ಮೋದಿ- ಸಿದ್ದು ಮುನಿಸಿಗೆ ವೇದಿಕೆಯಾಯಿತು ಮೈಸೂರು ರೈಲು ನಿಲ್ದಾಣ!
ಮೈಸೂರು, ಫೆಬ್ರವರಿ 19 : ಪ್ರಧಾನಮಂತ್ರಿ ನರೇಂದ್ರ ಮೋದಿ -ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯೆ ರಾಜಕಾರಣಕ್ಕೆ ಸಂಬಂಧಿಸಿದಂತೆ ಮುನಿಸು ಇದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಮುನಿಸಿನ ಮುಂದುವರಿಕೆಯಂತೆ ಸಾಕ್ಷಿಯಾಗಿ ಕಂಡಿದ್ದು ಮಾತ್ರ ಸೋಮವಾರ ನಡೆದ ಹಮ್ ಸಫರ್ ರೈಲಿನ ಉದ್ಘಾಟನೆ ಕಾಯಕ್ರಮ.
ಇಬ್ಬರೂ ಒಂದೇ ವೇದಿಕೆ ಮೇಲೆ ಕುಳಿತಿದ್ದರೂ ಉಭಯ ನಾಯಕರ ಮುಖದಲ್ಲಿ ಸಣ್ಣ ನಗು ಕೂಡ ಇರಲಿಲ್ಲ. ಅಷ್ಟೇ ಯಾಕೆ, ಸಣ್ಣ ಮಾತುಕತೆಯೂ ನಡೆಯಲಿಲ್ಲ. ಭಾನುವಾರ ರಾತ್ರಿ ಮಾತ್ರ ಕುಶಲೋಪರಿ ವಿಚಾರಿಸಿದ್ದರಷ್ಟೇ. ಇಬ್ಬರೂ ಪರಸ್ಪರ ಕೆಂಡ ಕಾರುತ್ತಿದ್ದ ಲಕ್ಷಣಗಳು ಮುಖದಲ್ಲಿ ಎದ್ದು ಕಾಣುತ್ತಿದ್ದವು. ಪರಸ್ಪರ ಮುಖ ನೋಡಲು ಇಷ್ಟವಿಲ್ಲದ ರೀತಿ ಉಭಯ ನಾಯಕರು ಕುಳಿತಿದ್ದರು.
ಕಮಿಷನ್ ಸರಕಾರ ಬೇಕಾ, ಮಿಷನ್ ಸರಕಾರ ಬೇಕಾ? : ಮೈಸೂರಿನಲ್ಲಿ ಮೋದಿ
ಬೆಂಗಳೂರಿನ ಪರಿವರ್ತನಾ ಸಮಾವೇಶದ ಭಾಷಣದಲ್ಲಿ ಉಲ್ಲೇಖಿಸಿದ್ದ ಪ್ರಧಾನಮಂತ್ರಿ ಮೋದಿ, ಕರ್ನಾಟಕದಲ್ಲಿರುವುದು 10 ಪರ್ಸೆಂಟ್ ಕಮಿಷನ್ ಸರಕಾರ, ಕೊಲೆಗಡುಕ ಸರಕಾರ ಎಂದು ಪುಂಖಾನುಪುಂಖವಾಗಿ ಆರೋಪಿಸಿದ್ದರು. ಇಂದು ಅದೇ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದರು.
In Pics: ಮೈಸೂರಿಗೆ ಆಗಮಿಸಿದ ನರೇಂದ್ರ ಮೋದಿ
ಆ ವೇಳೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ನರೇಂದ್ರ ಮೋದಿಯವರಿಗೆ ಪ್ರಧಾನಿ ಹುದ್ದೆಯಲ್ಲಿರುವ ಅರ್ಹತೆ ಇಲ್ಲ ಎಂದು ಕಿಡಿ ಕಾರಿದ್ದರು. ಇದೇ ಹಿನ್ನೆಲೆಯಲ್ಲಿ ಉಭಯ ನಾಯಕರ ವೈಮನಸ್ಯ ಎದ್ದು ಕಂಡಿತು.