ಬಳ್ಳೆ ಆನೆ ಶಿಬಿರದಲ್ಲಿದೆ ದ್ರೋಣ-ರಾಜೇಂದ್ರರ ಸಮಾಧಿ!
ಮೈಸೂರು, ಸೆಪ್ಟೆಂಬರ್ 25: ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಇದುವರೆಗೆ ಹಲವು ಆನೆಗಳು ಅಂಬಾರಿ ಹೊತ್ತು ಸಾಗಿವೆ. ಹೀಗೆ ಸಾಗಿದ ಆನೆಗಳ ಗತ್ತು, ಗೈರತ್ತು, ಗಾಂಭೀರ್ಯದ ನಡಿಗೆ ಎಲ್ಲವೂ ನಮ್ಮನ್ನು ನೆನಪಾಗಿ ಕಾಡುತ್ತವೆ.
ಇಂತಹ ಅಂಬಾರಿ ಹೊತ್ತ ಆನೆಗಳ ನಡುವೆ ದ್ರೋಣ ಮತ್ತು ರಾಜೇಂದ್ರರ ಹೆಸರು ಅಚ್ಚಳಿಯದೆ ಉಳಿದಿದೆ. ಅಷ್ಟೇ ಅಲ್ಲ, ಎಚ್.ಡಿ.ಕೋಟೆಯ ಬಳ್ಳೆ ಆನೆ ಶಿಬಿರದಲ್ಲಿರುವ ಇವರ ಸಮಾಧಿಗಳು ಇಂದಿಗೂ ಇವರು ಬದುಕಿದ ರೀತಿ, ಮೈಸೂರು ದಸರಾದಲ್ಲಿ ಜಂಬೂ ಸವಾರಿಗೆ ನೀಡಿದ ಕೊಡುಗೆಗಳನ್ನು ಸಾರಿ ಹೇಳುತ್ತಿವೆ.

ಹಾಗೆ ನೋಡಿದರೆ ದ್ರೋಣ ಮತ್ತು ರಾಜೇಂದ್ರ ಇತರೆ ಆನೆಗಳಿಗಿಂತ ವಿಭಿನ್ನವಾಗಿದ್ದವು. ಸಾಧು ಮತ್ತು ದೈತ್ಯ ಬಲ ಹೊಂದಿದ್ದ ಇವು ಮೈಸೂರು ದಸರಾ ಸಂದರ್ಭ ತಮ್ಮದೇ ಆದ ಗತ್ತು ಗೈರತ್ತು, ಗಾಂಭೀರ್ಯದ ನಡಿಗೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದವು. ಹೀಗಾಗಿ ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ಮಾವುತ, ಕಾವಾಡಿಗಳು ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದವು.
ದ್ರೋಣ ಜಂಬೂ ಸವಾರಿಯಲ್ಲಿ 18 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದರೆ, ರಾಜೇಂದ್ರ ಮೂರು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿತ್ತು. ವಯಸ್ಸಾಗಿದ್ದ ರಾಜೇಂದ್ರನಿಗೆ ಹೆಚ್ಚು ಬಾರಿ ಅಂಬಾರಿ ಹೊರುವ ಅವಕಾಶ ದೊರೆತಿಲ್ಲವಾದರೂ ಜಂಬೂಸವಾರಿಯಲ್ಲಿ ಇತರೆ ಆನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಿತ್ತು. ವಯಸ್ಸಾದ ಕಾರಣ ರಾಜೇಂದ್ರ ಆನೆ ಸಾವನ್ನಪ್ಪಿತ್ತು.
ದ್ರೋಣ ದೃಢಕಾಯದ ಆನೆಯಾಗಿದ್ದರೂ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿತ್ತು. ಅದರ ಸಾವು ಎಲ್ಲರಿಗೂ ನೋವು ತರಿಸಿತ್ತು. ಅದರಲ್ಲಿಯೂ ಶಿಬಿರದಲ್ಲಿ ದ್ರೋಣ ಆನೆಯೊಂದಿಗೆ ಒಡನಾಟದಲ್ಲಿದ್ದ ಮಾವುತ ಕಾವಾಡಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಆ ದುಃಖ ಮರೆಯಲು ಬಹಳಷ್ಟು ದಿನಗಳೇ ಬೇಕಾಯಿತು.
ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು
ಎಲ್ಲರ ಕಣ್ಮಿಣಿಯಾಗಿದ್ದ ಈ ಎರಡು ಸಾಕಾನೆಗಳು ಸದಾ ತಮ್ಮ ನೆನಪಿನಲ್ಲಿರಬೇಕು ಎಂದು ನಿರ್ಧರಿಸಿದ ಅಂದಿನ ಅರಣ್ಯಾಧಿಕಾರಿಗಳು ಇವರಿಬ್ಬರಿಗೂ ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಬಳ್ಳೆ ಆನೆ ಶಿಬಿರದಲ್ಲಿರುವ ಸಮಾಧಿ ನಿರ್ಮಿಸುವ ಮೂಲಕ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದರು. ಇಂದಿಗೂ ಈ ಸಮಾಧಿಗಳು ಬಳ್ಳೆ ಆನೆಶಿಬಿರದಲ್ಲಿದ್ದು ಎಲ್ಲರ ಗಮನಸೆಳೆಯುತ್ತಿದೆ.

ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ನಿರ್ಮಾಣವಾದ ಈ ಸಮಾಧಿಗಳನ್ನು ಇಂದಿಗೂ ಇಲ್ಲಿನ ಮಾವುತ ಕಾವಾಡಿಗಳು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅತ್ತ ಕಡೆ ಹೋದಾಗಲೆಲ್ಲ ಅದಕ್ಕೊಂದು ನಮನ ಸಲ್ಲಿಸಿ ಬರುತ್ತಾರೆ. ಅಷ್ಟೇ ಅಲ್ಲ ಶಿಬಿರದಲ್ಲಿರುವ ಆನೆಗಳಿಂದ ಆಗಾಗ್ಗೆ ಸಲಾಮ್ ಹೊಡೆಸುತ್ತಾರೆ.
ಅರಣ್ಯದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಾಸ್ತಮ್ಮ ಪೂಜಾ ಮಹೋತ್ಸವದ ಸಂದರ್ಭ ದ್ರೋಣ ಮತ್ತು ರಾಜೇಂದ್ರರ ಸಮಾಧಿಗೂ ಪೂಜಾ ಕಾರ್ಯ ನಡೆಯುತ್ತದೆ. ಅವತ್ತು ಅರಣ್ಯಾಧಿಕಾರಿಗಳ ಅನುಮತಿಯೊಂದಿಗೆ ಸಮಾಧಿಯನ್ನು ಸ್ವಚ್ಛಗೊಳಿಸುವ ಮಾವುತ ಮತ್ತು ಕಾವಾಡಿಗಳು ಬಳಿಕ ಪೂಜೆ ಸಲ್ಲಿಸಿ ನಮಿಸುತ್ತಾರೆ.
ಸಾಮಾನ್ಯವಾಗಿ ಕೇರಳದಿಂದ ಮೈಸೂರಿಗೆ, ಮೈಸೂರಿನಿಂದ ಕೇರಳಕ್ಕೆ ತೆರಳುವ ಪ್ರವಾಸಿಗರು ಬಳ್ಳೆ ಶಿಬಿರಕ್ಕೆ ಆಗಮಿಸಿ ಇಲ್ಲಿರುವ ಆನೆಗಳನ್ನು ನೋಡಿಕೊಂಡು ಹೋಗುತ್ತಾರೆ. ಆದರೆ ಹೆಚ್ಚಿನವರಿಗೆ ದ್ರೋಣ ಮತ್ತು ರಾಜೇಂದ್ರ ಕಾಡಿನಲ್ಲಿ ನೆನಪಾಗಿ ಉಳಿದಿರುವುದು ಗೊತ್ತೇ ಆಗುವುದಿಲ್ಲ.












Click it and Unblock the Notifications