ಮಣ್ಣಿನ ಮಡಿಕೆಯತ್ತ ಮುಖ ಮಾಡಿದ ಜನರು: ಮೈಸೂರಿಗೆ ಇಷ್ಟೊಂದು ಮಡಿಕೆ ಎಲ್ಲಿಂದ ಬರುತ್ತದೆ..?
ಮೈಸೂರು, ಮಾರ್ಚ್ 22: ಬಿಸಿಲ ಧಗೆಯಿಂದ ಉಂಟಾಗುತ್ತಿರುವ ದಾಹವನ್ನು ತಣಿಸಲು ನೀರನ್ನು ಮಣ್ಣಿನ ಮಡಿಕೆಯಲ್ಲಿಟ್ಟು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರವಾಗಿರುವ ಕಾರಣದಿಂದಾಗಿ ಹೆಚ್ಚಿನ ಜನರು ಮಣ್ಣಿನ ಮಡಿಕೆ ಹಾಗೂ ಮಣ್ಣಿನ ಫಿಲ್ಟರ್ ನತ್ತ ಮುಖ ಮಾಡಿರುವ ಕಾರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲೆಂದರಲ್ಲಿ ಮಣ್ಣಿನ ಮಡಿಕೆ ಮತ್ತು ಫಿಲ್ಟರ್ ಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ.
ಬೇಸಿಗೆ ಆರಂಭವಾದ ಬಳಿಕ ಅದರಲ್ಲೂ ನಗರದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಹೀಗಾಗಿ ಎಷ್ಟು ನೀರು ಕುಡಿದರೂ ದಾಹ ತಣಿಯುತ್ತಿಲ್ಲ. ಅದರಲ್ಲೂ ಫ್ರಿಡ್ಜ್ ನಲ್ಲಿಟ್ಟು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ ಹೀಗಾಗಿ ಹೆಚ್ಚಿನ ಜನ ಮಣ್ಣಿನ ಮಡಿಕೆಯತ್ತ ಮೊರೆ ಹೋಗಿರುವ ಕಾರಣ ಇದ್ದಕ್ಕಿದ್ದಂತೆ ಬೇಡಿಕೆ ಮತ್ತು ಬೆಲೆ ಹೆಚ್ಚಾಗಿರುವುದು ಕಂಡು ಬಂದಿದೆ. ಯಾವಾಗ ಬೇಡಿಕೆ ಹೆಚ್ಚಾಗಿ ಮಾರಾಟವೂ ಹೆಚ್ಚುತ್ತಿರುವ ಕಾರಣದಿಂದ ದೂರದ ಗುಜರಾತಿನಿಂದ ಮಡಿಕೆ ಮತ್ತು ಫಿಲ್ಟರ್ಗಳನ್ನು ತರಿಸಿಕೊಂಡು ವ್ಯಾಪಾರ ವಹಿವಾಟನ್ನು ಚುರುಕುಗೊಳಿಸಲಾಗುತ್ತಿದೆ.

ಗುಜರಾತಿನಿಂದ ಬರುವ ಮಣ್ಣಿನ ಮಡಿಕೆಗಳು ನೋಡಲು ಆಕರ್ಷಕವಾಗಿರುವ ಕಾರಣ ಜನರು ಅದನ್ನೇ ಕೇಳುತ್ತಾರೆ. ಹೀಗಾಗಿ ಹೊರಗಿನಿಂದ ತಂದು ಇಲ್ಲಿ ಮಾರಾಟ ಮಾಡುವುದು ಕಂಡು ಬಂದಿದೆ. ಸ್ಥಳೀಯವಾಗಿ ಮೈಸೂರು ಜಿಲ್ಲೆಯಲ್ಲಿ ಮಡಿಕೆ ತಯಾರಿಸಿ ತಂದು ಮಾರಾಟ ಮಾಡುತ್ತಿದ್ದರೂ ಅವು ಶುಭ ಅಶುಭ ಕಾರ್ಯಗಳಿಗಷ್ಟೆ ಸೀಮಿತವಾಗಿ, ಮಾರುಕಟ್ಟೆ ಪ್ರದೇಶಗಳಲ್ಲಿ ಮಾತ್ರ ಮಾರಾಟವಾಗುತ್ತಿವೆ. ಆದರೆ ಆಕರ್ಷಕ ಮಡಿಕೆಗಳು ನಗರದ ಹಲವು ಕಡೆಗಳ ರಸ್ತೆ ಬದಿ, ಬೀದಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಫ್ಯಾಷನ್ ಪ್ರಿಯರ ಸೆಳೆಯುವ ಮಡಿಕೆಗಳು
ಇನ್ನು ಈ ಮಣ್ಣಿನ ಮಡಿಕೆಗಳು ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿರುವುದರಿಂದ ತಮ್ಮ ಮನೆಯ ಅಲಂಕಾರವನ್ನು ಹೆಚ್ಚಿಸುವುದರೊಂದಿಗೆ ಉಪಯೋಗಕ್ಕೂ ಬರುತ್ತಿವೆ. ಈ ಮಡಿಕೆ ಹಾಗೂ ಫಿಲ್ಟರ್ಗಳು ಬಣ್ಣ, ವಿನ್ಯಾಸ ಮತ್ತು ಕಲಾತ್ಮಕ ಚಿತ್ರಗಳಿಂದ ಕೂಡಿ ವಿಭಿನ್ನವಾಗಿವೆ. ಸುರಕ್ಷತೆಗಾಗಿ ಸ್ಟಾಂಡ್ನ್ನು ಕೂಡ ಅಳವಡಿಸಲಾಗಿದೆ. 10ಲೀ, 20 ಲೀಟರ್ ನೀರು ತುಂಬುವ ಸಾಮರ್ಥ್ಯ ಹೊಂದಿವೆ.
ಸಾಮಾನ್ಯವಾಗಿ ಮಣ್ಣಿನ ಮಡಿಕೆಯನ್ನು ಹಿಂದಿನಿಂದಲೂ ಬಳಕೆ ಮಾಡುತ್ತಾ ಬರಲಾಗಿದ್ದು, ಇದರಲ್ಲಿ ನೀರನ್ನು ಹಾಕಿಟ್ಟರೆ ತಣ್ಣಗಿರುತ್ತದೆ. ಇದರಿಂದ ಬಿಸಿಲಿನ ಸಂದರ್ಭ ದಾಹವಾದರೆ ಈ ನೀರನ್ನು ಕುಡಿದರೆ ನೆಮ್ಮದಿಯಾಗುತ್ತದೆ. ಇನ್ನು ಮಣ್ಣಿನ ಮಡಿಕೆಯಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ಸದ್ಯ ನಗರದ ಕುಕ್ಕರಹಳ್ಳಿ ಕೆರೆಯ ಸಿಗ್ನಲ್ ಬಳಿ, ಬೆಂಗಳೂರು ರಸ್ತೆ, ಹುಣಸೂರು ರಸ್ತೆ ಸೇರಿದಂತೆ ನಗರದ ಅನೇಕ ಕಡೆ ಮಡಿಕೆ ಮಾರಾಟ ನಡೆಯುತ್ತಿದ್ದು, ಇಲ್ಲಿ ಮಾರಾಟ ಮಾಡುವವರು ವರ್ಷಪೂರ್ತಿ ವಾಸ್ತವ್ಯ ಹೂಡಿ ವ್ಯಾಪಾರ ನಡೆಸುತ್ತಾರೆ. ವರ್ಷದ ಎಲ್ಲ ಸಮಯಗಳಲ್ಲಿ ಮಾರಾಟಕ್ಕಿಟ್ಟರೂ ಬೇಸಿಗೆಯಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ.
ಗುಜರಾತಿನಿಂದ ಬರುವ ಮಡಿಕೆಗಳು
ಈಗಾಗಲೇ ಗುಜರಾತ್ನಿಂದ ಎರಡು ಲೋಡ್ ಮಡಿಕೆಗಳು ಬಂದಿದ್ದು ಒಂದು ಲೋಡ್ನಲ್ಲಿ ಸಾವಿರ ಮಡಕೆಗಳು ಇರಲಿವೆ. ಆದರೆ ದೂರದ ಗುಜರಾತಿನಿಂದ ಮೈಸೂರಿಗೆ ತರುವ ವೇಳೆ ಕೆಲವು ಮಡಿಕೆಗಳು ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಜೊತೆಗೆ ಸಾಗಾಣಿಕೆ ವೆಚ್ಚವೂ ಹೆಚ್ಚಾಗುವುದರಿಂದ ಅನಿವಾರ್ಯವಾಗಿ ಮಡಿಕೆಗಳ ಬೆಲೆಯನ್ನು ಹೆಚ್ಚಳ ಮಾಡಬೇಕಾಗುತ್ತದೆ. ಕೆಲವೊಮ್ಮೆ ಮಡಿಕೆ ಬೆಲೆ ಕೇಳಿ ಹೆಚ್ಚಾಯಿತೆಂದು ಹೋಗುವವರು ಇಲ್ಲದಿಲ್ಲ ಎಂಬ ಅಳಲನ್ನು ಮಾರಾಟಗಾರರು ತೋಡಿಕೊಳ್ಳುತ್ತಾರೆ.
ಅದು ಏನೇ ಇರಲಿ ಒಟ್ಟಾರೆ ಹೇಳಬೇಕೆಂದರೆ ಬೇಸಿಗೆಯಲ್ಲಿ ಮಣ್ಣಿನ ಮಡಿಕೆಗಳ ಉಪಯೋಗವನ್ನು ಅರಿತವರು ಇದರ ಬೆಲೆ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಮನೆಗೆ ಕೊಂಡೊಯ್ಯುತ್ತಿರುವುದು ಎದ್ದು ಕಾಣಿಸುತ್ತಿದೆ. ಮಡಿಕೆಯಲ್ಲಿ ನೀರು ಸಂಗ್ರಹಿಸಿಟ್ಟು ಕುಡಿಯುವುದರಿಂದ ಶೀತ ಕೆಮ್ಮು ಬರುವುದಿಲ್ಲ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಆಗಿರುವುದರಿಂದ ಹೆಚ್ಚಿನವರು ಮಣ್ಣಿನ ಮಡಿಕೆಗಳತ್ತ ಒಲವು ತೋರುತ್ತಿದ್ದಾರೆ. ಇದು ಕುಂಬಾರಿಕೆಯನ್ನು ನಂಬಿ ಬದುಕುವವರಲ್ಲಿ ಆಶಾಭಾವನೆ ಮೂಡಿಸಿದೆ.












Click it and Unblock the Notifications