ಮೈಸೂರು ಪೌರಕಾರ್ಮಿಕರ ಮುಷ್ಕರ ಅಂತ್ಯ:ಸಿಎಂ ಸಂಧಾನ ಯಶಸ್ವಿ
ಮೈಸೂರು, ಅಕ್ಡೋಬರ್ 9: ಕಳೆದ ಏಳು ದಿನಗಳಿಂದ ಸ್ವಚ್ಛತಾ ಕಾರ್ಯದಿಂದ ಪೌರಕಾರ್ಮಿಕರು ದೂರ ಉಳಿದ ಪರಿಣಾಮ ಕಸದ ಕೊಂಪೆಯಾಗಿದ್ದ ಮೈಸೂರಿಗೆ ದಸರಾ ಮುನ್ನಾ ದಿನ ಸಿಹಿ ಸುದ್ದಿ ದೊರೆತಿದೆ.
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಪೌರಕಾರ್ಮಿಕರು ಹಾಗೂ ಸರ್ಕಾರದ ನಡುವಿನ ಸಭೆ ಯಶಸ್ವಿಯಾಗಿದ್ದು, ಬುಧವಾರ ಬೆಳಗ್ಗೆಯಿಂದಲೇ ಸ್ವಚ್ಛತಾ ಕಾರ್ಯ ಆರಂಭಿಸುವುದಾಗಿ ಪೌರಕಾರ್ಮಿಕರ ಸಂಘಟನೆ ಘೋಷಿಸಿದೆ.
ಸುದೀರ್ಘ ಎರಡು ತಾಸುಗಳ ಸಭೆ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಈ ವಿಷಯ ತಿಳಿಸಿದರು. ಕಳೆದ ಏಳು ದಿನಗಳಲ್ಲಿ ಮುಷ್ಕರ ನಡೆಸಿದ್ದ ಪೌರಕಾರ್ಮಿಕರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವುದಾಗಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಪೌರಕಾರ್ಮಿಕರು ಕೈಗೊಳ್ಳಲಿದ್ದಾರೆ.

ನಾಡಹಬ್ಬ ದಸರಾ ಅಂಗವಾಗಿ ಮೈಸೂರು ನಗರವನ್ನು ಅಚ್ಚುಕಟ್ಟಾಗಿಡುವ ನಿಟ್ಟಿನಲ್ಲಿ ಅಕ್ಟೋಬರ್ 10ರಿಂದಲೇ ಕರ್ತವ್ಯಕ್ಕೆ ಹಾಜರಾಗುವುದಾಗಿ ಪೌರಕಾರ್ಮಿಕರು ಹೇಳಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೌರಕಾರ್ಮಿಕ ಸಂಘಟನೆ ಅಧ್ಯಕ್ಷ ನಾರಾಯಣ್ ಅವರು,ಮುಖ್ಯಮಂತ್ರಿಗಳು ನಮ್ಮ ಭರವಸೆಗೆ ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಕೆಲಸಕ್ಕೆ ಹಾಜರಾಗುತ್ತೇವೆ ಎಂದು ಪ್ರಕಟಿಸಿದರು.
ನಾವು ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದೆವು, ಆ ಮೂರು ಬೇಡಿಕೆಯನ್ನು ಮುಂಬರುವ ಸಚಿವ ಸಂಪುಟದಲ್ಲಿ ಈಡೇರಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಆಚರಣೆ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಮೂರು ಬೇಡಿಕೆಗಳೇನು?: ಪ್ರತಿ 500 ಜನರಿಗೆ ಒಬ್ಬ ಪೌರಕಾರ್ಮಿಕನಂತೆ ಪೌರಕಾರ್ಮಿಕರ ನೇಮಕಾತಿ ನಡೆಸಬೇಕು. ಹಾಲಿ ಇರುವ 700 ಮಂದಿಗೆ ಒಬ್ಬ ಪೌರಕಾರ್ಮಿಕ ಎಂಬ ನೀತಿಯನ್ನು ಕೈಬಿಡಬೇಕು ಎಂಬ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.












Click it and Unblock the Notifications