಲ ಸುಮಾರು1500 ವರ್ಷಗಳ ಹಿಂದಿನದು ಎನ್ನಲಾಗಿದೆ. ದೇಗುಲವನ್ನು ಇತ್ತೀಚಿಗಿನ ವರ್ಷಗಳಲ್ಲಿ ಒಂದಷ್ಟು ಅಭಿವೃದ್ಧಿಯನ್ನು ಮಾಡಲಾಗಿದೆ. ಆದರೆ ದೇಗುಲ ಶಿಥಿಲಾವಸ್ಥೆಗೆ ತಲುಪಿದ್ದು, ಗೋಡೆಗಳು ಬಿರುಕು ಬಿಟ್ಟಿವೆ, ಮೇಲ್ಛಾವಣಿ ದುಸ್ಥಿತಿಗೀಡಾಗಿದೆ. ಮುಖ್ಯ ಗೋಪುರ ವಾಲಿದೆ.
ಹೀಗಾಗಿ 12 ಕೋಟಿ ವೆಚ್ಚದಲ್ಲಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಮಸಣೀಕಮ್ಮ ದೇವಸ್ಥಾನ ಅಭಿವೃದ್ದಿ ಸಮಿತಿ ಮುಂದಾಗಿದ್ದು, ದೇಗುಲದ ನೀಲ ನಕ್ಷೆ ಕೂಡ ತಯಾರಾಗಿದೆ. ಇನ್ನೊಂದೆಡೆ ಮಸಣೀಕಮ್ಮ ದೇವರ ವಾರ್ಷಿಕ ರಥೋತ್ಸವ ಪ್ರತಿ ವರ್ಷದಂತೆ ನಡೆಸಲಾಗುತ್ತಿದ್ದು, ಅದರಂತೆ ಈ ಬಾರಿ ಮಾ.14 ರಂದು ನಡೆಯುತ್ತಿದೆ. ಈ ರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೆರೆದು ರಥವನ್ನು ಎಳೆದು, ಹಣ್ಣು ಜವನ ಎಸೆದು ಪುನೀತರಾಗುತ್ತಾರೆ.