ಪಂಚರಥೋತ್ಸವಕ್ಕಾಗಿ ನಂಜನಗೂಡು ಬಂದ್ ಮಾಡಿದ ಭಕ್ತರು!
ಮೈಸೂರು, ಮಾರ್ಚ್ 21: ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಮೈಸೂರಿನ ನಂಜನಗೂಡಿನಲ್ಲಿ ಪ್ರತಿ ವರ್ಷದಂತೆ ನಡೆಯುವ ಪಂಚ ಮಹಾರಥೋತ್ಸವವನ್ನು ಈ ಬಾರಿ ನಡೆಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ನಂಜನಗೂಡು ಬಂದ್ ಕರೆ ನೀಡಲಾಗಿತ್ತು. ಶನಿವಾರ ಕರೆ ನೀಡಿದ್ದ ಬಂದ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಪಂಚ ಮಹಾರಥೋತ್ಸವ ನಡೆದಿರಲಿಲ್ಲ. ಇದೀಗ ಕೊರೋನಾ ಪ್ರಕರಣ ಹೆಚ್ಚುತ್ತಿರುವ ಕಾರಣ ಪಂಚರಥೋತ್ಸವಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಿರ್ಬಂಧ ಹೇರಿದ್ದರು.
ನಂಜನಗೂಡು; ಗೌತಮ ಪಂಚ ಮಹಾರಥೋತ್ಸವಕ್ಕೆ ಕೋವಿಡ್ ಅಡ್ಡಿ
ಇದು ಬಹಳಷ್ಟು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗಾಗಲೇ ಹಲವೆಡೆ ಜಾತ್ರೆಗಳು ನಡೆದಿವೆ. ರಾಜಕೀಯ ಸಮಾವೇಶಗಳು ನಡೆದಿವೆ. ಇದ್ಯಾವುದಕ್ಕೆ ಇಲ್ಲದ ನಿರ್ಬಂಧ ಪಂಚರಥೋತ್ಸವಕ್ಕೆ ಏಕೆ? ಎಂದು ಹಲವರು ಪ್ರಶ್ನಿಸಿದ್ದರು. ರಥೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಬಂದ್ ಕರೆ ನೀಡಲಾಗಿತ್ತು.
ಜಾತ್ರೆ, ಉತ್ಸವಗಳಿಗೆ ಅಸ್ತು: ಭಕ್ತಾದಿಗಳಿಗೆ ಸಂತಸದ ಸುದ್ದಿ ನೀಡಿದ ರಾಜ್ಯ ಸರ್ಕಾರ
ಪಂಚರಥೋತ್ಸವದ ಸಂದರ್ಭ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳನ್ನು ಎಳೆಯಲಾಗುವುದು. ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದ್ದು, ಪಂಚ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಈ ರಥವು ಸುಮಾರು 205 ಟನ್ ತೂಕ, 90 ಅಡಿ ಎತ್ತರವನ್ನು ಹೊಂದಿದೆ.
'ಮಾರ್ಕೆಪೂನವ್' ಜಾತ್ರೆ ಸಂಪನ್ನ; ಸೂಚಿ ಚುಚ್ಚಿಕೊಂಡು ಹರಕೆ ತೀರಿಸಿದ ಮಕ್ಕಳು
ನಂಜನಗೂಡು ಬಂದ್
ಈಗಾಗಲೇ ಮೈಸೂರಿನಲ್ಲಿ ಕನ್ನಡ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಜಾತ್ರೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದಲ್ಲದೆ ಸಾರ್ವಜನಿಕರು ಕೂಡ ಜಾತ್ರೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದರು. ಆದರೆ, ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪದ ಕಾರಣ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಭಕ್ತ ಮಂಡಳಿ, ಮತ್ತು ಕೆಲವು ಸಂಘ-ಸಂಸ್ಥೆಗಳು ಶನಿವಾರ ನಂಜನಗೂಡು ಬಂದ್ ಮಾಡಲು ನಿರ್ಧರಿಸಿ, ಬೆಳಗ್ಗೆ 6 ಗಂಟೆಯಿಂದ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಮಾಲೀಕರ ಮನವೊಲಿಸಿ ಬಂದ್ ಆಚರಣೆ ಮಾಡಿದರು.
ಚಿಕ್ಕತೇರು ಎಳೆಯಲು ಜಿಲ್ಲಾಧಿಕಾರಿ ಆದೇಶ
ಈ ಬಾರಿ ಮಾರ್ಚ್ 26 ರಂದು ಐತಿಹಾಸಿಕ-ಪುರಾಣ ಪ್ರಸಿದ್ದ ಶ್ರೀ ಗೌತಮ ಪಂಚರಥೋತ್ಸವವು ನಡೆಯ ಬೇಕಾಗಿತ್ತು. ಇದಕ್ಕಾಗಿ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಜಿಲ್ಲಾಧಿಕಾರಿ ಅವರು ಪಂಚರಥೋತ್ಸವವನ್ನು ನಿಷೇಧಿಸಿ, ಕೇವಲ 500 ಮಂದಿಯಿಂದ ಚಿಕ್ಕ ತೇರನ್ನು ಎಳೆಯಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ಸುತ್ತೋಲೆ ಹೊರಡಿಸಿದ್ದರು. ಈ ಆದೇಶ ಹೊರ ಬೀಳುತ್ತಿದ್ದಂತೆ ಊರಿನ ಪ್ರಮುಖರು, ಯುವಕರು, ರಾಜಕೀಯ ಮುಖಂಡರು ಮತ್ತು ಸಂಘ ಸಂಸ್ಥೆಗಳು ಮತ್ತು ಭಕ್ತಮಂಡಳಿಗಳು ಆಕ್ರೋಶಗೊಂಡಿದ್ದವು.
ಮನವಿ ನೀಡಿದರೂ ಪ್ರಯೋಜನವಾಗಲಿಲ್ಲ
ಈ ಸಂಬಂಧ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಹಲವಾರು ಜಾತ್ರೆಗಳು ಯಾವುದೇ ಪ್ರಮಾದಗಳಿಲ್ಲದೆ ನಿರ್ವಿಘ್ನವಾಗಿ ನಡೆದಿವೆ. ಹೀಗಿರುವಾಗ ನಂಜನಗೂಡಿನ ಶ್ರೀ ಗೌತಮ ಪಂಚರಥೋತ್ಸವಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ದಿಢೀರ್ ಆಗಿ ನಂಜನಗೂಡು ಬಂದ್ ಮಾಡಲಾಯಿತು.
ಪಂಚರಥೋತ್ಸವಕ್ಕೆ ನಿರ್ಬಂಧ ಹೇರಿದ್ದೇಕೆ?
ಕಳೆದ 10 ತಿಂಗಳ ಅವಧಿಯಲ್ಲಿ ಕೋವಿಡ್ ಕಾರಣ ಪಂಚರಥೋತ್ಸವ ನಡೆಸಿಲ್ಲ. ದೇವಸ್ಥಾನಗಳ ಮುಖ್ಯ ದ್ವಾರಗಳನ್ನು ಮುಚ್ಚಿ ಜನತೆಯ ಭಕ್ತಿಭಾವಗಳಿಗೆ ತೆರೆ ಎಳೆಯಲಾಗಿದೆ. ಈಗಾಗಲೇ ಹಲವಾರು ಜಾತ್ರೆಗಳು, ಭಕ್ತಿ ಪ್ರಧಾನ ಮಾರಿ ಹಬ್ಬಗಳು ನಡೆದಿದ್ದು ಯಾರಿಗೂ ಯಾವ ಹಾನಿಯೂ ಆಗದಿದ್ದರೂ ಪಂಚರಥೋತ್ಸವಕ್ಕೆ ನಿರ್ಬಂಧ ಹೇರಿದ್ದೇಕೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸದ್ಯ ನಂಜನಗೂಡು ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟು ತೆರೆಯದೆ ಬಂದ್ಗೆ ಬೆಂಬಲ ನೀಡಿದ್ದು ಕಂಡುಬಂತು.
ಪಂಚ ಮಹಾರಥೋತ್ಸವದ ಬಗ್ಗೆ ಗೊತ್ತಾ?
ನಂಜನಗೂಡು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು ಇಲ್ಲಿರುವ ಶ್ರೀಕಂಠೇಶ್ವರ ದೇಗುಲ ಇತಿಹಾಸ ಪ್ರಸಿದ್ಧವಾಗಿದೆ. ವರ್ಷಂಪ್ರತಿ ಮೀನ ಮಾಸದಲ್ಲಿ ಉತ್ತರ ನಕ್ಷತ್ರದ ದಿನದಂದು ಉತ್ತಮ ಲಗ್ನದಲ್ಲಿ ಪಂಚಮಹಾರಥೋತ್ಸವ ನಡೆಯುತ್ತದೆ. ಇಂತಹವೊಂದು ರಥೋತ್ಸವವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಸಕ್ತ ವರ್ಷ ಮಾಚ್.26ರಂದು ನಿಗದಿಯಾಗಿತ್ತು. ಪಂಚರಥೋತ್ಸವದ ಸಂದರ್ಭ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳನ್ನು ಎಳೆಯಲಾಗುವುದು. ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದ್ದು. ಈ ರಥವು ಸುಮಾರು 205 ಟನ್ ತೂಕ, 90 ಅಡಿ ಎತ್ತರವನ್ನು ಹೊಂದಿದೆ. ವಿವಿಧ ಬಣ್ಣದ ಬಟ್ಟೆಗಳನ್ನು ಸುತ್ತಿ, ಹೂವಿನಿಂದ ಅಲಂಕರಿಸಲಾಗುವ ರಥದ ತುದಿಯಲ್ಲಿ ಧ್ವಜವನ್ನು ಕಟ್ಟಲಾಗುತ್ತದೆ.
ಶ್ರೀಕಂಠನಿಗೆ ಹರಕೆ ತೀರಿಸುವ ಭಕ್ತರು
ಮಹಾರಥೋತ್ಸವದ ಈ ಭವ್ಯ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದ ಭಕ್ತರು ಜೈ ಶ್ರೀಕಂಠ, ಜೈ ನಂಜುಂಡ ಎಂದು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗುತ್ತಾ ರಥಕ್ಕೆ ಎರಡು ಕಡೆಯಲ್ಲಿ ಕಟ್ಟಿದ್ದ ಹಗ್ಗವನ್ನು ಸಾವಿರಾರು ಜನ ಎಳೆಯುತ್ತಾರೆ. ರಥ ಮುಂದೆ ಚಲಿಸುತ್ತಿದ್ದಂತೆಯೇ ಭಾವಪರವಶಗೊಂಡ ಭಕ್ತರು ರಥದ ಮೇಲೆ ಜವನ ಬಾಳೆಹಣ್ಣುಗಳನ್ನು ಎಸೆದು ತಮ್ಮ ಹರಕೆಯನ್ನು ಶ್ರೀಕಂಠನಿಗೆ ಅರ್ಪಿಸುತ್ತಾರೆ. ರಥವು ಜನಸಾಗರದೊಂದಿಗೆ ಚಲಿಸಿ ರಾಜಗೋಪುರಕ್ಕೆ ನೇರವಾಗಿ ಬಂದು ನಿಂತಾಗ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ. ನೂತನವಾಗಿ ವಿವಾಹವಾದ ನವದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ದವನ ಎಸೆಯುವ ಮೂಲಕ ತಮ್ಮ ಹರಕೆಯನ್ನು ಒಪ್ಪಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.