ಪರೀಕ್ಷಾ ಪೆ ಚರ್ಚಾ: ಪ್ರಧಾನಿಗೆ ಪ್ರಶ್ನೆ ಕೇಳಿ ಶಭಾಷ್ ಎನಿಸಿಕೊಂಡ ಮೈಸೂರಿನ ಬಾಲಕ
ಮೈಸೂರು, ಏಪ್ರಿಲ್ 1: ಮೈಸೂರು ತಾಲೂಕಿನ ದೊಡ್ಡಮಾರನಗೌಡನಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದ 11ನೇ ತರಗತಿ ವಿದ್ಯಾರ್ಥಿ ಎಂ.ಬಿ. ತರುಣ್ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಕೇಳಿ ಎಲ್ಲರಿಂದಲೂ ಶಹಬ್ಬಾಷ್ ಎನಿಸಿಕೊಂಡಿದ್ದಾನೆ.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿಯವರಿಗೆ ಪ್ರಶ್ನೆ ಕೇಳಲು ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ವಿದ್ಯಾರ್ಥಿಯಾಗಿದ್ದ. ಸಂವಾದದಲ್ಲಿ ಪ್ರಧಾನಿಯವರಿಗೆ, "ಆನ್ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅಡಚಣೆಗಳು ಎದುರಾಗುತ್ತವೆ. ಆದರೆ ಈ ಎಲ್ಲಾ ಸವಾಲುಗಳನ್ನು ಮೀರಿ ವಿದ್ಯಾರ್ಥಿಗಳು ಕೇವಲ ಓದಿನೆಡೆಗೆ ಮಾತ್ರ ಹೇಗೆ ಗಮನ ಕೇಂದ್ರೀಕರಿಸಬಹುದು?'' ಎಂದು ಪ್ರಶ್ನೆ ಕೇಳಿದ.
ಆಗ ಪ್ರಧಾನಿ ಮೋದಿ, "ಶಿಕ್ಷಣಕ್ಕೆ ಯಾವುದೇ ಮಾಧ್ಯಮ ಸಮಸ್ಯೆ ಅಲ್ಲ, ಅದು ಆನ್ಲೈನ್ ಅಥವಾ ಆಫ್ಲೈನ್ ತರಗತಿಯಾಗಿರಲಿ. ಸಮಸ್ಯೆ ಇರುವುದು ಗಮನ ಕೇಂದ್ರೀಕರಿಸುವುದರಲ್ಲಿ, ಏಕಾಗ್ರತೆ ಒಂದೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು," ಎಂದು ಉತ್ತರಿಸಿದರು.

ಸಹಪಾಠಿಗಳ ಸಂಭ್ರಮ
ಪರೀಕ್ಷಾ ಪೇ ಚರ್ಚಾ ಸಂವಾದ ವೀಕ್ಷಿಸಲು ನವೋದಯ ಶಾಲೆಯ ಕ್ಯಾಂಟೀನ್ ಆವರಣದಲ್ಲಿ ಬೃಹತ್ ಎಲ್ಇಡಿ ಪರದೆಯನ್ನು ಅಳವಡಿಸಲಾಗಿತ್ತು. "ತರುಣ್ ಆಲೋಚನೆಗಳು ಭಿನ್ನವಾಗಿರುವುದರಿಂದ ಸಂವಾದಕ್ಕೆ ಆಯ್ಕೆಯಾಗಿ ನಮಗೆಲ್ಲರಿಗೂ ಮಾದರಿಯಾಗಿದ್ದಾನೆ. ಮುಂದಿನ ದಿನಗಳಲ್ಲಿ ಆತನ ಸಲಹೆ ಪಡೆದು ಮುಂದಿನ ಬಾರಿಯ ಸಂವಾದಕ್ಕೆ ಆಯ್ಕೆಯಾಗುವುದಕ್ಕೆ ಈಗಿನಿಂದಲೇ ಸಿದ್ಧತೆ ನಡೆಸುತ್ತೇವೆ," ಎಂದು ತರುಣ್ ಸಹಪಾಠಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಜವಾಹರ ನವೋದಯ ಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಸೇರಿದಂತೆ ಸುಮಾರು 700 ಮಂದಿ ಪರೀಕ್ಷಾ ಪೇ ಚರ್ಚಾ ಸಂವಾದವನ್ನು ವೀಕ್ಷಿಸಿದರು.

ಎಲ್ಇಡಿ ಸ್ಕ್ರೀನ್ ವ್ಯವಸ್ಥೆ
ಪ್ರಧಾನಿ ಮೋದಿಯವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆಗೆ ಮೈಸೂರು ವಿಶ್ವವಿದ್ಯಾಲಯದ ಮೂರು ಕಡೆ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 800ಕ್ಕೂ ಹೆಚ್ಚು ಬೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾನಸ ಗಂಗೋತ್ರಿಯ ಕಂಪ್ಯೂಟರ್ ಸೈನ್ಸ್ ವಿಭಾಗ, ವಿಜ್ಞಾನ ಭವನ ಹಾಗೂ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಶುರುವಾದ ಕಾರ್ಯಕ್ರಮವನ್ನು ಸಾಕಷ್ಟು ವಿದ್ಯಾರ್ಥಿಗಳು ಆಗಮಿಸಿ ವೀಕ್ಷಿಸಿದರು.
Recommended Video
ಶಾಲಾ ಮಕ್ಕಳಲ್ಲಿನ ಪರೀಕ್ಷೆಯೆಡೆಗಿನ ಭಯ ಹಾಗೂ ಒತ್ತಡವನ್ನು ಹೋಗಲಾಡಿಸಿ, ಆತ್ಮವಿಶ್ವಾಸವನ್ನು ವೃದ್ಧಿಸುವ ಸಲುವಾಗಿ 2018ರಿಂದ ದೇಶದ ವಿವಿಧ ಶಾಲಾ ವಿದ್ಯಾರ್ಥಿಗಳ ಜೊತೆ ಪರೀಕ್ಷಾ ಪೆ ಚರ್ಚಾ ಎಂಬ ಪರಿಕಲ್ಪನೆಯಲ್ಲಿ ಪ್ರಧಾನಿಯವರು ಸಂವಾದ ನಡೆಸುತ್ತಿದ್ದು, ಇದು ಐದನೇ ಆವೃತ್ತಿಯಾಗಿದೆ.












Click it and Unblock the Notifications