ಮೈಸೂರು ಬಿಜೆಪಿ ಮುಖಂಡನ ಹತ್ಯೆ; ಆರೋಪಿ ಬಂಧನ
ಮೈಸೂರು, ಮಾರ್ಚ್ 06: ನಿನ್ನೆ ರಾತ್ರಿ ಬರ್ಬರವಾಗಿ ಹತ್ಯೆಗೀಡಾಗಿದ್ದ ಬಿಜೆಪಿ ಮುಖಂಡ ಆನಂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಮೈಸೂರಿನ ಜನತಾನಗರದ ನಿವಾಸಿ ಬಸವರಾಜು ಬಂಧಿತ ಆರೋಪಿಯಾಗಿದ್ದು, ಈತನು ವೈಯಕ್ತಿಕ ದ್ವೇಷದಿಂದ ಆನಂದ್ ನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮೈಸೂರು; ಬಿಜೆಪಿ ಮುಖಂಡನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು
ಆನಂದ್ ಹಾಗೂ ಬಸವರಾಜ್ ಇಬ್ಬರೂ ಸ್ನೇಹಿತರೇ ಆಗಿದ್ದು ತನ್ನ ಬೆಳವಣಿಗೆಯನ್ನು ಆನಂದ್ ಸಹಿಸುವುದಿಲ್ಲ ಮತ್ತು ಬೆಳೆಯಲು ಬಿಡುತ್ತಿರಲಿಲ್ಲ ಎಂದು ಬಸವರಾಜ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಇದೇ ಕಾರಣಕ್ಕೆ ಬಸವರಾಜ್ ಇತ್ತೀಚಿಗೆ ಆನಂದ್ ಜೊತೆ ಜಗಳವಾಡಿದ್ದ. ಇದಲ್ಲದೇ ಕಳೆದ ನಾಲ್ಕೈದು ದಿನಗಳ ಹಿಂದೆ ಸ್ನೇಹಿತರ ಎದುರು ಬಸವರಾಜು ಮೇಲೆ ಆನಂದ್ ಹಲ್ಲೆ ಮಾಡಿದ್ದ. ಇದೇ ದ್ವೇಷದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಆನಂದ್ ಬರ್ತ್ ಡೇ ಪಾರ್ಟಿಯ ಗುಂಗಿನಲ್ಲಿದ್ದಾಗಲೇ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಬಸವರಾಜ್ ಹೆಣದ ಪಕ್ಕ ಡ್ಯಾನ್ಸ್ ಮಾಡಿದ್ದಾನೆ ಎಂದೂ ತಿಳಿದು ಬಂದಿದೆ.
ಮೈಸೂರಲ್ಲಿ ಪತ್ನಿಯ ಕೊಲೆಗೆ ಯತ್ನಿಸಿದ ಸಿಡಿಪಿಒ ಅಧಿಕಾರಿ
ಬಿಯರ್ ಬಾಟಲಿಯಲ್ಲಿದ್ದ ರಕ್ತವನ್ನು ಕೋಣೆಯಲ್ಲೆಲ್ಲಾ ಚೆಲ್ಲಾಡಿ ವಿಕೃತಿ ಮೆರೆದಿದ್ದಾನೆ. ಕೊಲೆ ನಡೆದಾಗ ಸ್ಥಳದಲ್ಲಿದ್ದ ಸುರೇಶ್, ಗಿರಿ, ಮಂಜು ಎಂಬುವವರು ಪರಾರಿಯಾಗಿದ್ದಾರೆ. ಘಟನೆಗೂ ಮುನ್ನ ಸ್ಥಳದಲ್ಲಿದ್ದ ಪರಮೇಶ್ ಹಾಗೂ ಕೃಷ್ಣ ಎಂಬವರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.