ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಎಸಿಬಿ ಬಲೆಗೆ
ಮೈಸೂರು ನಗರ ಪಾಲಿಕೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಪುಟ್ಟಸ್ವಾಮಿ ಕಾಮಗಾರಿಗಳಿಗೆ ಸಂಬಂಧಿಸಿದ ಮೊತ್ತವನ್ನು ಮಂಜೂರು ಮಾಡಿಸುವುದಕ್ಕೆ 70,000 ಲಂಚದ ಹಣ ನೀಡುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದರು.
ಬೆಂಗಳೂರು, ಡಿಸೆಂಬರ್ 3: ಮೈಸೂರು ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಸಹಾಯಕ ಪುಟ್ಟಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಾಮಗಾರಿಗಳ ಮೊತ್ತ ಬಿಡುಗಡೆಗಾಗಿ 70,000 ರುಪಾಯಿ ಲಂಚದ ಹಣ ಪಡೆಯುತ್ತಿರುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಮೈಸೂರು ನಗರ ಪಾಲಿಕೆ ಕಚೇರಿ ವ್ಯಾಪ್ತಿಯಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಖಾಸಗಿ ಕಾಂಟ್ರ್ಯಾಕ್ಟರ್ ಒಬ್ಬರಿಗೆ ಕಾಮಗಾರಿಯನ್ನು ವಹಿಸಲಾಗಿತ್ತು, ಅದರಂತೆಯೇ ಕಾಮಗಾರಿಗಳನ್ನು ವಹಿಸಿಕೊಂಡ ಕಾಂಟ್ರ್ಯಾಕ್ಟರ್ ನಿಯಮಾನುಸಾರ ಉದ್ಯಾನವನವನ್ನು ಅಭಿವೃದ್ಧಿಪಡಿಸಿದರು. ಆ ನಂತರ ಪೂರ್ಣಗೊಂಡ ಕಾಮಗಾರಿಗಳಿಗೆ ತಗುಲಿದ ವೆಚ್ಚ 10 ಲಕ್ಷ ಮಂಜೂರು ಮಾಡುವಂತೆ ಮೈಸೂರು ನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರು.[ನಮ್ಮ ಸರ್ಕಾರಿ ಕಚೇರಿಗಳಲ್ಲಿ ಚಿಕ್ಕಪುಟ್ಟ ಲಂಚ, ಇಬ್ಬರು ಒಳಗೆ]

ಆದರೆ, ಮೈಸೂರು ನಗರ ಪಾಲಿಕೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಪುಟ್ಟಸ್ವಾಮಿ ಕಾಮಗಾರಿಗಳಿಗೆ ಸಂಬಂಧಿಸಿದ ಮೊತ್ತವನ್ನು ಮಂಜೂರು ಮಾಡಿಸುವುದಕ್ಕೆ 70,000 ಲಂಚದ ಹಣ ನೀಡುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದರು, ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದರು.
ಡಿಸೆಂಬರ್ 1ರಂದು ದೂರುದಾರರು ಮೈಸೂರು ನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದಾಗ ಪುಟ್ಟಸ್ವಾಮಿ 35,000 ಲಂಚದ ಹಣವನ್ನು ಮೈಸೂರು ನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಅವರಿಗೆ ನೀಡುವಂತೆ ದೂರುದಾರರಿಗೆ ಸೂಚಿಸಿದ್ದರು.[ಲಂಚ ಕೇಳಿ ಎಸಿಬಿಗೆ ಸಿಕ್ಕಿ ಬಿದ್ದ ಆರ್ ಐ ಶಾಂತು]
ರಾಘವೇಂದ್ರ ಅವರು ದೂರುದಾರರಿಂದ ಲಂಚದ ಹಣವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ರಾಘವೇಂದ್ರ ಹಾಗೂ ಪುಟ್ಟಸ್ವಾಮಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.











Click it and Unblock the Notifications