Get Updates
Get notified of breaking news, exclusive insights, and must-see stories!

ಗೌರಿ - ಗಣೇಶನನ್ನು ಬರಮಾಡಿಕೊಳ್ಳಲು ಸಜ್ಜಾದ ಸಾಂಸ್ಕೃತಿಕ ನಗರಿ

ಮೈಸೂರು, ಸೆಪ್ಟೆಂಬರ್ 11: ಗಣೇಶನ ಚೌತಿಗೆ ಉಳಿದಿರುವುದು ಕೇವಲ ಒಂದೇ ದಿನ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಗೌರಿಗಣೇಶ ಮೂರ್ತಿಗಳನ್ನು ಕೊಳ್ಳಲು ಜನರು ಲಗ್ಗೆ ಇಡುತ್ತಿದ್ದಾರೆ.
ಗಣೇಶ ಚತುರ್ಥಿ ಆಚರಣೆಗೆ ಸಂಘಸಂಸ್ಥೆ, ಯುವಪಡೆ, ಮನೆಮಂದಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ನಗರದ ದೇವರಾಜ ಅರಸು ಮಾರುಕಟ್ಟೆ, ಒಂಟಿಕೊಪ್ಪಲು, ಅಗ್ರಹಾರ, ವಿವೇಕಾನಂದ ವೃತ್ತ ಸೇರಿದಂತೆ ಹಲವು ಭಾಗಗಳಲ್ಲಿ ಗಣೇಶನನ್ನು ಮಾರಾಟ ಮಾಡಲು ಕುಂಬಾರರು ಮುಂದಾಗಿದ್ದಾರೆ. ಇನ್ನು ಹಿಂದಿನ ವರ್ಷಕ್ಕಿಂತ ಈ ಬಾರಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚು ಇದೆ. ಗಾತ್ರ, ಆಕಾರ ಆಧರಿಸಿ ಬೆಲೆ ನಿಗದಿಪಡಿಸುತ್ತೇವೆ ಎನ್ನುತ್ತಾರೆ ವ್ಯಾಪಾರಿ ರಮೇಶ್.

ಮೂರ್ತಿ ಹೆಚ್ಚು ನುಣುಪಾಗಲು ಸ್ಥಳೀಯ ಕೆರೆಯಿಂದ ನಾಲ್ಕು ತಿಂಗಳ ಮುಂಚೆ ಮಣ್ಣು ತರುತ್ತೇವೆ. ಅದನ್ನು ಐದು ದಿನ ನೆನೆ ಹಾಕುತ್ತೇವೆ. ನಂತರ ತುಳಿದು ಹದ ಮಾಡುತ್ತೇವೆ. ಈ ಬಾರಿ ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸಿದ್ದು, ಬೇಡಿಕೆ ಹೆಚ್ಚಿದೆಯಂತೆ.

ಜಿಲ್ಲೆಯ ವಿವಿಧೆಡೆ ಇಂದಿಗೂ ಶಾಸ್ತ್ರೋಕ್ತವಾಗಿ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸುವ ಕೆಲ ಕುಟುಂಬಗಳಿವೆ. ಈ ಕುಟುಂಬಗಳು ತಮ್ಮ ಪೂರ್ವಿಕರ ಕಾಲದಿಂದಲೂ ಗಣಪನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ನಿಯಮಿತ ಗ್ರಾಹಕರನ್ನು ಹೊಂದಿವೆ.

ಇನ್ನು ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಲು ರಾಸಾಯನಿಕಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಪರಿಸರ ಮಾಲಿನ್ಯ, ಜಲಮಾಲಿನ್ಯ ಉಂಟಾಗುತ್ತದೆ. ಹೀಗಾಗಿ, ಸರ್ಕಾರವು ಪಿಒಪಿ ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಿದೆ.

ಆದರೆ, ಅದರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಪಿಒಪಿ ಗಣಪತಿ ಮೂರ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ. ಮುಂದೆ ಓದಿ...

 ವ್ಯಾಪಾರಿ ಬಸವರಾಜು ಹೇಳುವಂತೆ

ವ್ಯಾಪಾರಿ ಬಸವರಾಜು ಹೇಳುವಂತೆ

ಆರಂಭದಲ್ಲಿ ಮಣ್ಣನ್ನು ಕುಟ್ಟಿ ಪುಡಿ ಪುಡಿ ಮಾಡಿಕೊಳ್ಳಲಾಗುವುದು. ನಂತರ ಸೋಸುತ್ತೇವೆ. ಕಲ್ಲು-ಕಸ ಬೇರ್ಪಡಿಸಿ, ನೀರಿನಲ್ಲಿ ನೆನೆ ಹಾಕುತ್ತೇವೆ. ಈ ಮಣ್ಣನ್ನು ಒಣಗಿಸಿಕೊಳ್ಳುತ್ತೇವೆ. ಮತ್ತೆ ಕುಟ್ಟಿ ಪುಡಿ ಪುಡಿ ಮಾಡಿ, ಇದರ ಜತೆ ಹತ್ತಿಯನ್ನು ಬೆರೆಸಿ, ಕುಟ್ಟುತ್ತೇವೆ. ಈ ಹಂತಕ್ಕೆ ಬರಲು ತಿಂಗಳುಗಳು ಗತಿಸಲಿವೆ.

ಮಣ್ಣು ನುಣುಪಾದ ಬಳಿಕ ಶಾಸ್ತ್ರೋಕ್ತವಾಗಿ ಗಣಪ ಮೂರ್ತಿ ತಯಾರಿಸಲು ಆರಂಭಿಸುತ್ತೇವೆ. ಒಂದೂವರೆ ಅಡಿ ಎತ್ತರದ ಗಣಪ ಮೂರ್ತಿ ತಯಾರಿಕೆಗೆ ಕನಿಷ್ಠ 15 ದಿನ ಬೇಕು. ನಂತರ ಒಣಗಲು ಬಿಡುತ್ತೇವೆ. ಬಿರುಕನ್ನು ಸರಿಪಡಿಸಿ, ವಾಟರ್‌ ಪೇಯಿಂಟ್ ಬಳಿಯುತ್ತೇವೆ ಎನ್ನುತ್ತಾರೆ ಮತ್ತೊಬ್ಬ ವ್ಯಾಪಾರಿ ಬಸವರಾಜು.

 ವಿಶಿಷ್ಟ ಮೂರ್ತಿಗಳನ್ನು ನೀಡುವಂತೆ ಕೋರಿಕೆ

ವಿಶಿಷ್ಟ ಮೂರ್ತಿಗಳನ್ನು ನೀಡುವಂತೆ ಕೋರಿಕೆ

ಪ್ರತಿ ವರ್ಷ 700ರಿಂದ 800 ಅಧಿಕೃತ ಪರವಾನಗಿ ಪಡೆದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ಆ ಸಂಖ್ಯೆ ಸಾವಿರ ದಾಟಲಿದೆ. ಈಗಾಗಲೇ ವಿವಿಧ ಬಡಾವಣೆ, ಬೀದಿಗಳ ಯುವಕ ಸಂಘಗಳು, ಸಂಸ್ಥೆಗಳು, ದೇವಸ್ಥಾನಗಳು, ಶಾಲಾ-ಕಾಲೇಜುಗಳು ಮೂರ್ತಿ ತಯಾರಿಸುವ ಕಲಾವಿದರಿಗೆ ಮುಂಗಡ ನೀಡಲಾಗಿದೆ.

ಅಷ್ಟೇ ಅಲ್ಲ, ವಿಭಿನ್ನ ಕಲಾಕೃತಿಯ, ವಿಶಿಷ್ಟ ಮೂರ್ತಿಗಳನ್ನು ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲು ಪರವಾನಗಿ ಕೋರಿ ಪೊಲೀಸರಿಗೆ, ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ.

 ತುಂಬಿ ತುಳುಕುತ್ತಿದೆ ಮಾರುಕಟ್ಟೆ

ತುಂಬಿ ತುಳುಕುತ್ತಿದೆ ಮಾರುಕಟ್ಟೆ

ಗೌರಿ ಗಣೇಶ ಹಬ್ಬಕ್ಕೆ ಇನ್ನು ಒಂದೇ ದಿನ ಬಾಕಿ. ಹಬ್ಬ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಜನವೋ ಜನ. ವ್ಯಾಪಾರಸ್ಥರ ಜೊತೆ ಗ್ರಾಹಕರೂ ವಹಿವಾಟಿನಲ್ಲಿ ನಿರತರಾಗಿದ್ದಾರೆ. ಹಬ್ಬದ ಖರೀದಿಯ ಹಿನ್ನೆಲೆಯಲ್ಲಿ ಮಾರುಕಟ್ಟೆ ಮಹಿಳೆಯರು ಮಕ್ಕಳಾದಿ ಜನರಿಂದ ತುಂಬಿದೆ.

ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ಸಲ್ಲಿಸುವುದು ಬಹುತೇಕ ಕುಟುಂಬಗಳಲ್ಲಿ ಬೆಳೆದು ಬಂದಿರುವ ಬೆಳೆದು ಬಂದಿರುವ ಸಂಪ್ರದಾಯ. ನಿನ್ನೆ ಭಾರತ್ ಬಂದ್ ಹಾಗೂ ಮೊನ್ನೆ ಅಮಾವಾಸ್ಯೆ ಇದ್ದ ಕಾರಣ ಯಾರೂ ಸಹ ಗೌರಿ -ಗಣೇಶ ಸಾಮಾನನ್ನು ಕೊಂಡುಕೊಳ್ಳಲಿಲ್ಲ. ಆದರೆ ಇಂದು ಮಾತ್ರ ವ್ಯಾಪಾರದ ಭರಾಟೆ ಜೋರಾಗಿತ್ತು.

 ಯಾವುದರ ಬೆಲೆ ಎಷ್ಟಿದೆ?

ಯಾವುದರ ಬೆಲೆ ಎಷ್ಟಿದೆ?

ಸುಗಂಧಿಹಾರ ಕಳೆದ ವಾರ 180 ರೂ ಇದ್ದುದು, 160 ರೂ. ಕ್ಕೆ ಇಳಿದಿದ್ದು ಬಿಟ್ಟರೆ, 2 ಅಡಿ ಗುಲಾಬಿ ಹಾರ 200 ರೂ., ಮೂರಡಿಯ ಗುಲಾಬಿ ಹಾರ 250ರಿಂದ 400 ರೂ., 5 ಅಡಿಯ ಹಾರದ ದರ 350ರಿಂದ 500 ರೂ. ಕ್ಕೆ ಏರಿಕೆಯಾಗಿದೆ.

ದೇವರಾಜ ಮಾರುಕಟ್ಟೆಯಲ್ಲಿ ಕೆಲ ಹೂವುಗಳ ಬೆಲೆಯನ್ನು ಕೆ.ಜಿ ದರದಲ್ಲಿ ಕೂಗದೆ ಮೀಟರ್, ಮಾರು ಲೆಕ್ಕದಲ್ಲಿ ಕೂಗುತ್ತಿದ್ದರು. ಜಾಜಿ ಮಲ್ಲಿಗೆ ಮೀಟರ್‌ಗೆ 100 ರೂ., ಕನಕಾಂಬರ 50 ರೂ., ಕಾಕಡ 40 ರೂ., ಸಣ್ಣ ಮಲ್ಲೆ 40 ರೂ.ರ ದರದಲ್ಲಿ ಮಾರಾಟವಾಗುತ್ತಿದೆ.

ಸೇವಂತಿಗೆ 100 ಕ್ಕೆ ಒಂದು ಮಾರು, ಕೆ.ಜಿ ಗುಲಾಬಿಗೆ 200 ರೂ., ಕಾಕಡ 400 ರೂ. ಕನಕಾಂಬರ 600 ರೂ.ದರದಲ್ಲಿ ಬಿಕರಿಯಾಗುತ್ತಿದೆ. ತರಕಾರಿ ಬೆಲೆಯಲ್ಲಿ ಹೆಚ್ಚು ಏರಿಳಿತ ಕಂಡಿಲ್ಲ. ಟೊಮೆಟೊ ಕೆ.ಜಿಗೆ 7 - 8 ರೂ.ದರದಲ್ಲೇ ಮುಂದುವರೆದಿದೆ.

ಏಲಕ್ಕಿ ಬಾಳೆಹಣ್ಣು ಕೆ.ಜಿಗೆ 80- 100 ರೂ., ಪಚ್ಚ ಬಾಳೆಹಣ್ಣು 25-30 ರೂ.ರಲ್ಲೇ ಇವೆ. ಶಿಮ್ಲಾ ಸೇಬು ಕೆ.ಜಿಗೆ 100 ಇದ್ದುದು 120 ರೂ. ಕ್ಕೇರಿದೆ. ಹಸಿಮೆಣಸಿನಕಾಯಿ, ಈರುಳ್ಳಿ, ಎಲೆಕೋಸು ದರಗಳು ಯಥಾಸ್ಥಿತಿಯಲ್ಲೇ ಇವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+