'ಹಣ ಅಂದರೆ ಹೆಣವೂ ಬಾಯಿ ಬಿಡುತ್ತೆ'; ಗಾದೆ ಸುಳ್ಳಾಗಿಸಿದ ಮೈಸೂರು ಪ್ರಕರಣ
ಮೈಸೂರು, ಆಗಸ್ಟ್ 7; ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬುದು ಹಳೆಯ ಮಾತು. ಆದರೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಘಟನೆ ಹಾಗೂ ಅದರ ಮುಂದುವರಿದ ಭಾಗವಾಗಿ ನಡೆದ ಈ ಬೆಳವಣಿಗೆ ಈ ಗಾದೆ ಮಾತನ್ನು ಸುಳ್ಳಾಗಿಸಿದೆ.
ಆಗಸ್ಟ್ 4ರಂದು ರಸ್ತೆಯಲ್ಲಿ ಹೋಗುತ್ತಿದ್ದಾರೆ ವಿದ್ಯಾರ್ಥಿಯೊಬ್ಬರಿಗೆ ಸುಮಾರು 60 ಸಾವಿರ ರೂಪಾಯಿಗಳಿದ್ದ ನೋಟಿನ ಕಂತೆಯೊಂದು ಸಿಕ್ಕಿತ್ತು. ಅದರೊಳಗೆ ಒಂದು ದೂರವಾಣಿ ಸಂಖ್ಯೆಯನ್ನು ಬರೆದಿದ್ದ ನೋಟ್ ಕೂಡ ಸಿಕ್ಕಿತ್ತು. ಆದರೆ ಆ ನಂಬರ್ ಲಭ್ಯ ಇಲ್ಲದ ಕಾರಣ ಸಿಕ್ಕಿದ ಹಣದ ಜತೆಗೆ ವಿದ್ಯಾರ್ಥಿ ಸೀದಾ ದೇವರಾಜ ಠಾಣಾ ಪೊಲೀಸ್ ಠಾಣೆಗೆ ಹೋಗಿದ್ದರು. ವಾರಸುದಾರರನ್ನು ಪತ್ತೆ ಹಚ್ಚಿ ನೀವೇ ಹಣ ಹಿಂತಿರುಗಿಸಿ ಎಂದು ನೈತಿಕ ಹೊಣೆಗಾರಿಕೆಯನ್ನು ಪೊಲೀಸರಿಗೆ ವರ್ಗಾಯಿಸಿದ್ದರು. ಅದನ್ನು 'ಒನ್ ಇಂಡಿಯಾ ಕನ್ನಡ' ವರದಿ ಕೂಡ ಮಾಡಿತ್ತು.
ರಸ್ತೆಯಲ್ಲಿ ಬಿದ್ದ ಕಂತೆ ಕಂತೆ ನೋಟನ್ನು ಪೊಲೀಸರಿಗೆ ಒಪ್ಪಿಸಿದರು
ಎಸ್ಬಿಐ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಶಿಯರ್ ರಾಘವೇಂದ್ರ ಅವರ ಮಗ ಅನಿರುದ್ಧ ಅವರ ಈ ನಡೆತೆ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿತ್ತು.
ಇದರ ಮುಂದುವರಿದ ಭಾಗವಾಗಿ ಮೈಸೂರು ದೇವರಾಜ ಠಾಣೆ ಪೊಲೀಸರು ಹಣದ ವಾರಸುದಾರರನ್ನು ಪತ್ತೆ ಮಾಡಿದ್ದಾರೆ. ಸಿಕ್ಕ ಹಣದ ಜೊತೆಯಲ್ಲಿದ್ದ ಭರ್ತಿ ಮಾಡಿದ ಬ್ಯಾಂಕಿನ ಚಾಲನ್ ಇದ್ದಿದ್ದರಿಂದ ಹಣದ ಮಾಲೀಕರನ್ನು ಹುಡುಕಲು ನೆರವಾಗಿದೆ. ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕರಾಗಿರುವ ಆರ್ಯನ್ ಎಂಬುವವರು ಹಣವನ್ನು ಕಳೆದುಕೊಂಡವರು ಎಂಬುದು ಗೊತ್ತಾಗಿದೆ. ಅವರನ್ನು ಸಂಪರ್ಕಿಸಿದ ಪೊಲೀಸರು ಇದೀಗ ಹಣವನ್ನು ಮರಳಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಯೊಬ್ಬರು ಹೊರಿಸಿದ್ದ ಗುರುತರವಾದ ಹೊಣೆಗಾರಿಕೆಯನ್ನು ಪೊಲೀಸರು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಇದನ್ನು ಸಾರ್ವಜನಿಕಗೊಳಿಸಲು ತೀರ್ಮಾನಿಸಿದ ಪೊಲೀಸರು ಹಣವನ್ನು ತಂದುಕೊಟ್ಟಿದ್ದ ರಾಘವೇಂದ್ರ ಹಾಗೂ ಅವರ ಮಗ ಅನಿರುದ್ಧ್ ಅವರನ್ನು ಠಾನೆಗೆ ಕರೆಸಿ, ಅವರ ಮೂಲಕವೇ ವಾರಸುದಾರರಿಗೆ ಹಣವನ್ನು ಹಿಂತಿರುಗಿಸಿದ್ದಾರೆ. ಪೊಲೀಸ್ ಆಯುಕ್ತ ಕೆ. ಟಿ. ಬಾಲಕೃಷ್ಣ, "ಇದೊಂದು ಮಾದರಿ ಬೆಳವಣಿಗೆ,'' ಎಂದಿದ್ದಾರೆ.