ಅಕ್ಷರ ಜಾತ್ರೆಯ ಸ್ವಾಗತಕ್ಕೆ ದಿನಗಣನೆ ಆರಂಭ
ಮೈಸೂರು, ನವೆಂಬರ್ 21 : ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಅಕ್ಷರ ಜಾತ್ರೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಳ್ಳುತ್ತಿದೆ. ನಾಡು - ನುಡಿ, ಕಲೆ - ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಜಗತ್ತಿಗೆ ಪಸರಿಸುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ಸಾಕ್ಷಿಯಾಗಲಿದ್ದು, ನವೆಂಬರ್ 24ರಿಂದ 26ರವರೆಗೆ ಅಕ್ಷರ ಜಾತ್ರೆಗೆ ಮುನ್ನುಡಿ ಹಾಡಲಿದೆ .
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳ ಪಟ್ಟಿ
ರಾಜ್ಯ ಕನ್ನಡ ಸಾಹಿತ್ಯ ಪರಿಷತ್, ಮೈಸೂರು ಸಾಹಿತ್ಯ ಪರಿಷತ್ತಿನ ಜಿಲ್ಲಾ ಶಾಖೆ ಹಾಗೂ ಮೈಸೂರು ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಪಾರಂಪರಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಅತಿ ದೊಡ್ಡ ಹಾಗೂ ವಿಸ್ತಾರದ ಜರ್ಮನ್ ತಂತ್ರಜ್ಞಾನದ ಪೆಂಡಾಲು ಹಾಕಲಾಗುತ್ತಿದೆ. ಮಳೆ - ಬಿಸಿಲಿನಿಂದ ಸಂಪೂರ್ಣ ರಕ್ಷಣೆ ನೀಡುವ ಈ ಶಾಮಿಯಾನವನ್ನು ಸರ್ಕಾರಿ ಸ್ವಾಮ್ಯದ ಎಂಸಿಎ ಅಳವಡಿಸುತ್ತಿದೆ. ನಾಲ್ಕು ಟ್ರಾಲಿ ಉಪಕರಣಗಳನ್ನು ಬಳಸಿ ಕಬ್ಬಿಣ ಹಾಕಿ ಪೆಂಡಾಲು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.
25 ಸಾವಿರ ಮಂದಿ ಕುಳಿತುಕೊಳ್ಳುವಷ್ಟು ವಿಶಾಲ ಜಾಗದಲ್ಲಿ ತಲೆ ಎತ್ತುತ್ತಿರುವ ಪೆಂಡಾಲ್ ಮುಂಭಾಗ ದೊಡ್ಡ ವೇದಿಕೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಸ್ಥಳದಲ್ಲಿ ಕುಡಿಯುವ ನೀರು, ವೈದ್ಯರ ತಂಡ, ಆಂಬುಲೆನ್ಸ್ , ಅಗ್ನಿಶಾಮಕ ದಳ ವಾಹನಗಳನ್ನು ಒದಗಿಸಲು ಅನುವು ಮಾಡಲಾಗಿದೆ.
ಮಹಾರಾಜ ಕಾಲೇಜು ಮೈದಾನದ ಪಕ್ಕದಲ್ಲಿರುವ ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ ಎದುರಿನ ಮೈದಾನದಲ್ಲಿ ಕನ್ನಡ ಸಾಹಿತ್ಯ ಪುಸ್ತಕಗಳ ಪ್ರದರ್ಶನಕ್ಕೂ ದೊಡ್ಡ ಪೆಂಡಾಲನ್ನು ಹಾಕಲಾಗುತ್ತಿದೆ. ಸ್ಥಳದಲ್ಲಿ ಕನ್ನಡ ಭಾಷೆಯ ಸಾಹಿತ್ಯ, ಕಥೆ, ಕಾದಂಬರಿ, ಗ್ರಂಥ, ನಾಟಕಗಳ ಪುಸ್ತಕಗಳನ್ನು ಪ್ರದರ್ಶಿಸಲು 448 ಮಳಿಗೆಗಳನ್ನು ಸಜ್ಜುಗೊಳಿಸಲಾಗುತ್ತದೆ. ಅಲ್ಲದೆ 230 ವಾಣಿಜ್ಯ ಮಳಿಗೆಗಳನ್ನು ಹಾಕಿ ಸಮ್ಮೇಳನಕ್ಕೆ ಆಗಮಿಸುವ ಕನ್ನಡ ಪ್ರೇಮಿಗಳು ಹಾಗೂ ಸಾಹಿತ್ಯಾಸಕ್ತರು ತಿಂಡಿ ತಿನಿಸು ಸವಿಯಲು ವಸ್ಥೆ ಕಲ್ಪಿಸಲಾಗುತ್ತಿದೆ.
ಕಲಾವಿದರುಗಳು ಚಿತ್ರಕಲೆ ಪ್ರದರ್ಶನಕ್ಕೂ ಮಳಿಗೆಗಳನ್ನು ಪೂರೈಸುತ್ತಿದ್ದು , ಸ್ಪೋರ್ಟ್ಸ್ ಪೆವಿಲಿಯನ್ ಅಲ್ಲಿನ ಈಗ ಬಹು ವಿಸ್ತಾರವಾದ 100*300 ಅಡಿ ಅಳತೆಯ ಮೂರು ಭವ್ಯ ಪೆಂಡಾಲನ್ನು ಅಳವಡಿಸುವ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ಪ್ರಧಾನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಗೋಷ್ಠಿಗಳು ನಡೆಯುತ್ತದೆ . ಉಳಿದಂತೆ ಪುರಭವನ ಹಾಗೂ ಕಲಾಮಂದಿರ ಆವರಣದಲ್ಲಿ ನಾಟಕ ಪ್ರದರ್ಶನ ಮತ್ತು ಮಹಾರಾಜ ಕಾಲೇಜು ಶತಮಾನೋತ್ಸವ ಭವನ, ಕಲಾ ಮಂದಿರ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಹಾಗೂ ಚಿಕ್ಕ ಗಡಿಯಾರದ ಬಳಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿವೆ.
ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ದಿನದಂದು ನಡೆಯಲಿರುವ ಭವ್ಯ ಮೆರವಣಿಗೆ ಮಾರ್ಗದಲ್ಲಿ ಎಂಟು ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರ ಕಟೌಟ್ಗಳನ್ನು ಅಳವಡಿಸಲಾಗುವುದು. ಇನ್ನು ಸ್ವಚ್ಛನಗರಿ ಪಟ್ಟ ಗಿಟ್ಟಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಮೈಸೂರು ಮಹಾನಗರ ಪಾಲಿಕೆಯು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಪ್ರಚಾರ ಕೂಡ ಮಾಡಲು ಮುಂದಾಗಿದೆ. ಒಟ್ಟಾರೆ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ಮಧುವಣಗಿತ್ತಿಯಂತೆ ಸಜ್ಜಾಗುತ್ತಿದೆ.