ನಂಜನಗೂಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೈಕ್ ನಿಲ್ಲಿಸಿದ್ರೆ ಹುಷಾರ್!
ಮೈಸೂರು, ಡಿಸೆಂಬರ್.22: ಬೆಂಕಿ ಪೊಟ್ಟಣ ಕೇಳುವ ನೆಪದಲ್ಲಿ ಬೈಕ್ ಅಡ್ಡ ಹಾಕುತ್ತಿದ್ದ ಖದೀಮರು ನಂತರದಲ್ಲಿ ಮಾಡುತ್ತಿದ್ದ ಕೆಲಸವೇ ಬೇರೆ. ಒಂಟಿ ಬೈಕ್ ಸವಾರರನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು ಬೈಕ್ ನಿಲ್ಲಿಸುತ್ತಿದ್ದಂತೆ ಅವರಲ್ಲಿದ್ದ ಮೊಬೈಲ್, ಹಣ, ಚಿನ್ನವನ್ನು ಕದ್ದು ಪರಾರಿ ಆಗುತ್ತಿದ್ದರು.
ಕಳೆದ ಆರು ತಿಂಗಳಿನಿಂದ ಇದೇ ರೀತಿಯ ಸಾಲು ಸಾಲು ಪ್ರಕರಣಗಳು ದಾಖಲಾಗಿದ್ದವು. ಇದರಿಂದ ಅಲರ್ಟ್ ಆದ ನಂಜನಗೂಡು ಪೊಲೀಸರು ಇಂದು ಮೂವರು ಚಿಗುರು ಮೀಸೆ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರುನಿಂದ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ 3 ರಿಂದ 5 ಗಂಟೆ ನಡುವೆ ಸಂಚರಿಸುವ ಬೈಕ್ ಗಳೇ ಖದೀಮರ ಟಾರ್ಗೆಟ್ ಮಾಡಿಕೊಂಡಿದ್ದರು. ಒಂಟಿ ಬೈಕ್ ಸವಾರರನ್ನು ತಡೆದು ಬೆಂಕಿ ಪೊಟ್ಟಣ ಕೇಳುತ್ತಿದ್ದ ಖದೀಮರು ನಂತರ ಅವರನ್ನು ಬೆದರಿಸಿ ದರೋಡೆ ಮಾಡುತ್ತಿದ್ದರು.

ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು:
ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯ ಹುಟ್ಟಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಲು ನಂಜನಗೂಡು ಪೊಲೀಸರೇ ಮಾರುವೇಷದಲ್ಲಿ ಅಖಾಡಕ್ಕೆ ಇಳಿದರು. ಆಗ ಆರೋಪಿಗಳಾದ ವರುಣ್(19), ಸಯ್ಯದ್ ಅಜಾದ್(19) ಹಾಗೂ ಜಯಂತ್ (19) ಸೇರಿದಂತೆ ಇಬ್ಬರು ಬಾಲಾಪರಾಧಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಇನ್ನು, ಬಂಧಿತರಿಂದ 10 ಮೊಬೈಲ್, 12 ಸಾವಿರ ನಗದು, ಕೃತ್ಯಕ್ಕೆ ಬಳಸಿದ 2 ಬೈಕ್ ಹಾಗೂ ಎರಡು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದರು. ಐಶಾರಾಮಿ ಜೀವನಕ್ಕಾಗಿ ಯುವಕರು ಈ ರೀತಿಯ ಕೃತ್ಯವನ್ನು ಎಸಗುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಐದು ಪ್ರಕರಣ ಬೆಳಕಿಗೆ ಬಂದಿದೆ. ಇದರ ಜೊತೆಗೆ ಗುಂಡ್ಲುಪೇಟೆ ಹಾಗೂ ಮೈಸೂರು ಭಾಗದಲ್ಲೂ ಕೂಡಾ ಈ ರೀತಿಯ ದರೋಡೆ ಪ್ರಕರಣ ನಡೆದಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದರು.












Click it and Unblock the Notifications