ಮೈಸೂರು: ತಿ.ನರಸೀಪುರ ಸಹಕಾರಿ ಬ್ಯಾಂಕಿನ ಎರಡು ಸ್ಥಾನಗಳ ಫಲಿತಾಂಶಕ್ಕೆ ತಡೆ ಯಾಕೆ?
ಮೈಸೂರು, ಫೆಬ್ರವರಿ 03: ಈಗೀಗ ಎಲ್ಲಾ ಚುನಾವಣೆಗಳೂ ಒಂದೇ ಎಂಬಂತಾಗಿದೆ. ಅವಿರೋಧವಾಗಿ ನಡೆಯಬೇಕಿದ್ದ ಚುನಾವಣೆಗಳು ಕೂಡ ಜಿದ್ದಾಜಿದ್ದಿಗೆ ದಾರಿ ಮಾಡಿಕೊಡುತ್ತಿದೆ. ಅದರಂತೆ ಸಹಕಾರಿ ಕೃಷಿ ಪತ್ತಿನ ಚುನಾವಣೆಗಳು ಕೂಡ ದೊಡ್ಡ ದೊಡ್ಡ ಚುನಾವಣೆಗಳಂತೆ ನಡೆಯುತ್ತಿವೆ. ಅಷ್ಟೇ ಅಲ್ಲದೇ ಪ್ರತಿಷ್ಠೆಗೂ ಕಾರಣವಾಗುತ್ತಿವೆ. ಇದೀಗ ತಿ.ನರಸೀಪುರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಸಲಾಗಿದ್ದು ಏಳು ಸ್ಥಾನಗಳ ಪೈಕಿ ಎರಡು ಸ್ಥಾನಗಳ ಚುನಾವಣೆಯ ಫಲಿತಾಂಶವನ್ನು ಇದೀಗ ತಡೆಹಿಡಿಯಲಾಗಿದೆ.
ತಿ.ನರಸೀಪುರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನಿರ್ದೇಶಕರ ಆಯ್ಕೆಗೆ ಏಳು ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ 5 ಮಂದಿ ನಿರ್ದೇಶಕರು ಜಯಗಳಿಸಿದರೆ ಎರಡು ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ತಡೆಹಿಡಿಯಲಾಯಿತು. 14 ಸದಸ್ಯರ ನಾಮಬಲ ಹೊಂದಿರುವ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ 7 ಕ್ಷೇತ್ರಗಳಿಗೆ ತಿ.ನರಸೀಪುರದ ಬಿಇಓ ಕಚೇರಿ ಹಿಂಭಾಗದಲ್ಲಿರುವ ಬಾಲಕಿಯರ ಪ್ರೌಢಶಾಲೆಯಲ್ಲಿ ಚುನಾವಣೆ ನಡೆದಿತ್ತು.

ಸಾಲಗಾರರ ಕ್ಷೇತ್ರದಿಂದ 6 ನಿರ್ದೇಶಕರು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ನಿರ್ದೇಶಕರ ಸ್ಥಾನದ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಬೆಳಿಗ್ಗೆಯಿಂದಲೇ ಬ್ಯಾಂಕಿನ ರೈತ ಸದಸ್ಯರು ಉತ್ಸಾಹದಿಂದಲೇ ಮತ ಚಲಾಯಿಸಿದರು. ಸಂಜೆ 4 ಗಂಟೆಯ ನಂತರ ಮತ ಎಣಿಕೆ ನಡೆದು 7 ಕ್ಷೇತ್ರಗಳ ಪೈಕಿ 5 ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟಪಡಿಸಲಾಯಿತು. ಆದರೆ ಬನ್ನೂರು ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ವರ್ಗಕ್ಕೆ ಮೀಸಲಾದ ಒಂದು ಸ್ಥಾನ ಹಾಗೂ ಸಾಲಗಾರರಲ್ಲದ ಒಂದು ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ನ್ಯಾಯಾಲಯದ ಆದೇಶದ ಮೇರೆಗೆ ತಡೆ ಹಿಡಿಯಲಾಗಿದೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಸಾಲಗಾರರ ಕ್ಷೇತ್ರದಿಂದ ಆಯ್ಕೆ ಬಯಸಿದ್ದ ಹೆಮ್ಮಿಗೆ ಗ್ರಾಮದ ಸೋಮಣ್ಣ ತಮ್ಮ ಪ್ರತಿ ಸ್ಪರ್ಧಿ ಪ್ರಭುಸ್ವಾಮಿ ರವರ ವಿರುದ್ಧ ಜಯಗಳಿಸಿದರೆ, ಸೋಸಲೆ ಕ್ಷೇತ್ರದಿಂದ ಪರಿಶಿಷ್ಟ ಜಾತಿಗೆ ಮೀಸಲಾದ ಸ್ಥಾನಕ್ಕೆ ಲಿಂಗಪ್ಪಾಜಿ 25 ಮತ ಪಡೆದು ಎರಡನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ, ಪ್ರತಿಸ್ಪರ್ಧಿಗಳಾದ ಪರಶಿವಮೂರ್ತಿ ಹಾಗೂ ಚಿಕ್ಕತಾಯಮ್ಮ ತಲಾ 13 ಮತ ಪಡೆದು ಪರಾಭವಗೊಂಡಿದ್ದಾರೆ.

ತಲಕಾಡು ಹಿಂದುಳಿದ ಪ್ರವರ್ಗ ಎ ವರ್ಗಕ್ಕೆ ಮೀಸಲಾದ ಕ್ಷೇತ್ರದಿಂದ ವಿದ್ಯೋದಯ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ಎಸ್.ಎಂ.ಶಿವನಂಜಪ್ಪರವರ ಪುತ್ರ ಎಸ್.ಮಹೇಶ್22 ಮತ ಪಡೆದು ಜಯಗಳಿಸಿದರೆ, 10 ಮತ ಪಡೆದ ರುದ್ರಸ್ವಾಮಿ ಸೋಲನುಭವಿಸಿದರು. ಕೊತ್ತೇಗಾಲ ಕ್ಷೇತ್ರದಿಂದ ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಮಾಡ್ರಹಳ್ಳಿ ಎಂ.ಎಸ್.ಶಿವಮೂರ್ತಿ 48 ಮತ ಪಡೆದು ಜಯಗಳಿಸಿದರೆ, ಎದುರಾಳಿ ಸ್ಪರ್ಧಿ ಮಂಜುನಾಥ್ ಕೇವಲ 2 ಮತ ಪಡೆದು ಹೀನಾಯವಾಗಿ ಸೋಲನುಭವಿಸಿದರು.
ಏಳು ಸ್ಥಾನಗಳಿಗೆ ಅವಿರೋಧ ಆಯ್ಕೆ
ಯಾಚೇನಹಳ್ಳಿ ಕ್ಷೇತ್ರದಿಂದ ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಕ್ಲೆ ತುರುಗನೂರು ಟಿ.ಎಸ್.ಪ್ರಸನ್ನ 38 ಮತ ಪಡೆದು 21 ಮತ ಪಡೆದ ಟಿ.ಎಸ್.ಸಿದ್ದರಾಜು ರವರಿಗೆ ಸೋಲುಣಿಸಿದರು. ಉಳಿದ 7 ಸಾಲಗಾರರ ಕ್ಷೇತ್ರಗಳ ಪೈಕಿ ಕುಪ್ಯ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಕೆಂಪಯ್ಯನಹುಂಡಿ ಮಹದೇವಣ್ಣ, ಸೋಮನಾಥಪುರ ಕ್ಷೇತ್ರದಿಂದ ವಡ್ಗಲ್ಲೇಗೌಡ ಉರೂಫ್ ವಜ್ರೇಗೌಡ, ಅತ್ತಹಳ್ಳಿ ಕ್ಷೇತ್ರದಿಂದ ಎ.ಎಂ.ಮಹದೇವ, ಚಿದರವಳ್ಳಿ ಕ್ಷೇತ್ರದಿಂದ ಎನ್.ಎನ್.ಮಹದೇವಸ್ವಾಮಿ, ಮೂಗೂರು ಕ್ಷೇತ್ರದಿಂದ ರಾಜಮಣಿ, ಕಸಬಾ ಕ್ಷೇತ್ರದಿಂದ ಎಂ.ನಾಗರತ್ನ ಹಾಗೂ ದೊಡ್ಡೇಬಾಗಿಲು ಕ್ಷೇತ್ರದಿಂದ ಎಂ.ಮಲ್ಲಿಕಾರ್ಜುನ ಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಚುನಾವಣಾಧಿಕಾರಿ ಎಚ್.ಎಸ್.ಮನೋಜ್ ಕುಮಾರ್, ಸಹಾಯಕ ಚುನಾವಣಾಧಿಕಾರಿ ವಿಮಲ್ ಕುಮಾರ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications