ಜಂಬೂಸವಾರಿಯಲ್ಲಿ ಕಲಾವಿದರ ಕಡೆಗಣನೆ: ಜಾನಪದ ಕಲಾವಿದರ ಸಂಭಾವನೆ ಇಷ್ಟೊಂದು ಕಮ್ಮಿನಾ..?
ಮೈಸೂರು, ಸೆಪ್ಟೆಂಬರ್ 26: ಪ್ರತಿ ಬಾರಿ ದಸರಾ ಮಹೋತ್ಸವ ವೇಳೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜಾನಪದ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಈ ಬಾರಿಯಾದರೂ ಕಲಾವಿದರಿಗೆ ಸೂಕ್ತ ಸೌಲಭ್ಯ ಒದಗಿಸಬೇಕೆಂದು ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಜಾನಪದ ಕಲಾವಿದರ ಒಕ್ಕೂಟ ಮನವಿ ಮಾಡಿದೆ.
ಒಕ್ಕೂಟದ ಅಧ್ಯಕ್ಷ ಉಡಿಗಾಲ ಮಹದೇವಪ್ಪ ಅವರು ಪ್ರತಿ ಬಾರಿಯೂ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಈ ಬಾರಿಯೂ ಸಲಹೆ, ಸೂಚನೆ ಸಭೆಗೆ ಕಲಾವಿದರನ್ನು ಆಹ್ವಾನಿಸಿಲ್ಲ. ನೀಡುವ ಸಂಭಾವನೆಯೂ ಕಡಿಮೆ, ಜೊತೆಗೆ ಉಳಿದುಕೊಳ್ಳುವ ಚೌಲ್ಟ್ರಿಗಳಲ್ಲಿ ಸೂಕ್ತ ಶೌಚಾಲಯ, ಊಟ ತಿಂಡಿ ಮೊದಲಾದ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಈ ಬಾರಿಯ ದಸರಾ ವೇಳೆಯಲ್ಲಾದರೂ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಪೊಲೀಸ್ ಆಯುಕ್ತರು ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಓರ್ವ ಕೂಲಿ ಕಾರ್ಮಿಕ ಸಹಾ ನಿತ್ಯ ಒಂದೂವರೆ ಸಾವಿರ ಗಳಿಸುತ್ತಾನೆ. ಆದರೆ, ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜಾನಪದ ಕಲಾವಿದರಿಗೆ ಎರಡು ದಿನಕ್ಕೆ ಕೇವಲ 1750 ರೂಪಾಯಿ ನೀಡಲಾಗುತ್ತಿದೆ. ನಮಗೆ ವೇಷ ಭೂಷಣ, ಜಾನಪದ ಸಾಮಗ್ರಿ ಹೊತ್ತು ಬಾಡಿಗೆ ವಾಹನದಲ್ಲಿ ಬರುವ ವೆಚ್ಚವೇ ಅಧಿಕವಾಗಿರುತ್ತದೆ. ಹೀಗಾಗಿ ಕನಿಷ್ಠ ತಲಾ ಐದು ಸಾವಿರ ರೂಪಾಯಿ ನೀಡಬೇಕು.
ಸಿಎಂ ಈ ಬಾರಿ ದಸರಾ ವೆಚ್ಚಕ್ಕಾಗಿ ಹತ್ತು ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಿದ್ದಾರೆ. ಹೀಗಾಗಿ ತಲಾ ಐದು ಸಾವಿರ ರೂಪಾಯಿ ನೀಡುವುದರಿಂದ ಕೇವಲ 35 ಲಕ್ಷ ಮಾತ್ರ ವೆಚ್ಚವಾಗುತ್ತದೆ. ಹಾಡುವ ಕಲಾವಿದರಿಗೆ ಲಕ್ಷಾಂತರ ರೂಪಾಯಿ ನೀಡಿ ಕರೆಸಿಕೊಳ್ಳುವವರು ಜಾನಪದ ಕಲಾವಿದರ ಬಗ್ಗೆ ತಾರತಮ್ಯ ತೋರುವುದು ಏಕೆ ಎಂದು ಜಾನಪದ ಕಲಾವಿದರ ಒಕ್ಕೂಟ ಪ್ರಶ್ನಿಸಿದ್ದಾರೆ.
ದಸರಾ ಉಪ ಸಮಿತಿಗಳಲ್ಲಿ ಕಲಾವಿದರೇ ಇರುವುದಿಲ್ಲ. ಎಲ್ಲ ಅಧಿಕಾರಿಗಳ ದರ್ಬಾರ್ ಆಗಿರುತ್ತದೆ. ಹೀಗಾದರೆ ನಮ್ಮ ಸಂಕಷ್ಟ ಕೇಳುವವರು ಯಾರು, ನಮ್ಮ ಸಮಸ್ಯೆ, ಬೇಡಿಕೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಪೊಲೀಸ್ ಆಯುಕ್ತರು ಗಮನ ಹರಿಸಬೇಕು ಎಂದು ಕೋರಿ ವಿಶೇಷ ಮನವಿ ಮಾಡಿದ್ದಾರೆ.












Click it and Unblock the Notifications