ಮೈಸೂರಿಗರೇ,, ನೀವು ಹುಡುಕುತ್ತಿದ್ದ ದಂಪತಿ ಇವರೇನಾ..?
ಮೈಸೂರು, ಡಿಸೆಂಬರ್, 14: ಸೈಟ್ ಕೊಡಿಸುತ್ತೇವೆ.. ನಿಮ್ಮಲ್ಲಿರುವ ಹಣವನ್ನು ದ್ವಿಗುಣ ಮಾಡಿಕೊಡುತ್ತೇವೆ.. ಹೀಗೆಂದು ಮಾತಿನಲ್ಲೇ ಮರಳು ಮಾಡಿ ಕೋಟ್ಯಂತರ ರೂಪಾಯಿ ಹಣವನ್ನು ಎಗರಿಸಿ ಎಸ್ಕೇಪ್ ಆಗಿದ್ದ ಮೈಸೂರಿನ ದಂಪತಿ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ.
ಒಮ್ಮೆ ಕಣ್ಣಿಟ್ಟು ಚಿತ್ರದಲ್ಲಿರುವ ದಂಪತಿಯನ್ನು ನೋಡಿ. ನೀವೇನಾದರು ಇವರ ಮಾತಿನ ವಯ್ಯಾರಕ್ಕೆ ಬೆರಗಾಗಿ ಅಥವಾ ಸೈಟ್, ಹಣ ದ್ವಿಗುಣ ಮಾಡಿಕೊಡುತ್ತಾರೆಂಬ ನಂಬಿಕೆಯಿಂದ ಹಣ ಕೊಟ್ಟು ಕಳೆದುಕೊಂಡು ಅವರ ಹುಡುಕಾಟದಲ್ಲಿದ್ದರೆ ಈಗ ಮೈಸೂರಿನ ಕೃಷ್ಣರಾಜ ಠಾಣೆಯಲ್ಲಿ ದೂರು ನೀಡಬಹುದು.[ಎಟಿಎಂ ನಂಬರ್ ಕೊಟ್ಟು 14 ಸಾವಿರ ಕಳಕೊಂಡ್ರು]

ಜನರಿಗೆ ಕೋಟ್ಯಂತರ ರೂ. ವಂಚಿಸಿ ಪರಾರಿಯಾಗಿ ಇದೀಗ ಸಿಕ್ಕಿಬಿದ್ದಿರುವ ಈ ಖತರ್ನಾಕ್ ದಂಪತಿಯ ಹೆಸರು ಸತ್ಯನಾರಾಯಣ(56) ಮತ್ತು ಅನುರಾಧ(49). ಇವರು ಮೈಸೂರಿನಲ್ಲಿದ್ದಾಗ ಹಲವರಿಗೆ ಕಡಿಮೆ ದರದಲ್ಲಿ ಸೈಟ್ ಕೊಡಿಸುವ ಆಮಿಷವೊಡ್ಡಿ ಯಾವುದೋ ಒಂದು ಜಾಗ ತೋರಿಸಿ ಹಣ ಸಂಗ್ರಹಿಸುತ್ತಿದ್ದರು.
ಇನ್ನು ಕೆಲವರನ್ನು ಸಂಪರ್ಕಿಸಿ ನೀವು ಹಣವನ್ನು ಬ್ಯಾಂಕಿನಲ್ಲಿಡುವುದಕ್ಕಿಂತ ನಮಗೆ ಕೊಡಿ ಅದನ್ನು ಕೆಲವೇ ಸಮಯದಲ್ಲಿ ಒಂದಕ್ಕೆ ಎರಡರಷ್ಟು ದ್ವಿಗುಣ ಮಾಡಿಕೊಡುವುದಾಗಿ ಹೇಳಿ ಹಣ ಪಡೆಯುತ್ತಿದ್ದರು.
ಹೀಗೆ ಸಂಗ್ರಹಿಸಿದ ಹಣದ ಮೊತ್ತ 2ಕೋಟಿ ಎಂದು ಹೇಳಲಾಗಿದ್ದು, ಎಲ್ಲ ಹಣವನ್ನು ಸಂಗ್ರಹಿಸಿಕೊಂಡು ಜನರಿಗೆ ಮಾತ್ರ ಸುಳ್ಳು ಹೇಳುತ್ತಾ ದಿನ ಕಳೆಯತೊಡಗಿದ್ದರು. ಹಣ ನೀಡಿದ ಮಂದಿ ಮನೆ ಬಾಗಿಲಿಗೆ ಬರುತ್ತಿದ್ದಂತೆಯೇ ಮೈಸೂರಿನ ಚಾಮುಂಡಿಪುರಂನಲ್ಲಿದ್ದ ಮನೆಯನ್ನು ಬದಲಾಯಿಸಿದ್ದಾರೆ. ತುಂಬಾ ಒತ್ತಡ ತಂದವರಿಗೆ ಚೆಕ್ ನೀಡಿದ್ದಾರೆ.[ಎಟಿಎಂ ಯಂತ್ರದೊಳಗೆ ಕಾರ್ಡ್ ಸಿಕ್ಕಿಹಾಕೊಂಡ್ರೆ ಏನು ಮಾಡೋದು?]
ಇದಾದ ನಂತರ ಹಣ ನೀಡಿ ಮೋಸ ಹೋಗಿದ್ದ ಸಾರ್ವಜನಿಕರು ದಂಪತಿ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಆ ವೇಳೆಗಾಗಲೇ ದಂಪತಿ ಮೈಸೂರನ್ನು ಬಿಟ್ಟು ಬೆಂಗಳೂರು ಸೇರಿ ಬನಶಂಕರಿಯ ಕತ್ರಿಗುಪ್ಪೆಯಲ್ಲಿ ಮನೆ ಮಾಡಿಕೊಂಡಿದ್ದರು. ದಂಪತಿಯಿಂದ ಮೋಸ ಹೋಗಿದ್ದ ಮೈಸೂರಿನ ನಿವಾಸಿ ವಿಜಯಲಕ್ಷ್ಮೀ ಎಂಬುವವರು ಕೃಷ್ಣರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಂಚಕ ದಂಪತಿ ಪತ್ತೆಗಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎಚ್.ಟಿ.ಶೇಖರ್, ಕೃಷ್ಣರಾಜ ವಿಭಾಗದ ಎಸಿಪಿ ಸಿ.ಮಲ್ಲಿಕ್ ಮಾರ್ಗದರ್ಶನದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ಪಿಐ ಕೆ.ರಾಜೇಂದ್ರರವರ ಉಸ್ತುವಾರಿಯಲ್ಲಿ ಪಿಎಸ್ಐ ರವಿಶಂಕರ್ ಮತ್ತು ಸಿಬ್ಬಂದಿ ಎಂ.ಎಸ್.ಮೋಹನ್, ಎಸ್.ವಿಷಕಂಠ, ಸುಂದರಿ ಹಾಗೂ ರೂಪಾಂಜಲಿ ಅವರು ತನಿಖೆ ನಡೆಸಿ ಬೆಂಗಳೂರಿನಲ್ಲಿ ನೆಲೆಸಿರುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.












Click it and Unblock the Notifications