ಆತಂಕ ತಂದಿದ್ದ ಕೊಕ್ಕರೆಗಳ ಸಾವು; ಮೈಸೂರಿನಲ್ಲಿ ಹಕ್ಕಿ ಜ್ವರ ಇಲ್ಲ
ಮೈಸೂರು, ಮಾರ್ಚ್ 10: ಮೈಸೂರಿನಲ್ಲಿ ಕೊಕ್ಕರೆಗಳು ಸಾವನ್ನಪ್ಪಿರುವುದಕ್ಕೂ ಹಕ್ಕಿ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಶುವೈದ್ಯ ಡಾ.ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂನ ಐದನೇ ಮುಖ್ಯ ರಸ್ತೆಯಲ್ಲಿ ಕಳೆದೊಂದು ವಾರದಿಂದ ಸುಮಾರು 12 ಕೊಕ್ಕರೆಗಳು ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಕ್ಕಿಜ್ವರದ ಶಂಕೆ ವ್ಯಕ್ತವಾಗಿತ್ತು. ನಗರ ಪಾಲಿಕೆಯ ಪಶು ವೈದ್ಯಾಧಿಕಾರಿ ಡಾ.ತಿರುಮಲಗೌಡ ಅವರ ಮನವಿಯ ಮೇರೆಗೆ ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಸುರೇಶ್, ಮೃತ ಕೊಕ್ಕರೆಗಳನ್ನು ಪರಿಶೀಲಿಸಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಪರೀಕ್ಷೆಗೆಂದು ಕಳುಹಿಸಿಕೊಟ್ಟಿದ್ದರು.

ಆರೋಗ್ಯ ಮತ್ತು ಜೈವಿಕ ಸಂಸ್ಥೆಯು ಕೊಕ್ಕರೆಗಳನ್ನು ಪರೀಕ್ಷಿಸಿದ್ದು, ಹಕ್ಕಿ ಜ್ವರದ ಅಂಶಗಳಿಲ್ಲದಿರುವ ಕುರಿತು ದೃಢಪಡಿಸಿದೆ ಎಂದು ಡಾ.ಸುರೇಶ್ ಮಾಹಿತಿ ನೀಡಿದ್ದಾರೆ. ಮೈಸೂರು ಭಾಗದಲ್ಲಿ ಹಕ್ಕಿ ಜ್ವರದ ಕುರಿತು ಜನರು ಆತಂಕ ಪಡಬೇಕಿಲ್ಲ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications