ರೆಡ್ ನಿಂದ ಆರೆಂಜ್ ಝೋನ್ ಆಗುವತ್ತ ಮೈಸೂರು ಜಿಲ್ಲೆ
ಮೈಸೂರು, ಮೇ 09: ಒಂದು ತಿಂಗಳ ಹಿಂದೆ ಬೆಂಗಳೂರನ್ನೂ ಮೀರಿಸುವಂತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ದಾಖಲಿಸುತ್ತಿದ್ದ ಮೈಸೂರು ಜಿಲ್ಲೆ ಇದೀಗ ಆರೆಂಜ್ ಝೋನ್ ಆಗುವತ್ತ ದಾಪುಗಾಲು ಇಡುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಶನಿವಾರ ಬೆಳಿಗ್ಗೆಯವರೆಗೆ ಜಿಲ್ಲೆಯಲ್ಲಿ ಕೇವಲ ಐದು ಸಕ್ರಿಯ ಪ್ರಕರಣಗಳು ಇವೆ. ಒಟ್ಟು ದಾಖಲಾಗಿದ್ದ 90 ಪ್ರಕರಣಗಳಲ್ಲಿ ಈಗಾಗಲೇ 85 ಮಂದಿ ಗುಣಮುಖರಾಗಿ ಹೊರ ಹೋಗಿದ್ದಾರೆ. ಶುಕ್ರವಾರ ಕೂಡ ಇಬ್ಬರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನು ಬೆರಳೆಣಿಕೆಯಷ್ಟು ದಿನಗಳಲ್ಲಿ ಜಿಲ್ಲೆ ಕೊರೊನಾ ಮುಕ್ತ ಆಗಲಿದೆ ಎಂದು ಜಿಲ್ಲಾಡಳಿತ ನಿರೀಕ್ಷಿಸುತ್ತಿದೆ. ಇದರಿಂದ ಜನತೆಯೂ ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ.
ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆಯ ಒಬ್ಬ ನೌಕರನಿಂದಾಗಿ 1500ಕ್ಕೂ ಅಧಿಕ ನೌಕರರನ್ನು ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಜತೆಗೆ ಸೋಂಕಿನ ಸಂಖ್ಯೆ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 4907 ಜನರನ್ನು ಶಂಕಿತರೆಂದು ಪರಿಗಣಿಸಿ ಹೋಂ ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಅದರಲ್ಲಿ 4756 ಜನರು ಹೋಮ್ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. ಈತನಕ ಒಂದು ಸಾವೂ ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ.

ಯಾವುದೇ ಹೊಸ ಪ್ರಕರಣಗಳು ಕಂಡುಬಾರದೆ ಇರುವುದು ಜನರಲ್ಲಿದ್ದ ಆತಂಕವನ್ನು ದೂರ ಮಾಡಿದೆ. ಜಿಲ್ಲೆಯಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಯಾವುದೇ ಹೊಸ ಪ್ರಕರಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಆರೆಂಜ್ ಝೋನ್ ಆಗಿ ಪರಿವರ್ತಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಜಿಲ್ಲಾಡಳಿತ ಚಿಂತಿಸಿದೆ.












Click it and Unblock the Notifications