ಮೈಸೂರು ಅತ್ಯಾಚಾರ ಪ್ರಕರಣ: ಏಳನೇ ಆರೋಪಿಯೂ ಬಂಧನ
ಮೈಸೂರು, ಸೆಪ್ಟೆಂಬರ್ 8: ಸಾಂಸ್ಕೃತಿಕ ನಗರಿ ಮೈಸೂರನ್ನೇ ಬೆಚ್ಚಿ ಬೀಳಿಸಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಏಳನೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನಲ್ಲಿ ಏಳನೇ ಆರೋಪಿ ತಲೆಮರೆಸಿಕೊಂಡಿದ್ದ, ತಮಿಳುನಾಡು ಪೊಲೀಸರ ಸಹಾಯದಿಂದ ಮೈಸೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ತಮಿಳುನಾಡಿನಿಂದ ಬುಧವಾರ ಮೈಸೂರಿಗೆ ಕರೆತರಲಾಗುತ್ತದೆ.

ಸಾಮೂಹಿಕ ಅತ್ಯಾಚಾರ ಘಟನೆ ನಂತರದ ನಾಲ್ಕು ದಿನಗಳಲ್ಲಿ ಐವರು ಆರೋಪಿಗಳನ್ನು ವಿಶೇಷ ಪೊಲೀಸ್ ತಂಡ ಬಂಧಿಸಿತ್ತು. ಆರೋಪಿಗಳು ತಾವು ಏಳು ಜನ ಇದ್ದುದ್ದಾಗಿ ಹೇಳಿದ್ದು, ತೀವ್ರ ಶೋಧದ ನಂತರ ಆರನೇ ಆರೋಪಿ ಸಿಕ್ಕಿಬಿದ್ದಿದ್ದ.
ಆದರೆ ಏಳನೇ ಆರೋಪಿ ಪೊಲಿಸರಿಂದ ತಲೆಮರೆಸಿಕೊಂಡಿದ್ದ. ಇದೀಗ ವಿಶೇಷ ಕಾರ್ಯಾಚರಣೆ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕಸ್ಟಡಿಯಲ್ಲಿದ್ದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಬಾಲಾಪರಾಧಿಯಾಗಿದ್ದು, ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಮೈಸೂರಿನಲ್ಲಿ ನಡೆದ ಎಂಬಿಎ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಬಂಧಿತ ಆರೋಪಿಗಳಿಂದ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಕಳೆದ ವಾರ ಆರೋಪಿಗಳನ್ನು ಘಟನೆ ನಡೆದ ಸ್ಥಳಕ್ಕೆ ಕರೆತಂದಿದ್ದ ಪೊಲೀಸರು, ಸ್ಥಳ ಮಹಜರು ನಡೆಸುವ ಮೂಲಕ ಗ್ಯಾಂಗ್ ರೇಪ್ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಿದ್ದರು.
ಗಂಧದ ಮರ ಹುಡುಕಿ ಬಂದಿದ್ದರು
ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಆರೋಪಿಗಳು, ಘಟನೆ ನಡೆದ ಲಲಿತಾದ್ರಿಪುರದ ಚಾಮುಂಡಿ ಬೆಟ್ಟದ ತಪ್ಪಲಿಗೆ ಗಂಧದ ಮರ ಹುಡುಕಿಕೊಂಡು ಹೋಗಿದ್ದರು ಎಂಬುದು ಸ್ಥಳ ಮಹಜರು ಮಾಡುವ ವೇಳೆ ಗೊತ್ತಾಗಿದೆ. ಗಂಧದ ಮರಕ್ಕಾಗಿ ಗೂಡ್ಸ್ ಆಟೋದಲ್ಲಿ ಘಟನಾ ಸ್ಥಳಕ್ಕೆ ಹೋಗಿದ್ದ ಆರೋಪಿಗಳು, ಗಂಧದ ಮರ ಸಿಗದ ಕಾರಣ ಅಲ್ಲೇ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.
ಆದರೆ ನಿರ್ಜನ ಪ್ರದೇಶದಲ್ಲಿ ಕಿರಾತಕರು ಇರುವ ಬಗ್ಗೆ ಸುಳಿವೇ ಇಲ್ಲದ ಯುವಕ ಹಾಗೂ ಯುವತಿ, ಈ ವೇಳೆ ಅಲ್ಲಿಗೆ ಬಂದಿದ್ದಾರೆ. ಅಷ್ಟೊತ್ತಿಗೆ ಮದ್ಯದ ಅಮಲಿನಲ್ಲಿದ್ದ ಕಾಮುಕರು, ಮೊದಲಿಗೆ ಕಾಲೇಜು ಯುವಕ ಹಾಗೂ ಯುವತಿಯ ಬೆದರಿಸಿ ಹಣ ನೀಡುವಂತೆ ಪೀಡಿಸಿದ್ದಾರೆ.
ದರೋಡೆಯೇ ಕಾಯಕ
ದುಡ್ಡು ಕೊಡದಿದ್ದರೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಕೂಲಿ ಕೆಲಸಕ್ಕೆ ಮೈಸೂರಿಗೆ ಬರುತ್ತಿದ್ದ ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಪಾರ್ಟಿ ಮಾಡಿ ದರೋಡೆ ನಡೆಸುತ್ತಿದ್ದರು. ರಿಂಗ್ ರೋಡ್ನಲ್ಲಿ ಸಿಕ್ಕ ಸಿಕ್ಕದನ್ನು ದೋಚುತ್ತಿದ್ದರು. ಪ್ರಮುಖವಾಗಿ ಜೋಡಿ ಹಾಗೂ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದರು. ದುಡ್ಡಿಗಾಗಿ ಡಿಮ್ಯಾಂಡ್ ಮಾಡ್ತಿದ್ರು, ಹಣ ಕೊಡದಿದ್ದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.












Click it and Unblock the Notifications