ನಂಜನಗೂಡಿನಲ್ಲಿ ಹಿಂದೂ ದೇವಾಲಯ ನೆಲಸಮ: ಬಿಜೆಪಿ ನಾಯಕರ ವಾಗ್ಯುದ್ಧ
ಮೈಸೂರು, ಸೆಪ್ಟೆಂಬರ್ 11: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ರಾತ್ರೋರಾತ್ರಿ ದೇಗುಲ ನೆಲಸಮ ಮಾಡಲಾಗಿದ್ದು, ಯಾವುದೇ ನೋಟಿಸ್ ನೀಡದೆ ದೇಗುಲ ನೆಲಸಮ ಮಾಡಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದು, ಮೈಸೂರು ಜಿಲ್ಲಾಡಳಿತದ ಈ ಕ್ರಮಕ್ಕೆ ಖಂಡನೆ ವ್ಯಕ್ತವಾಗಿದೆ.
ರಾಜ್ಯ ಹೆದ್ದಾರಿ-57ರಲ್ಲಿದ್ದ ಹರದನಹಳ್ಳಿ ಉಚ್ಚಗಣಿಯ ಮಹದೇವಮ್ಮ ದೇಗುಲವನ್ನು ಮೈಸೂರು ಜಿಲ್ಲಾಡಳಿತ ಧ್ವಂಸ ಮಾಡಲಾಗಿದ್ದು, ಪೊಲೀಸ್ ಬಂದೋಬಸ್ತ್ನಲ್ಲಿ ಜೆಸಿಬಿ ಮೂಲಕ ಪುರಾತನ ದೇಗುಲ ಕೆಡವಿದ್ದಾರೆಂದು ಗ್ರಾಮಸ್ಥರ ಆರೋಪ ಮಾಡುತ್ತಿದ್ದಾರೆ. ಸುಪ್ರೀಂ ಆದೇಶ ಇದ್ದರೆ ದೇಗುಲವನ್ನು ಹಗಲಲ್ಲೇ ನೆಲಸಮ ಮಾಡಬೇಕಿತ್ತು. ರಾತ್ರಿ ವೇಳೆ ಕಳ್ಳರಂತೆ ದೇಗುಲ ಕೆಡವಿದ್ದೇಕೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ದೇಗುಲ ಪುರಾತನ ಚೋಳರ ಕಾಲದ್ದಾಗಿದ್ದು, ಹುಚ್ಚಗಣಿ, ಹರದನಹಳ್ಳಿ, ಕಣ್ಣೇನೂರು, ಕಪ್ಪಸೋಗೆ ಚಂದ್ರವಾಡಿ ಗ್ರಾಮಗಳ ಸುತ್ತಮುತ್ತಲ ಭಕ್ತರಿಗೆ ಆರಾಧ್ಯ ದೇವಿಯಾಗಿತ್ತು. ಹೀಗಾಗಿ ಭಕ್ತರು ಮೈಸೂರು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

ಇನ್ನೂ ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ದೇಗುಲ ಯಾರಿಗೆ ತೊಂದರೆ ಕೊಡುತ್ತಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುವುದರ ಪೋಸ್ಟ್ ಹಾಕಿದ್ದರು. ಹಿಂದೂ ದೇಗುಲಗಳನ್ನು ಜಿಲ್ಲಾಡಳಿತ ತೆರವು ಏಕಾಏಕಿ ತೆರವುಗೊಳಿಸುತ್ತಿರುವರ ಬಗ್ಗೆ ಕೆಲ ದಿನಗಳ ಹಿಂದೆಯಷ್ಟೇ ಕೆಡಿಪಿ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದರು. ಇದಾದ ಬಳಿಕ ಜಿಲ್ಲಾಡಳಿತ ರಾತ್ರೋರಾತ್ರಿ ಹಿಂದೂ ದೇವಾಲಯವನ್ನು ನೆಲಸಮ ಮಾಡಿರುವುದು ಸಂಸದರ ಆಕ್ರೋಶಕ್ಕೆ ಗುರಿಯಾಗಿದೆ.
ಪ್ರತಾಪ್ ಸಿಂಹಗೆ ಶಾಸಕ ರಾಮದಾಸ್ ಟಾಂಗ್
"ಹಿಂದೂ ದೇವಸ್ಥಾನ ತೆರವು ವಿಚಾರದಲ್ಲಿ ಆ ಧರ್ಮ, ಈ ಧರ್ಮ ಎಂಬುದೇನೂ ಇಲ್ಲ," ಎನ್ನುವ ಮೂಲಕ ಶಾಸಕ ಎಸ್.ಎ. ರಾಮದಾಸ್ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಮೈಸೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಂದೂ ದೇವಸ್ಥಾನ ತೆರವು ವಿಚಾರ ಕ್ರಮ ಸರಿಯಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಅವರ ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯ ಬೇರೆ. ಹಿಂದೂ ದೇವಾಲಯಗಳನ್ನು ಏಕಾಏಕಿ ತೆರವು ಮಾಡುತ್ತಿಲ್ಲ. ಮೊದಲು ದೇವಸ್ಥಾನಗಳನ್ನು ಉಳಿಸಿಕೊಳ್ಳಲು ಯೋಚನೆ ಮಾಡಲಾಗುತ್ತಿದೆ," ಎಂದಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, "ಹಿಂದೂ ದೇವಾಲಯಗಳನ್ನು ಏಕಾಏಕಿ ತೆರವು ಮಾಡುತ್ತಿಲ್ಲ. ಮೊದಲು ಅದನ್ನು ಉಳಿಸಿಕೊಳ್ಳುವ ಯೋಚನೆ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಸ್ಥಳಾಂತರಕ್ಕೆ ಚಿಂತನೆ ಇದೆ. ಇದೆರಡು ಸಾಧ್ಯವಾಗದಿದ್ದಾಗ ಅದನ್ನು ತೆರವು ಮಾಡಲಾಗುತ್ತಿದೆ. ಇದರಲ್ಲಿ ಆ ಧರ್ಮದ್ದು, ಈ ಧರ್ಮದ್ದು ಎಂಬುದು ಏನು ಇಲ್ಲ." ಎಂದರು.

"ನಾವು ಆದಷ್ಟು ಎಲ್ಲ ಧಾರ್ಮಿಕ ಕೇಂದ್ರಗಳನ್ನು ಉಳಿಸಿಕೊಳ್ಳುವ ಸ್ಥಳಾಂತರ ಮಾಡುವ ಚಿಂತನೆ ಇದೆ. ಈ ವಿಚಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗಮನಕ್ಕೂ ತರುತ್ತೇನೆ. ಇದರಲ್ಲಿ ಒಂದು ಕ್ಷೇತ್ರ ಒಂದು ಧರ್ಮ ಎಂಬುವ ವಿಚಾರ ಇರುವುದಿಲ್ಲ," ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
"ಇದೇ ವೇಳೆ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆ ಹಿನ್ನೆಲೆ ಮೋದಿ ಯುಗ್ ಉತ್ಸವ್ ಆಚರಣೆಗೆ ನಿರ್ಧಾರ ಮಾಡಲಾಗಿದೆ ಎಂದ ಶಾಸಕ ಎಸ್.ಎ ರಾಮದಾಸ್, ಪ್ರಧಾನಿ ಮೋದಿ ಜನ್ಮದಿನಾಚರಣೆ ಅಂಗವಾಗಿ ಮೈಸೂರಿನ ಕೆ. ಆರ್. ಕ್ಷೇತ್ರದ ಬಿಜೆಪಿ ಘಟಕದಿಂದ ವಿವಿಧ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ. 2021ರ ಸೆಪ್ಟೆಂಬರ್ 17ರಿಂದ 2022ರ ಸೆಪ್ಟೆಂಬರ್ 17ರವರೆಗೂ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿದೆ," ಎಂದರು.
"ನರೇಂದ್ರ ಮೋದಿ ಜನ್ಮದಿನೋತ್ಸವದ ಜೊತೆಗೆ ಅವರು ಗುಜರಾತಿನ ಮುಖ್ಯಮಂತ್ರಿ ಆಗಿ 20 ವರ್ಷಗಳಾಗುವ ಹಿನ್ನೆಲೆಯಲ್ಲಿ, ಮೋದಿ @71 ಆಜಾದ್ ಭಾರತ್ @75 ಸ್ವರ್ಣ ಕೆ. ಆರ್. ಎಂಬ 20 ದಿನಗಳ ಕಾಲ ಕಾರ್ಯಕ್ರಮ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮಂತ್ರಿಗಳು ಭಾಗಿಯಾಗಲಿದ್ದಾರೆ," ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
"ಸೆ.17ರಂದು ಮೋದಿ ಯುಗ್ ಉತ್ಸವ್ ವಸ್ತುಪ್ರದರ್ಶನ ಉದ್ಘಾಟನೆ ಆಗಲಿದೆ. ಈ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರ ಪ್ರಮುಖರು ಭಾಗಿಯಾಗಲಿದ್ದಾರೆ. ಬರುವ ಅಕ್ಟೋಬರ್ 6ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ," ಎಂದು ಮಾಹಿತಿ ನೀಡಿದರು.
ಪ್ರತಾಪ್ ಸಿಂಹ ಹೇಳಿದ್ದೇನು?
"ಕೇವಲ ಹಿಂದೂ ಧರ್ಮದ ದೇವಸ್ಥಾನಗಳನ್ನು ಮಾತ್ರ ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ. ರಸ್ತೆ ಆಗಲೀಕರಣಕ್ಕೆ ತೊಂದರೆಯಾಗಿರುವ ಇರ್ವಿನ್ ರಸ್ತೆಯ ಮಸೀದಿಯನ್ನು ತೆರವುಗೊಳಿಸಿಲ್ಲ. ದೇವರಾಜ ರಸ್ತೆಯಲ್ಲಿರುವ ದರ್ಗಾವನ್ನು ಯಾಕೆ ತೆರವು ಮಾಡಿಲ್ಲ," ಎಂದು ಮೈಸೂರು ಜಿಲ್ಲಾಡಳಿತದ ವಿರುದ್ಧ ಸಂಸದ ಪ್ರತಾಪ್ ಸಿಂಹ ಕೆಡಿಪಿ ಮೀಟಿಂಗ್ನಲ್ಲಿ ಕಿಡಿಕಾರಿದ್ದರು.












Click it and Unblock the Notifications