ಅಪಹರಣಕಾರರಿಂದ ತಪ್ಪಿಸಿಕೊಂಡ ಚಾಲಾಕಿ ಹುಡುಗಿ: ಆರೋಪಿಗಳ ಬಂಧನ
ಮೈಸೂರು, ಸೆಪ್ಟೆಂಬರ್ 1: ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅಪಹರಣಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ನಂಜನಗೂಡು ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಗ್ರಾಮದ ದೇವರಾಜು ಅಲಿಯಾಸ್ ದೇವ, ಆತನ ಪತ್ನಿ ನಾಗಲಕ್ಷ್ಮಿ, ಮತ್ತೊಬ್ಬ ಆರೋಪಿ ಶಿವಲಿಂಗನಾಯಕ ಅಲಿಯಾಸ್ ಗುಂಡು ಎಂಬುವರೇ ಬಂಧಿತ ಆರೋಪಿಗಳು.

ಇವರು ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಬಿಇ ವಿದ್ಯಾರ್ಥಿನಿ ರಮ್ಯ ಎಂಬಾಕೆ ನಂಜನಗೂಡಿಗೆ ಬಂದಿದ್ದ ವೇಳೆ ಹಿಂಬಾಲಿಸಿ ಅಪಹರಣಕ್ಕೆ ಯತ್ನಿಸಿದ್ದು, ಆಕೆ ತಪ್ಪಿಸಿಕೊಂಡಿದ್ದರಿಂದ ಪರಾರಿಯಾಗಿದ್ದರು.
ಚಾಮರಾಜನಗರದಲ್ಲಿ ಬಿಇ ವ್ಯಾಸಾಂಗ ಮಾಡುತ್ತಿದ್ದ ಮಂಡ್ಯ ಜಿಲ್ಲೆಯ ರಮ್ಯಳ ಚಲನವಲನಗಳನ್ನು ಗಮನಿಸಿ ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಆಕೆಯನ್ನು ಅಪಹರಿಸಿ 25 ಲಕ್ಷ ರೂ.ಗಳನ್ನು ವಸೂಲಿ ಮಾಡುವ ಉದ್ದೇಶ ಹೊಂದಿದ್ದರು.
ಅದರಂತೆ ಆ.23 ರಂದು ರಮ್ಯಳ ಕಾಲೇಜಿನಿಂದ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡ ಆರೋಪಿ ದೇವರಾಜು ನಾನು ನಿನ್ನ ಚಿಕ್ಕಪ್ಪ ಎಂದು ಫೋನ್ ಮೂಲಕ ಪರಿಚಯ ಮಾಡಿಕೊಂಡು ನಿನ್ನನ್ನು ನೋಡಬೇಕು ಬಾ ಎಂದು ಕರೆ ಮಾಡಿದ್ದ ಕಾರಣ ತನ್ನ ಚಿಕ್ಕಪ್ಪನನ್ನು ಕಾಣಲು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಬಳಿ ರಮ್ಯ ಕಾಯುತ್ತಿದ್ದಳು.
ಈ ವೇಳೆ ದೇವರಾಜು ಪತ್ನಿ ಶೋಭಾ ಎಂದು ಪರಿಚಯ ಮಾಡಿಕೊಂಡು ವಾಹನದಲ್ಲಿ ಹತ್ತಿಸಿಕೊಂಡು ಅಪಹರಿಸಲು ಯತ್ನಿಸಿ ವಿದ್ಯಾರ್ಥಿನಿ ಚಾಣಾಕ್ಷತನದಿಂದ ಪಾರಾಗಿ ಬಂದು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಳು. ಅದರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.
ಆರೋಪಿಗಳು ಸ್ಕಾರ್ಪಿಯೋ ವಾಹನವನ್ನು ಬಿಟ್ಟು ಓಡಿದ್ದರಿಂದ ಅದರ ನಂಬರನ್ನು ಮುಂದಿಟ್ಟುಕೊಂಡು ಆರೋಪಿಗಳ ಸುಳಿವು ಪಡೆದು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಎಸ್ಪಿ ಮೊಹಮೊದ್ ಸುಜಿತ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಗೋಪಾಲಕೃಷ್ಣ, ನಂಜನಗೂಡು ಪಟ್ಟಣ ಠಾಣೆಯ ಪಿಎಸೈ ಸವಿ, ಅಪರಾಧ ವಿಭಾಗದ ಪಿಎಸೈ ವೀರಭದ್ರಪ್ಪ, ಸಿಬ್ಬಂದಿ ಸತೀಶ್, ಪ್ರಸನ್ನಕುಮಾರ್, ಕೃಷ್ಣ, ಅಬ್ದುಲ್ ಲತೀಫ್, ದೇವರಾಜು, ನಾಗೇಂದ್ರ, ಸುಶೀಲ್ ಕುಮಾರ್, ಶ್ರೀಕಾಂತ್ ಮೊದಲಾದವರು ಪಾಲ್ಗೊಂಡಿದ್ದರು.












Click it and Unblock the Notifications