ಮೈಸೂರು : ಜೂನ್ ತನಕ ಹೊಸ ನೀರಿನ ಸಂಪರ್ಕವಿಲ್ಲ
ಮೈಸೂರು, ಏಪ್ರಿಲ್ 24 : ಜೂನ್ ತಿಂಗಳ ತನಕ ಹೊಸ ನೀರಿನ ಸಂಪರ್ಕ ನೀಡುವುದಿಲ್ಲ ಎಂದು ವಾಣಿ ವಿಲಾಸ ನೀರು ಸರಬರಾಜು ಮಂಡಳಿ ಹೇಳಿದೆ. ಆದ್ದರಿಂದ, ಮಳೆಗಾಲ ಆರಂಭವಾಗುವ ತನಕ ಮೈಸೂರಿನ ಜನರು ಹೊಸ ನೀರಿನ ಸಂಪರ್ಕ ಪಡೆಯುವಂತಿಲ್ಲ.
ಮೈಸೂರು ಮಹಾನಗರ ಪಾಲಿಕೆ ಪರವಾಗಿ ವಾಣಿ ವಿಲಾಸ ನೀರು ಸರಬರಾಜು ಮಂಡಳಿ ನಗರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತದೆ. ಬೇಸಿಗೆಯ ಪರಿಣಾಮ ನಗರಕ್ಕೆ ನೀರು ಪೂರೈಕೆ ಮಾಡುವ ಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

'ಜೂನ್ ತನಕ ಯಾವುದೇ ಹೊಸ ನೀರಿನ ಸಂಪರ್ಕಕ್ಕೆ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ವಿವಿಧ ಮೂಲಗಳಲ್ಲಿರುವ ನೀರಿನ ಪ್ರಮಾಣ ಈಗಿರುವ ಸಂಪರ್ಕಗಳಿಗೆ ಪೂರೈಕೆ ಮಾಡಲು ಸಾಕಾಗುತ್ತದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ 15ರ ಬಳಿಕ ಹೊಸ ನೀರಿನ ಸಂಪರ್ಕದ ಯಾವುದೇ ಅರ್ಜಿಗಳನ್ನು ವಾಣಿ ವಿಲಾಸ ನೀರು ಸರಬರಾಜು ಮಂಡಳಿ ಸ್ವೀಕರಿಸಿಲ್ಲ. ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹೊಸ ನೀರು ಸರಬರಾಜು ನೀಡುವುದನ್ನು ಮಂಡಳಿ ಸ್ಥಗಿತಗೊಳಿಸಿದೆ.
ಮೈಸೂರು ನಗರಕ್ಕೆ ಕೆಆರ್ಎಸ್ನಿಂದ 03 ಟಿಎಂಸಿ ಅಡಿ, ಕಬಿನಿ ಜಲಾಶಯದಿಂದ 0.1 ಟಿಎಂಸಿ ಅಡಿ ನೀರನ್ನು ಒಂದು ತಿಂಗಳಿಗೆ ಪೂರೈಕೆ ಮಾಡಲಾಗುತ್ತದೆ. ನಗರದ ವ್ಯಾಪ್ತಿಯಲ್ಲಿ 10 ಲಕ್ಷಕ್ಕೂ ಅಧಿಕ ನೀರಿನ ಸಂಪರ್ಕಗಳಿವೆ.
ಜೂನ್ 15ರ ಬಳಿಕ ಹೊಸ ನೀರಿನ ಸಂಪರ್ಕವನ್ನು ನೀಡಲಾಗುತ್ತದೆ. ಜನರು ಮಂಡಳಿ ಜೊತೆ ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications