ಯಾರು ಭೀಮ, ಯಾರು ದುರ್ಯೋಧನ ಗೊತ್ತಾಗುತ್ತೆ: ಹಳ್ಳಿಹಕ್ಕಿಗೆ ಸಾ.ರಾ.ಮಹೇಶ್ ತಿರುಗೇಟು
ಮೈಸೂರು, ನವೆಂಬರ್ 26: "ನಾನು ದುರ್ಯೋಧನ ಅಂತ ಒಪ್ಪಿಕೊಳ್ಳುತ್ತೇನೆ. ದುಶ್ಯಾಸನ ಅಲ್ವಲ್ಲಾ?" ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ಗೆ ಮಾಜಿ ಸಚಿವ ಸಾ.ರಾ. ಮಹೇಶ್ ತಿರುಗೇಟು ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನ್ನನ್ನು ದುರ್ಯೋಧನ ಅಂತ ಕರೆದಿದ್ದಾರೆ. ಹೌದು, ದುರ್ಯೋಧನನಿಗೂ ಒಂದಷ್ಟು ಒಳ್ಳೆಯ ಗುಣಗಳಿವೆ. ಪುಣ್ಯಕ್ಕೆ ದುಶ್ಯಾಸನ ಅಂತ ಕರೆದಿಲ್ಲ. ಯಾರು ಭೀಮ, ಯಾರು ದುರ್ಯೋಧನ ಅಂತ ಜನ ತೀರ್ಮಾನ ಮಾಡಲಿದ್ದಾರೆ" ಎಂದು ಹೇಳಿದರು.
ಜನರು ಅರ್ಥಮಾಡಿಕೊಂಡಿದ್ದಾರೆ
ನಾವಿಬ್ಬರೂ ಆಣೆ ಪ್ರಮಾಣಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೇ ತಪ್ಪು. ನಾನು ದೇವಸ್ಥಾನದ ಒಳಗೆ ಕುಳಿತಿದ್ದೆ ನಿಜ. ಒಂದು ವೇಳೆ ಹೊರಗಡೆ ಬಂದಿದ್ದರೆ ನನ್ನ ಜೊತೆ ನೂರಾರು ಕಾರ್ಯಕರ್ತರು ಇದ್ದರು. ಒಂದು ಚೂರು ಹೆಚ್ಚು ಕಡಿಮೆ ಆಗಿದ್ದರೆ ಏನು ಮಾಡಬೇಕಿತ್ತು? ಹೀಗಾಗಿ ಯಾರು ಪ್ರಾಮಾಣಿಕರು, ಯಾರು ಅಪ್ರಾಮಾಣಿಕರು ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಇವಿಎಂ ಮೇಲೆ ಅನುಮಾನ
ಉಪ ಚುನಾವಣೆಯಲ್ಲಿ ಎಲ್ಲಾ 15 ಸ್ಥಾನವನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರ ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಇವಿಎಂ ಮೇಲೆ ಅನುಮಾನ ಶುರುವಾಗುತ್ತಿದೆ. ಇವಿಎಂ ಬಗ್ಗೆ ಹಲವು ನಾಯಕರು ಹಿಂದೆ ಹಲವು ಹೇಳಿಕೆ ನೀಡಿದ್ದಾರೆ. ಆದರೆ ಈಗ ನನಗೂ ಸಣ್ಣದಾಗಿ ಅನುಮಾನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇವಿಎಂ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಾ.ರಾ.ಮಹೇಶ್ ಒತ್ತಾಯಿಸಿದರು.
"ಜನರ ಕಷ್ಟ ಕೇಳುವ ಗುರಿ ಇಲ್ಲ ಇವರಿಗೆ"
ಮುಖ್ಯಮಂತ್ರಿಗಳು ಅನರ್ಹರನ್ನೇ ಪ್ರಾಮಾಣಿಕರು ಅಂದರೆ ಏನ್ ಹೇಳೋದು? ಜನ ಎಲ್ಲವನ್ನೂ ಗಮನಿಸಿದ್ದು, ಅವರೇ ಎಲ್ಲದಕ್ಕೂ ಉತ್ತರ ನೀಡ್ತಾರೆ. ಸರ್ಕಾರ ಬೀಳಿಸಲು ಮುಂಬೈಗೆ ಹೋಗಿ ಕುಳಿತಿದ್ದರು ಇವರು. ಪ್ರವಾಹ ಬಂದಾಗ ರೆಸಾರ್ಟ್ ಸೇರಿಕೊಂಡರು. ಜನರ ಕಷ್ಟ ಇವರಿಗೆ ಬೇಕಿಲ್ಲ. ಈಗ ಮಂತ್ರಿ ಮಾಡುವುದೇ ನಮ್ಮ ಗುರಿ ಅಂತೀರಿ. ಜನರ ಕಷ್ಟ ಕೇಳುವ ಗುರಿ ಇಲ್ಲವೇ? ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.
ಜಿಟಿಡಿ ನಮ್ಮ ಜೊತೆ ಇದ್ದಾರೆ
ಹುಣಸೂರು ಉಪ ಚುನಾವಣೆಯಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ತಟಸ್ಥವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿ.ಟಿ.ದೇವೇಗೌಡ ನಮ್ಮ ನಾಯಕರು. ಅವರು ನಮ್ಮ ಜತೆಯಲ್ಲೇ ಇದ್ದಾರೆ. ಈಗಾಗಲೇ ಅವರು ನಮ್ಮ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಮುಖಂಡರಿಗೆ ದೂರವಾಣಿ ಮೂಲಕ ಜೆಡಿಎಸ್ ಪಕ್ಷದ ಪರ ಕೆಲಸ ಮಾಡುವಂತೆ ಹೇಳಿದ್ದಾರೆ ಎಂದರು.