ಮೈಸೂರಿನಲ್ಲಿ ಬೈಕ್, ಸರ ಕದ್ದವರು ಪೊಲೀಸರ ಸೆರೆಗೆ
ಮೈಸೂರು, ಜೂನ್ 11 : ಕಳೆದ ತಿಂಗಳು ಮೇ 8ರಂದು ಸರಗಳ್ಳತನ ಮಾಡಿದ್ದ ಇರಾನಿ ಗ್ಯಾಂಗ್ ನ ಇಬ್ಬರನ್ನು ಮೈಸೂರಿನ ನಜರ್ ಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 56 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನ ಸೆಲ್ವಾಪುರಂ ಹಿಮಾನ್ಯುಯಲ್ ನಗರದ ನಿವಾಸಿಗಳಾದ ಮುಸ್ತಫಾ ಅಲಿಯಾಸ್ ಶಾಲು (19), ಅಬೂ ತಾಲೀಫ್ (20) ಬಂಧಿತ ಸರಗಳ್ಳರು. ಖಾಸಗಿ ಹೋಟೆಲ್ ಹಿಂಭಾಗದ ರಸ್ತೆಯಲ್ಲಿ, ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್ ಕದಿಯಲು ಮುಂದಾಗಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿ ಇವರನ್ನು ನಗರದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ, ಮೇ ತಿಂಗಳಲ್ಲಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ಸಮೀಪದ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿ, ವಿದ್ಯಾರಣ್ಯಪುರಂ ಮತ್ತು ನಜರ್ ಬಾದ್ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್ ಪತ್ತೆಯಾಗಬೇಕಿದೆ.

ಜಂಬೂಸವಾರಿ ದಿನ ಕಳ್ಳತನ ಮಾಡಿದವ ಸಿಕ್ಕಿಬಿದ್ದ: ಕಳೆದ ಜಂಬೂಸವಾರಿ ದಿನ ಇಲ್ಲಿನ ಮಂಡಿ ಮೊಹಲ್ಲಾದ ಉಮರ್ ಖಯ್ಯಾಂ ರಸ್ತೆಯ ಲೋಕೇಶ್ ಎಂಬುವವರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಹಾಸನದ ಗಂಡಸಿ ಗ್ರಾಮದ ಗೌರಿಶಂಕರ್ (38) ಎಂಬ ಆರೋಪಿಯನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಶೋಕ ರಸ್ತೆಯ ಗಿರವಿ ಅಂಗಡಿಯೊಂದರ ಮುಂದೆ 2 ಚಿನ್ನದ ಬಳೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನಿಂದ 2.82 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications