ಮತ ಹಾಕಲ್ಲ ಎಂದ ಬಾಚಹಳ್ಳಿ ಗ್ರಾಮಸ್ಥರು ಕೊಟ್ಟ ಕಾರಣಗಳೇನು?
Recommended Video

ಮೈಸೂರು, ನವೆಂಬರ್.02: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮೈಸೂರಿನ ಕೆ.ಆರ್.ನಗರ ತಾಲೂಕಿನ ಕೆಲವು ಭಾಗಗಳು ಸೇರುತ್ತಿದ್ದು, ಇದೀಗ ಇಲ್ಲಿನವರು ಒಂದೊಂದೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿರುವುದು ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ಕುರುಬ ಸಮುದಾಯದ ಮುಖಂಡರು ತಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಆದ್ದರಿಂದ ಚುನಾವಣೆ ಬಹಿಷ್ಕರಿಸಿ ಎಂದು ಕರೆ ಕೊಟ್ಟಿದ್ದರು. ಇದೀಗ ತಾಲೂಕಿನ ಭೇರ್ಯ ಸಮೀಪದ ಬಾಚಹಳ್ಳಿ ಗ್ರಾಮದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ಆಕ್ರೋಶಗೊಂಡ ಮತದಾರರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾದ ಯಾವ ಪಕ್ಷದ ಸಂಸದರೂ ಕಳೆದ 25 ವರ್ಷಗಳಿಂದ ಗ್ರಾಮಕ್ಕೆ ಕಾಲಿಟ್ಟು ನಮ್ಮ ಸಮಸ್ಯೆ ಆಲಿಸಿಲ್ಲ. ಗ್ರಾಮದಲ್ಲಿ ರಸ್ತೆ, ಚರಂಡಿ, ನಾಲೆ ನೀರು, ಕುಡಿಯುವ ನೀರು, ಬಸ್ ಸೌಲಭ್ಯ, ನ್ಯಾಯಬೆಲೆ ಅಂಗಡಿ ಯಾವುದೂ ಇಲ್ಲ. ವೃದ್ಧರಿಗೆ ವೃದ್ಧಾಪ್ಯ ವೇತನ ಸೌಲಭ್ಯ ಇಲ್ಲ. ಸಮುದಾಯ ಭವನ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಹೀಗಿರುವಾಗ ನಾವೇಕೆ ಮತ ನೀಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾನುವಾರುಗಳನ್ನು ಸಾಕಲು ಕಷ್ಟಕರ
ಗ್ರಾಮದಲ್ಲಿ ಇಂದಿಗೂ ಗುಡಿಸಲು ಮನೆಗಳಿದ್ದು, ಮನೆ ಮಂಜೂರು ಮಾಡಲು ಸರ್ಕಾರ ಮುಂದಾಗಿಲ್ಲ. ಗ್ರಾಮದ ಸುತ್ತ ಮುತ್ತ ಹಾರಂಗಿ, ಗೊರೂರು ನಾಲೆ ಇದ್ದರೂ ರೈತರ ಭತ್ತದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಕೆರೆ ಕಟ್ಟೆಯಲ್ಲಿ ನೀರಿಲ್ಲದೆ ಜಾನುವಾರುಗಳನ್ನು ಸಾಕಲು ಕಷ್ಟಕರವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ
ಗ್ರಾಮದಲ್ಲಿ 5ಕ್ಕೂ ಹೆಚ್ಚು ಮಹಿಳಾ ಸಂಘಗಳಿದ್ದರೂ, ಸರ್ಕಾರ ಅನುದಾನ ಕೊಡುತ್ತಿಲ್ಲ. ಈ ಸಂಬಂಧ ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೂ ಸಾಕಷ್ಟು ಸಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಚರಂಡಿಗಳಿಲ್ಲದೆ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ವೃದ್ಧರು, ಮಕ್ಕಳು ಸಂಚರಿಸಲಾಗುತ್ತಿಲ್ಲ ಎಂದು ಇಲ್ಲಿನ ಜನರು ಸಿಟಿಗೆದ್ದಿದ್ದಾರೆ.

ಸೊಳ್ಳೆಗಳ ತಾಣವಾಗಿದೆ
ಗ್ರಾಮದೆಲ್ಲೆಡೆ ತಿಪ್ಪೆಗಳ ರಾಶಿ ಹೆಚ್ಚಾಗಿದ್ದು, ಸೊಳ್ಳೆಗಳ ತಾಣವಾಗಿದ್ದು, ಡೆಂಗ್ಯೂ ಜ್ವರ ತಾಂಡವವಾಡುತ್ತಿದೆ. ವೃದ್ದರಲ್ಲಿ ಕೀಲು ನೋವು, ವಿಪರೀತ ಜ್ವರ ಹೆಚ್ಚಾಗಿದೆ. ಈ ಜ್ವರ ಈಗಾಗಲೇ ಮೂವರು ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಬಹಿಷ್ಕಾರ ಮಾಡುವುದು ಖಚಿತ
ಗ್ರಾಮದಲ್ಲಿ ಅಭಿವೃದ್ಧಿ ಮಾಡದ ಕಾರಣ ನಾವು ಮತದಾನ ಬಹಿಷ್ಕಾರ ನಿರ್ಧಾರ ತೆಗೆದುಕೊಂಡ ಬಗ್ಗೆ ಮನವಿಯನ್ನು ಉಪವಿಭಾಗಧಿಕಾರಿ ತಹಶೀಲ್ದಾರ್, ವೃತ್ತ ನಿರಿಕ್ಷಕರ ಕಚೇರಿಗೆ ನೀಡಿದ್ದರೂ ಯಾರು ಕೂಡ ಗ್ರಾಮಕ್ಕೆ ಆಗಮಿಸಿ ಸಮಸ್ಯೆ ಏನೆಂದು ಕೇಳಿಲ್ಲ. ಆದ್ದರಿಂದ ಮತದಾನ ಬಹಿಷ್ಕಾರ ಮಾಡುವುದು ಖಚಿತ ಎಂದು ಕೆ.ಆರ್.ನಗರ ತಾಲೂಕಿನ ಬಾಚಹಳ್ಳಿ ಜನತೆ ಹೇಳಿದ್ದಾರೆ.












Click it and Unblock the Notifications