ಮೈಸೂರನ್ನು ಪ್ಲಾಸ್ಟಿಕ್ ಸ್ಟ್ರಾ ಮುಕ್ತ ಮಾಡಲು ಪಣತೊಟ್ಟ ದಂಪತಿ
ಮೈಸೂರು, ಮೇ.03 :ಸಾಮಾನ್ಯವಾಗಿ ನಾವು ಎಳನೀರು ಅಥವಾ ಜ್ಯೂಸ್ ಕುಡಿಯಲು ಹೋದರೆ ಮೊದಲಿಗೆ ಕೇಳುವುದು ಸ್ಟ್ರಾ ಕೊಡಿ ಎಂದು. ಆದರೆ ಈ ಪ್ಲಾಸ್ಟಿಕ್ ಸ್ಟ್ರಾ ನಿಂದ ಎಷ್ಟು ತೊಂದರೆಯಾಗುತ್ತದೆ, ಪರಿಸರಕ್ಕಾಗುವ ಹಾನಿಯೇನು ? ಎಂಬ ಕುರಿತಾಗಿ ನಾವು ಯೋಚಿಸುವುದೇ ಇಲ್ಲ.
ಕೇವಲ ಮೈಸೂರಿನಲ್ಲೇ ದಿನವೊಂದಕ್ಕೆ ಸಾವಿರಾರು ಸ್ಟ್ರಾ ಗಳ ಬಳಕೆ ಎಗ್ಗಿಲ್ಲದೆ ಸಾಗುತ್ತಿದೆ. ಸ್ಟ್ರಾವನ್ನು ಬಳಸುವುದಷ್ಟೇ ಅಲ್ಲ, ಬಳಸಬೇಡಿ ಎಂದರೆ ಪಾಲಿಕೆ ಬ್ಯಾನ್ ಮಾಡಬೇಕು ಎಂದು ಹೇಳಿ ಸುಮ್ಮನಾಗುತ್ತೇವೆ. ಆದರೆ ಮೈಸೂರಿನಲ್ಲಿ ನೆಲೆಸಿರುವ ಎನ್ ಆರ್ ಐ ದಂಪತಿಯೋರ್ವರು ಇಲ್ಲಿನ ಎಳನೀರು ವ್ಯಾಪಾರಿ ಓರ್ವರಿಗೆ ಸ್ಟ್ರಾ ಬಳೆಸದಂತೆ ವಿನಂತಿ ಮಾಡಿ ಅರಿವು ಮೂಡಿಸುತ್ತಿದ್ದಾರೆ.
ಹೌದು, ಮೈಸೂರಿನ ಗೋಕುಲಂ ಮೊದಲನೇ ಹಂತದ ನಿರ್ಮಲಾ ಕಾನ್ವೆಂಟ್ ಬಳಿ ಇರುವ ಎಳನೀರಿನ ವ್ಯಾಪಾರಿ ಹೇಮಂತ್ ಕುಮಾರ್ ತನ್ನ ಬಳಿ ಬರುವ ಗ್ರಾಹಕರಿಗೆ ಈಗಲೂ ಪ್ಲಾಸ್ಟಿಕ್ ಸ್ಟ್ರಾ ಬಳಸದಂತೆ ವಿನಂತಿಸುತ್ತಿದ್ದಾರೆ. ಇದಕ್ಕೆ ಬದಲಾಗಿ ಒಂದು ರೂ ಹೆಚ್ಚುವರಿಯಾಗಿ ಪಡೆದು ಪೇಪರ್ ಸ್ಟ್ರಾ ಬಳಕೆ ಮಾಡುವಂತೆಯೂ ಪ್ರಚಾರ ನಡೆಸುತ್ತಿದ್ದಾರೆ.
ಈ ರೀತಿ ಅವರು ಪ್ರಚಾರ ಮಾಡಲು ಪ್ರಮುಖ ಕಾರಣ ಕಳೆದ 10 ವರುಷಗಳಿಂದ ಗೋಕುಲಂ ನಿವಾಸಿಯಾಗಿರುವ ದಂಪತಿಗಳಾದ ತಾರಾ ಮತ್ತು ರೋಬ್...

ಪೇಪರ್ ಸ್ಟ್ರಾ ಬಳಸುವಂತೆ ಸೂಚನೆ
ಹೇಮಂತ್ ರವರ ಬಳಿ ದಿನವೂ ಎಳನೀರು ಕುಡಿಯಲು ಬರುತ್ತಿದ್ದ ರೋಬ್ ದಂಪತಿ, ಒಮ್ಮೆ ಗ್ರಾಹಕರು ಸ್ಥಳದಲ್ಲಿ ಯಥೇಚ್ಛವಾಗಿ ಬಳಕೆ ಮಾಡಿ ಬಿಸಾಡಿದ್ದ ಪ್ಲಾಸ್ಟಿಕ್ ಸ್ಟ್ರಾ ತ್ಯಾಜ್ಯ ರಾಶಿಯನ್ನು ಕಂಡು ಬೇಸರಗೊಂಡರು. ಅಲ್ಲದೇ "ಗ್ರಾಹಕರಿಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಡೆಯಬೇಕು. ಮೈಸೂರಿನ ಸ್ವಚ್ಛತೆಗೆ ನಿನ್ನ ಕೊಡುಗೆಯೂ ಇದೆ. ನಿನ್ನ ಬಳಿ ಬರುವ ಗ್ರಾಹಕರಿಗೆ ಸಮಾಧಾನವಾಗಿ ಪ್ಲಾಸ್ಟಿಕ್ ಸ್ವಾ ಬದಲು ಪೇಪರ್ ಸ್ಟ್ರಾ ಬಳಸುವಂತೆ ಅರಿವು ಮೂಡಿಸಬೇಕು" ಎಂದು ಹೇಮಂತ್ ಗೆ ತಿಳಿಸಿದ್ದಾರೆ.

ಅವರೇ ಪೇಪರ್ ಸ್ಟ್ರಾ ತರಿಸಿಕೊಟ್ಟರು
ಅಲ್ಲದೇ ಮುಂದುವರೆದು ಮೇಕಿಂಗ್ ಇಂಡಿಯಾ ಯೋಜನೆಯಲ್ಲಿ ತಯಾರಾಗುತ್ತಿರುವ ಪೇಪರ್ ಸ್ಟ್ರಾಗಳನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿ ಹೇಮಂತ್ ಗೆ ತರಿಸಿ ಕೊಟ್ಟಿದ್ದರಲ್ಲದೆ, ಅವರೇ ಪ್ಲಾಸ್ಟಿಕ್ ಸ್ಟ್ರಾ ಬಳಕೆಯಿಂದ ಪರಿಸರಕ್ಕಾಗಿತ್ತಿರುವ ಹಾನಿ ಬಗ್ಗೆ ಬೋರ್ಡ್ ಒಂದನ್ನು ಸಹ ಬರೆದುಕೊಟ್ಟಿದ್ದಾರೆ.

ನಾಮಫಲಕದಲ್ಲಿಏನಿದೆ?
ನಾಮಫಲಕದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಪ್ಲಾಸ್ಟಿಕ್ ನಿಂದ ಭೂಮಿಯನ್ನು ಉಳಿಸಿಕೊಳ್ಳಬೇಕು. ಮಕ್ಕಳ ರಕ್ಷಣೆ ನಮ್ಮದು, ಸ್ಟ್ರಾ ಮುಕ್ತ ಮೈಸೂರು, ತ್ಯಾಜ್ಯದಿಂದ ಪರಿಸರ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದು ಇಂಗ್ಲಿಷಿನಲ್ಲಿ ಬರೆದು ಕೆಳಗೆ ಕ್ಲೀನ್ ಇಂಡಿಯಾ ಎಂದು ನಮೂದಿಸಲಾಗಿದೆ.

ದಂಪತಿಗಳನ್ನು ಹೊಗಳಿದ ಹೇಮಂತ್
"ನಾಮಫಲಕ ನೋಡಿದ ಕೆಲ ಗ್ರಾಹಕರು ಸ್ಟ್ರಾ ಬಳಕೆ ಮಾಡದೆ ಎಳನೀರು ಕುಡಿದು ಹೋಗುತ್ತಿದ್ದಾರೆ. ಸ್ವಚ್ಛ ಭಾರತ್ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿಗಳನ್ನು ವೆಚ್ಚ ಮಾಡುತ್ತದೆ. ಸ್ವಚ್ಛತೆಗಾಗಿ ಮೈಸೂರು ಒಮ್ಮೆ ರಾಷ್ಟ್ರದಲ್ಲಿ ಮೊದಲ ಸ್ಥಾನ ಪಡೆದಿತ್ತು. ಈ ಸ್ಥಾನವನ್ನು ಉಳಿಸಿಕೊಳ್ಳಲು ವ್ಯಾಪಾರಿಗಳು ನಾಗರಿಕರೆಲ್ಲರೂ ಸಹಕಾರ ನೀಡಬೇಕು. ನಿತ್ಯ ನನ್ನ ಬಳಿ ಎಳನೀರು ಕುಡಿಯಲು ನೂರಾರು ಮಂದಿ ಬರುತ್ತಾರೆ. ಅವರೆಲ್ಲಾ ಸ್ಟ್ರಾ ಕೇಳುತ್ತಾರೆ. ಇದನ್ನು ನಿಲ್ಲಿಸಲು ಆದಷ್ಟು ಪ್ರಯತ್ನಿಸುತ್ತಿದ್ದೇನೆ. ಆದರೆ ರೋಬ್ ದಂಪತಿ ಪ್ರತಿನಿತ್ಯ ಪರಿಸರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ" ಎಂದು ಅವರ ಬಗ್ಗೆ ಹೇಮಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕ್ಕಪಕ್ಕದಲ್ಲಿ ಕಸ ಬಿಸಾಡಿದರೂ ನೋಡದೆ ಮುಖ ತಿರುಗಿಸುವ ನಮ್ಮಂತಹವರ ನಡುವೆ ಈ ಎನ್ ಆರ್ಐ ದಂಪತಿ ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸುವ ಪರಿ ಶ್ಲಾಘನೀಯವೇ ಸರಿ.












Click it and Unblock the Notifications